ಬರವಣಿಗೆ ವ್ಯವಹಾರಿಕವಾಗುತ್ತಿದೆ, ವಿವಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ

KannadaprabhaNewsNetwork | Published : May 18, 2024 12:30 AM

ಸಾರಾಂಶ

ಮೂರು ವರ್ಷಗಳ ಹಿಂದೆ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ನಮ್ಮ ಕನ್ನಡ ವಿವಿ ಕುಲಸಚಿವರ ಕಚೇರಿಗೆ ಟನ್ ಗಟ್ಟಲೆ ವಿವರಗಳನ್ನು ಹೊತ್ತ ಅರ್ಜಿಗಳು ಬಂದಿದ್ದವು. ಅನೇಕರ ಹೆಸರನ್ನು ಕೇಳದವರೂ ಅರ್ಜಿ ಹಾಕಿದ್ದರು. ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ಬರೆಯುವವರು ಲೈಕ್, ಕಮೆಂಟುಗಳನ್ನು ಕಂಡು ಸಂಶೋಧಕ, ವಿದ್ವಾಂಸ ಎಂದು ತಿಳಿಯುತ್ತಾರೆ.

- - ಡಾ. ಮಾಧವ ಪೆರಾಜೆ

- ಡಾ.ಬಿ. ಪವಿತ್ರಾ ಅವರ ಕಡಲೊಳಗಿನ ಕಿಡಿಗಳು ಎಂಬ ಸಂಶೋಧನ ಮಹಾಪ್ರಬಂಧ ಬಿಡುಗಡೆಫೋಟೋ- 17ಎಂವೈಎಸ್6

ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಡಾ.ಬಿ. ಪವಿತ್ರಾ ಅವರ ಕಡಲೊಳಗಿನ ಕಿಡಿಗಳು ಎಂಬ ಸಂಶೋಧನ ಮಹಾಪ್ರಬಂಧವನ್ನು ಡಾ. ಮಾಧವ ಪೆರಾಜೆ ಬಿಡುಗಡೆಗೊಳಿಸಿದರು. ಪ್ರೊ. ರಾಜಪ್ಪ ದಳವಾಯಿ, ಡಾ.ಎನ್.ಎಂ. ತಳವಾರ, ಡಾ. ಚಿಕ್ಕಮಗಳೂರು ಗಣೇಶ್, ಯು.ಎಸ್. ಮಹೇಶ್ ಇದ್ದರು.

----

ಕನ್ನಡಪ್ರಭ ವಾರ್ತೆ ಮೈಸೂರು

ಬರವಣಿಗೆಯು ವ್ಯವಹಾರಿಕವಾಗುತ್ತಿದೆ. ಬಿಸಿನೆಸ್ ಸೆಂಟರ್ ಗಳಲ್ಲಿ ಇರಬೇಕಾದವರು ಈಗ ವಿಶ್ವವಿದ್ಯಾನಿಲಯಗಳಲ್ಲಿ ಇದ್ದಾರೆ. ಇಂಥವರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ವಿಷಾದಿಸಿದರು.

ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಡಾ.ಬಿ. ಪವಿತ್ರಾ ಅವರ ಕಡಲೊಳಗಿನ ಕಿಡಿಗಳು ಎಂಬ ಸಂಶೋಧನ ಮಹಾಪ್ರಬಂಧವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಾಧ್ಯಾಪಕರಾಗಿ ಬಡ್ತಿ ಹೊಂದಲು ತಮ್ಮದೇ ಗುಂಪಿನ ಪ್ರಕಾಶನ ಮೂಲಕ ಪುಸ್ತಕ ಪ್ರಕಟಿಸಿ, ಸಂಶೋಧನ ಲೇಖನಗಳನ್ನು ಪ್ರಕಟಿಸುವ ಮೂಲಕ ವಿಶ್ವವಿದ್ಯಾನಿಲಯಗಳಿಗೆ ನೇಮಕಗೊಳ್ಳುತ್ತಾರೆ ಎಂದರು.

ಮೂರು ವರ್ಷಗಳ ಹಿಂದೆ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ನಮ್ಮ ಕನ್ನಡ ವಿವಿ ಕುಲಸಚಿವರ ಕಚೇರಿಗೆ ಟನ್ ಗಟ್ಟಲೆ ವಿವರಗಳನ್ನು ಹೊತ್ತ ಅರ್ಜಿಗಳು ಬಂದಿದ್ದವು. ಅನೇಕರ ಹೆಸರನ್ನು ಕೇಳದವರೂ ಅರ್ಜಿ ಹಾಕಿದ್ದರು. ವಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ಬರೆಯುವವರು ಲೈಕ್, ಕಮೆಂಟುಗಳನ್ನು ಕಂಡು ಸಂಶೋಧಕ, ವಿದ್ವಾಂಸ ಎಂದು ತಿಳಿಯುತ್ತಾರೆ. ವಾಟ್ಸ್ ಆಪ್, ಫೇಸ್ ಬುಕ್ ನೆಚ್ಚದೆ ಸಂಶೋಧನ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಬೇಕು ಎಂದು ಅವರು ಸಲಹೆ ನೀಡಿದರು.

ಜಾತಿಯನ್ನು ವಿರೋಧಿಸಿ ಮಾತನಾಡುವ ಶೇ.90 ರಷ್ಟು ಜನರು ಜಾತಿಗಳ ಪರವಾಗಿ ಇರುತ್ತಾರೆ. ಹೀಗೆಯೇ ಮಹಿಳಾ ದೌರ್ಜನ್ಯ ಕುರಿತು ಮಾತನಾಡುವವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿಗಳಾಗಿದ್ದವರು ಕನ್ನಡ ವಿವಿ ಕುಲಪತಿ ಮನೆಗೆ ಬಂದಾಗ ಊಟ ಮಾಡಲಿಲ್ಲ ಅಂದರೆ ಅಸ್ಪೃಶ್ಯತೆ ಈಗಲೂ ಜಾರಿಯಲ್ಲಿದೆ ಎನ್ನುವುದು ಸ್ಪಷ್ಟ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೃತಿ ಕುರಿತು ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ. ರಾಜಪ್ಪ ದಳವಾಯಿ ಮಾತನಾಡಿ, ಪವಿತ್ರಾ ಅವರ ಈ ಕೃತಿಯು ಕನ್ನಡ ಹಾಗೂ ತೆಲುಗು ದಲಿತ ಸಾಹಿತ್ಯದ ವೈಶಿಷ್ಟ್ಯಗಳನ್ನು ದಾಖಲಿಸಿದೆ. ಇದನ್ನು ಓದಿದಾಗ ಕಾದಂಬರಿ ಓದಿದ ಅನುಭವವಾಗುತ್ತದೆ.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎನ್.ಎಂ. ತಳವಾರ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಚಿಕ್ಕಮಗಳೂರು ಗಣೇಶ್, ರೂಪ ಪ್ರಕಾಶನದ ಯು.ಎಸ್. ಮಹೇಶ್ ಇದ್ದರು. ಟಿ.ಆರ್. ಬಸವರಾಜ ಪ್ರಾರ್ಥಿಸಿದರು. ಆರ್. ಚಲಪತಿ ಸ್ವಾಗತಿಸಿದರು. ಡಾ. ಅನ್ನಪೂರ್ಣ ನಿರೂಪಿಸಿದರು.

Share this article