ರಸ್ತೆ ನಿಯಮ ಕಡ್ಡಾಯ ಪಾಲನೆ ಅತ್ಯವಶ್ಯ: ಡಿವೈಎಸ್‌ಪಿ ಶಾಂತವೀರ

KannadaprabhaNewsNetwork |  
Published : Jan 18, 2025, 12:46 AM IST
 ನಗರದ ಹೊರವಲಯದ ಮುಧೋಳ ರಸ್ತೆಯ ಸಹಾಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಡಿವಾಯ್‌ಎಸ್‌ಪಿ ಶಾಂತವೀರ ಈ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿ ವರ್ಷ ದೇಶದಲ್ಲಿ 1.80 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. 40 ರಿಂದ 50 ಸಾವಿರ ಬೈಕ್ ಸವಾರರು ರಸ್ತೆ ಅಪಘಾತದಲ್ಲಿ, ಅದರಲ್ಲೂ ಶೇ.60ರಷ್ಟು ಯುವಕರು ಸಾವನ್ನಪ್ಪುತ್ತಿರುವುದು ಕಳವಳ ಸಂಗತಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಕೇವಲ ವಾಹನ ಚಾಲನಾ ಪರವಾನಗಿ ಪಡೆದರೆ ಸಾಲದು, ಕಡ್ಡಾಯವಾಗಿ ಅದರ ನಿಯಮ ಪಾಲನೆ ಮಾಡುವುದು ಅವಶ್ಯವಾಗಿದೆ. ಇದರಿಂದ ಅಪಘಾತ ತಪ್ಪಿಸಲು ಸಾಧ್ಯವಾಗುವುದು ಎಂದು ಡಿವೈಎಸ್ಪಿ ಶಾಂತವೀರ ಹೇಳಿದರು.

ನಗರದ ಹೊರವಲಯದ ಮುಧೋಳ ರಸ್ತೆಯ ಸಹಾಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಸಾರಿಗೆ ಇಲಾಖೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಲ್ಮೆಟ್ ಇಲ್ಲದೆ, ಸರಾಯಿ ಕುಡಿದು, ಅತೀ ವೇಗದಿಂದ ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಪ್ರತಿ ವರ್ಷ ದೇಶದಲ್ಲಿ 1.80 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. 40 ರಿಂದ 50 ಸಾವಿರ ಬೈಕ್ ಸವಾರರು ರಸ್ತೆ ಅಪಘಾತದಲ್ಲಿ, ಅದರಲ್ಲೂ ಶೇ.60ರಷ್ಟು ಯುವಕರು ಸಾವನ್ನಪ್ಪುತ್ತಿರುವುದು ಕಳವಳ ಸಂಗತಿ ಎಂದರು.

ಹೆಲ್ಮೇಟ್, ಸೀಟ್ ಬೇಲ್ಟ್ ಇಲ್ಲದೆ ವಾಹನ ಓಡಿಸುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಕುಟುಂಬಕ್ಕೆ ಆಸರೆಯಾಗಿದ್ದ ಯಜಮಾನ ಅಪಘಾತದಲ್ಲಿ ತೀರಿ ಹೋದರೆ ಕುಟುಂಬದಲ್ಲಿ ತಂದೆ ತಾಯಿ ಮಕ್ಕಳು ಹೆಣ್ಣುಮಕ್ಕಳು ಅನಾಥರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಜೀವದ ರಕ್ಷಣೆಗೆ ಸರ್ಕಾರ ರಸ್ತೆಯ ನಿಯಮ ಜಾರಿಮಾಡಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ಪ್ರತಿಯೊಬ್ಬರು ಹೆಲ್ಮೇಟ್ ಮತ್ತು ಸೀಟ್ ಬೇಲ್ಟ್ ಹಾಕಿಕೊಳ್ಳುವುದನ್ನು ಮರೆಯಬಾರದು ಎಂದು ಮನವಿ ಮಾಡಿದರು.

ಹುನ್ನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ವಿ ಅಸ್ಕಿ ಮಾತನಾಡಿ, ಸುರಕ್ಷತೆ ನಿಯಮ ಅವಶ್ಯವಾಗಿವೆ. ನಿಯಮಗಳೆ ನಮ್ಮ ಸಂವಿಧಾನ. ನಿಯಮವಿಲ್ಲದೆ ಬದುಕು ನಡೆಯುವುದಿಲ್ಲ. ನಿಯಮಗಳು ನಮ್ಮನ್ನು ಏಚ್ಚರಿಕೆ ಮಾಡುತ್ತವೆ. ಜೀವನ ಸರಿಯಾಗಿದ್ದರೆ ಮಾತ್ರ ಇಡೀ ಕುಟುಂಬದ ವ್ಯವಸ್ಥೆ ಸರಿಯಾಗಿರುತ್ತದೆ. ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಅರಿವು ಜಾಗೃತಿ ಮೂಡಿಸುವದು ಅವಶ್ಯವಾಗಿದೆ. ಇದರಿಂದ ಅಪಘಾತ ತಡೆಯಲು ಸಾಧ್ಯವಾಗುವದು ಎಂದರು.

ವಾಹನ ಹಿರಿಯ ತನಿಖಾಧಿಕಾರಿ ಸದಾಶಿವ ಮರಿಲಿಂಗಣ್ಣವರ ಮಾತನಾಡಿ, ವಾಹನ ನಿಮ್ಮದಾದರೆ ರಸ್ತೆ ನಿಮ್ಮದಲ್ಲ. ನಿಧಾನವೇ ಪ್ರಧಾನವೆಂಬುವುದನ್ನು ಸ್ಮರಿಸಿಕೊಂಡು ವಾಹನ ಚಾಲನೆ ಮಾಡಿದರೆ ತಮಗೂ ಸುರಕ್ಷತೆ ಮತ್ತು ಕುಟುಂಬಕ್ಕೆ ಆಸರೆಯಾಗಿ ಬದುಕು ಸಾಗಿಸಬಹುದು ರಸ್ತೆಯ ನಿಯಮ ಮತ್ತು ಚಿಹ್ನೆಗಳನ್ನು ಸರಿಯಾಗಿ ಗಮನದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡಬೇಕು. ವಾಹನ ಚಲಿಸುವಾಗ ಮೊಬೈಲ್ ಬಳಕೆ, ಮದ್ಯಪಾನ ಮಾಡಬಾರದು ಇದರಿಂದ ಅಪಘಾತ ತಡೆಯಲು ಸಾಧ್ಯವಾಗುವುದು ಎಂದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯರಾಂ ನಾಯಕ ಮಾತನಾಡಿ, ಶರೀರ ದೇವರು ಕೊಟ್ಟ ಕೊಡುಗೆ ಇದನ್ನು ಸರಿಯಾಗಿ ಉಳಿಸಿಕೊಳ್ಳಬೇಕು. ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಿದರೆ ಜೀವಕ್ಕೆ ಮತ್ತು ಕುಟುಂಬಕ್ಕೆ ಹಾನಿ ಉಂಟಾಗುತ್ತದೆ. 18 ವರ್ಷದೊಳಗಿನ ಮಕ್ಕಳ ಕೈಯಲ್ಲಿ ವಾಹನವನ್ನು ನೀಡಬಾರದು. 18 ವರ್ಷ ಪೂರ್ಣಗೊಂಡ ನಂತರ ವಾಹನ ಚಾಲನಾ ಪರವಾನಗಿ ಪಡೆದು ಮತ್ತು ನಿಯಮ ಪರಿಪಾಲನೆ ಮಾಡುವುದು ಕಡ್ಡಾಯವಾಗಿದೆ. ಅದನ್ನು ಪಾಲಕರು ಮನೆಯಲ್ಲಿ ತಿಳಿಹೇಳುವುದು ಅವಶ್ಯವಾಗಿದೆ ಎಂದರು.

ವೇದಿಕೆಯಲ್ಲಿ ವಾಹನ ತನಿಖಾಧಿಕಾರಿ ಭಾಗ್ಯಶ್ರೀ ಕಟ್ಟಿಮನಿ ಇದ್ದರು. ಸುದರ್ಶನ ಚಲವಾದಿ ಸ್ವಾಗತಿಸಿ, ನಿರೂಪಿಸಿದರು. ಡಿ.ಬಿ ಚನ್ನಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಭದ್ರೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''