ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ರೋಡ್ ಶೋ

KannadaprabhaNewsNetwork |  
Published : Apr 18, 2024, 02:27 AM ISTUpdated : Apr 18, 2024, 12:21 PM IST
17ಕೆಎಂಎನ್ ಡಿ25 | Kannada Prabha

ಸಾರಾಂಶ

ರಾಜಕಾರಣದ ಸಂಬಂಧ ನನಗೆ ಹೊಸದಲ್ಲ. ನನ್ನ ಸ್ನೇಹಿತರು, ಅಣ್ಣ ಮತ್ತು ಸಂಬಂಧಿಕರು ರಾಜಕೀಯದಲ್ಲಿದ್ದಾರೆ. ನನ್ನ ಮನಸ್ಸಿನಲ್ಲಿ ಸಿಹಿ ಕನಸುಗಳಿದ್ದರೂ ಅದನ್ನು ನನಸು ಮಾಡಲು ರಾಜಕೀಯ ಅಧಿಕಾರ ಇಲ್ಲ. ಜಿಲ್ಲೆಯ ಜನ ಅಧಿಕಾರದ ಆಸಕ್ತಿ ನೀಡಿದರೆ ನನ್ನ ಕನಸಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿತೋರಿಸುತ್ತೇನೆ.

  ಕೆ.ಆರ್.ಪೇಟೆ :  ತಾಲೂಕಿನ ವಿವಿಧ ಗ್ರಾಪಂ ಕೇಂದ್ರಗಳಲ್ಲಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ತಾಲೂಕಿನ ತೆಂಡೇಕೆರೆ, ಮುರುಕನಹಳ್ಳಿ, ಶೀಳನೆರೆ, ಸಿಂಧುಘಟ್ಟ ಮತ್ತು ಹರಳಹಳ್ಳಿ ಗ್ರಾಪಂ ವ್ಯಾಪ್ತಿ ಪ್ರಚಾರ ನಡೆಸಿ ಮಾತನಾಡಿದ ಸ್ಟಾರ್ ಚಂದ್ರು, ನನಗೆ ಯಾವುದೇ ಹಣದ ಅವಶ್ಯಕತೆಯಿಲ್ಲ. ಜನರ ಸೇವೆ ಮಾಡುವ ಸದುದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು ಜಿಲ್ಲೆಯ ನಾಗಮಂಗಲ ತಾಲೂಕಿನವನು. ಒಮ್ಮೆ ನನಗೆ ಮತನೀಡಿ ಅಶೀರ್ವಾದ ಮಾಡಿದರೆ ಜಿಲ್ಲೆಯ ಜನರ ಋಣ ತೀರಿಸುತ್ತೇನೆ ಎಂದರು.

ರಾಜಕಾರಣದ ಸಂಬಂಧ ನನಗೆ ಹೊಸದಲ್ಲ. ನನ್ನ ಸ್ನೇಹಿತರು, ಅಣ್ಣ ಮತ್ತು ಸಂಬಂಧಿಕರು ರಾಜಕೀಯದಲ್ಲಿದ್ದಾರೆ. ನನ್ನ ಮನಸ್ಸಿನಲ್ಲಿ ಸಿಹಿ ಕನಸುಗಳಿದ್ದರೂ ಅದನ್ನು ನನಸು ಮಾಡಲು ರಾಜಕೀಯ ಅಧಿಕಾರ ಇಲ್ಲ. ಜಿಲ್ಲೆಯ ಜನ ಅಧಿಕಾರದ ಆಸಕ್ತಿ ನೀಡಿದರೆ ನನ್ನ ಕನಸಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿತೋರಿಸುತ್ತೇನೆ ಎಂದರು.

ಕಾಂಗ್ರೆಸ್ ಬಡವರ ಪಕ್ಷ. ಸರ್ವ ಜನರನ್ನೂ ಸಮತಾ ಭಾವದಿಂದ ನೋಡುತ್ತಿದೆ. ಬಡವರಿಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರು, ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ನೆರವಿಗೆ ನಿಂತಿದೆ. ಈ ಯೋಜನೆಗಳನ್ನು ದೇಶದಾದ್ಯಂತ ವಿಸ್ತರಿಸಲು ಕಾಂಗ್ರೆಸ್ ಪಕ್ಷ ಸಂಕಲ್ಪ ಮಾಡಿದೆ. ಅದಕ್ಕಾಗಿ ನನ್ನನ್ನು ಲೋಕಸಭೆಗೆ ಕಳುಹಿಸುವ ಜಿಲ್ಲೆಯ ಜನರ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಲಿ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿ ಜನಸೇವೆ ಮಾಡಲು ಅವರಿಗೊಂದು ಅಧಿಕಾರವಿದೆ. ಜಿಲ್ಲೆಯ ಜನ ನಮ್ಮ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತಹಾಕಿ ಹೊಸಬರಿಗೊಂದು ಜನಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ತಾಪಂ ಮಾಜಿ ಸದಸ್ಯ ಮುರುಕನಹಳ್ಳಿ ವಿಜಯಕುಮಾರ್, ಮುಖಂಡರಾದ ಕವಿತಾ ಬಾಲರಾಜು, ಹೊನ್ನೇನಹಳ್ಳಿ ಕೃಷ್ಣೇಗೌಡ, ಊಚನಹಳ್ಳಿ ನಟರಾಜು, ಶಿವು ಮತ್ತು ಸತೀಶ್ ಅವರನ್ನು ತೆರೆದ ವಾಹನದಲ್ಲಿಯೇ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ದೇಶದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇಪ್ಡೆಯಾಗುವಂತೆ ಕರೆ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಎಂ.ಡಿ.ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ