ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ವಿಧೇಯಕವನ್ನು ತಿರಸ್ಕರಿಸುವಂತೆ ಆಗ್ರಹಿಸಿದರು.
ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸ್ಥಾನಗಳಲ್ಲಿನ ನೇಮಕಾತಿ ಅಥವಾ ಆ ಹುದ್ದೆಗಳಿಗೆ ಮೀಸಲಿರಿಸಿದ ಸಂಖ್ಯೆಗೆ ಯಾವುದೇ ರೀತಿಯಲ್ಲಿ ಬಾಧಕವನ್ನುಂಟು ಮಾಡತಕ್ಕದ್ದಲ್ಲ ಎಂಬ ಅಂಶವು ಪ್ರಸ್ತುತ ರಾಜ್ಯಸರ್ಕಾರ ಸಿದ್ಧಪಡಿಸಿರುವ ವಿಧೇಯಕದಲ್ಲಿ ಸೇರ್ಪಡೆಯಾಗಿರುವುದಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರು ಸಾಮಾನ್ಯವರ್ಗದಲ್ಲಿ ಆಯ್ಕೆಯಾದವರನ್ನು ಶೇ.೧೭ ಪ್ರಾತಿನಿಧ್ಯದಲ್ಲಿ ಸೇರಿಸಿ ಲೆಕ್ಕ ಹಾಕುವ ಸಾಧ್ಯತೆ ಇರುತ್ತದೆ. ಇದು ಪ.ಜಾತಿಯವರಿಗೆ ಪೂರಕವಾಗಿಲ್ಲದೆ ಇರುವುದರಿಂದ ತಿರಸ್ಕರಿಸುವುದು ಸೂಕ್ತ ಎಂದು ಒತ್ತಾಯಿಸಿದರು.ಬಲಗೈ ಸಮುದಾಯಕ್ಕೆ ಸೇರಿದ ಜನಸಂಖ್ಯೆಯನ್ನು ವಿಭಜಿಸಿ ನ್ಯಾ. ನಾಗಮೋಹನ್ದಾಸ್ರವರು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದು, ವರದಿಯಲ್ಲಿ ಬಲಗೈ ಜಾತಿಯ ಜನಸಂಖ್ಯೆಯನ್ನು ೩೦,೦೮,೬೩೩ ಮಿತಿಗೊಳಿಸಿರುವುದು. ಬಲಗೈ ಜಾತಿಯ ಒಟ್ಟು ಜನಸಂಖ್ಯೆ ನಾಗಮೋಹನ್ದಾಸ್ ಆಯೋಗದ ಪ್ರಕಾರ ೩೬,೪೩,೬೬೦ ಇರುವಂತೆ ಮೀಸಲಾತಿ ಪ್ರಕರಣವನ್ನು ಪರಿಷ್ಕರಿಸಿದ ನಂತರ ಮಸೂದೆ ಸಿದ್ಧಪಡಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ಒಳ ಮೀಸಲಾತಿ ಗೊಂದಲಗಳನ್ನು ಬಗೆಹರಿಸಿ ನ್ಯಾಯಾಲಯದ ಅಡೆತಡೆಗಳನ್ನು ನಿವಾರಣೆಯಾಗುವವರೆಗೆ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಪದ್ಧತಿಯನ್ನು ಮರು ಜಾರಿ ಮಾಡಲು ಸೂಚಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ ೨೦೨೫ನ್ನು ವಾಪಸ್ಸು ಕಳುಹಿಸಬೇಕು ಎಂದು ಒತ್ತಾಯಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮುಖಂಡರಾದ ಸುರೇಶ್ಕಂಠಿ, ನಿತ್ಯಾನಂದ, ಸಾತನೂರು ಜಯರಾಂ, ಪ್ರೊ.ಹುಲ್ಕೆರೆ ಮಹದೇವು, ದೀಪಕ್, ಶ್ರೀಧರ್, ಹರೀಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.