ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆಗಾಯಕಿ ಜೋಗಿ ಸುನೀತಾ ಅವರಿಗೆ ವಿಶ್ವ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಜೋಗಿ ಸುನೀತಾ, ಎಲ್ಲೋ ಜೋಗಪ್ಪ ನಿನ್ನರಮನೆ, ತೂಗು ಮಂಚದಲ್ಲಿ ಕೂತು, ಹಾಡು ಹಳೆಯದಾದರೇನು ಸೇರಿದಂತೆ ಹಲವು ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಬಳಿಕ ಮಾತನಾಡಿದ ಜೋಗಿ ಸುನೀತಾ, ಮಂಡ್ಯ ಒಂದು ರೀತಿಯಲ್ಲಿ ನನಗೆ ತವರುಮನೆ. ನನ್ನ ಸೋದರತ್ತೆ ಮಂಡ್ಯದ ಸ್ವರ್ಣಸಂದ್ರದಲ್ಲಿದ್ದರು. ಸಕ್ಕರೆ ಕಾರ್ಖಾನೆಯಲ್ಲಿ ನಮ್ಮ ಮಾವ ಕೆಲಸ ಮಾಡುತ್ತಿದ್ದರು. ಬೇಸಿಗೆ ರಜೆಗೆ ನಾವೆಲ್ಲಾ ಮಂಡ್ಯಕ್ಕೆ ಬರುತ್ತಿದ್ದೆವು. ಹಾಗಾಗಿ ನಾನು ಬಹಳ ಪ್ರೀತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಲವಾರು ವೇದಿಕೆಗಳನ್ನು ಹಂಚಿಕೊಂಡಿದ್ದೇನೆ. ಅವರ ಆಶೀರ್ವಾದ ನಮಗೆ ಸಿಕ್ಕಿದ್ದೇ ನಮ್ಮ ಪುಣ್ಯ ಎಂದು ಭಾವುಕರಾಗಿ ಹೇಳಿದರು.
ದೇವರಕಾಡಿನಲ್ಲಿ ಯಾವುದೇ ಸಂಗೀತ ಕಾರ್ಯಕ್ರಮ ನಡೆಸಿದರೂ ಬಳಗವು ನೆರವಾಗುತ್ತದೆ, ಅರೋಗ್ಯ ಹೆಚ್ಚಿಸಿಕೊಳ್ಳುವವರು ಅರ್ಧಗಂಟೆ ಇಲ್ಲಿಗೆ ಬಂದು ಕಳಿತು ಶುದ್ಧ ಆಮ್ಲಜನಕ ಪಡೆದು ೩೦ದಿನ ಆಯಸ್ಸು ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಆಲಯ ಮೃಗಾಲಯ, ಭೂಮಿ ಬಣ್ಣದ ಬುಗರಿ, ಆಕಾಶ ದೀಪವು ನೀನು ನಿನ್ನ ಕಂಡಾಗ, ಹೊಸ ಬಾಳಿಗೆ ನೀ ಜೊತೆಯಾದೆ, ನಗುವ ನಯನ, ಕೇಳದೆ ನಿಮಗೀತ, ಜೊತೆಯಾಗಿ ಹಿತವಾಗಿ ಸೇರಿದಂತೆ ಪ್ರತಿಭಾಂಜಲಿಯ ಡೇವಿಡ್, ಹಂಸರೇಖ, ಶಂಕರ್, ವಿಶ್ವಾಸ್, ಪ್ರಸನ್ನ, ಮೋಹನ್, ವರ್ಷಾ, ಡಾ.ರಿಷಿಕೇಶ್ ಸೇರಿದಂತೆ ಹಲವಾರು ಗಾಯಕರು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.