ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂಬ ಹೆಸರು ಬರಲು ಕಾರಣೀಭೂತವಾದ, ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ ಸೆ.22ರಿಂದ ಅ.3ರವರೆಗೆ ನಡೆಯಲಿದೆ.ಸಾವಿರಾರು ವರ್ಷಗಳ ಇತಿಹಾಸವಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನವು ದೆಹಲಿಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಪುರಾತನ ಕಾಲದ ಬಿಂಬರೂಪದ ಲಿಂಗ ಇಲ್ಲಿನ ವಿಶೇಷ, ಇದರಲ್ಲಿನ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗವೆಂದು ಆರಾಧಿಸಲ್ಪಡುತ್ತಿದೆ.ಏನೇನು ಕಾರ್ಯಕ್ರಮ?:
ವಿಜಯ ದಶಮಿಯಂದು 500ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರಂಭ ನೆರವೇರಿಸಲಾಗುತ್ತದೆ. ಮಹಾನವಮಿಯಂದು ಚಂಡಿಕಾಹೋಮ 10 ಸಾವಿರಕ್ಕೂ ಮಿಕ್ಕಿ ವಾಹನ ಪೂಜೆ (ಆಯುಧ ಪೂಜೆ), ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನೆರವೇರಿಸಲಾಗುವುದು. ದೂರದೂರುಗಳಿಂದ ಬರುವ ಭಕ್ತರು ಪ್ರತಿದಿನ 30-40ರವರೆಗೆ ಸ್ವಯಂವರ ಪಾರ್ವತಿ ಪೂಜೆ ಸಲ್ಲಿಸುತ್ತಾರೆ. ಪ್ರತಿ ತಿಂಗಳ ಮೊದಲ ಶುಕ್ರವಾರ ಮಂಗಳಾದೇವಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಸಲಾಗುತ್ತಿದೆ.ವಿಜಯ ದಶಮಿಯಂದು ಬೆಳಗ್ಗೆ ತೆನೆ ಹಬ್ಬ- ಎಂಟು ಗ್ರಾಮಗಳ ಜನರಿಗೆ ತೆನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ನಂತರ ತುಲಾಭಾರ ಸೇವೆ, ಮಧ್ಯಾಹ್ನ ರಥಾರೋಹಣವಾಗಿ ಸಂಜೆ ಗಂಟೆ 6ಕ್ಕೆ ಸರಿಯಾಗಿ ರಥೋತ್ಸವ ಜರುಗಲಿದೆ. ಅ.3ರಂದು ಸಂಜೆ 7ಕ್ಕೆ ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನವಾಗಲಿದೆ ಎಂದು ಅನುವಂಶಿಕ ಆಡಳಿತ ಮೊಕೇಸರ ಎಂ. ಅರುಣ್ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.26ರಂದು ಸೀರೆ ಏಲಂ
ದೇವಾಲಯದಲ್ಲಿ ಸೆ.26ರಿಂದ 28ರವರೆಗೆ ಬೆಳಗ್ಗೆ 10ರಿಂದ 1 ಗಂಟೆವರೆಗೆ ಸೀರೆ ಏಲಂ ಕರೆಯಲಾಗುವುದು. ಉತ್ಸವದ ಪ್ರತಿದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಅದೇ ರೀತಿ ದಿನಂಪ್ರತಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.