ಮಂಗಳೂರು: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸುವ ಪೂರ್ವಭಾವಿಯಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಘಾಟಿ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಬುಧವಾರ ಯಶಸ್ವಿಯಾಗಿ ನಡೆಸಿತು.ಸ್ವಯಂಚಾಲಿತ ತುರ್ತು ಬ್ರೇಕ್ (ಎಇಬಿ) ವ್ಯವಸ್ಥೆ ಅಳವಡಿಸಿರುವ ವಿಶೇಷ 20 ಬೋಗಿಗಳ ವಂದೇ ಭಾರತ್ ರೈಲು ಬೆಳಗ್ಗೆ 6.42ಕ್ಕೆ ಸಕಲೇಶಪುರ ರೈಲು ನಿಲ್ದಾಣದಿಂದ ಹೊರಟು, ಬೆಳಗ್ಗೆ 10.55ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಿತು. ಬಳಿಕ ರೈಲು ಸುಬ್ರಹ್ಮಣ್ಯ ರೋಡ್ನಿಂದ ಸಕಲೇಶಪುರದತ್ತ ಘಾಟಿ ಏರುವ ದಿಕ್ಕಿನಲ್ಲಿಯೂ ಪ್ರಾಯೋಗಿಕ ಸಂಚಾರ ನಡೆಸಿತು.
30 ಕಿ.ಮೀ. ವೇಗ ಮಿತಿ:
ಘಾಟಿ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಎಇಬಿ ವ್ಯವಸ್ಥೆಯನ್ನು ಗಂಟೆಗೆ 30 ಕಿ.ಮೀ. ವೇಗಕ್ಕೆ ಪೂರ್ವ ನಿಗದಿಪಡಿಸಲಾಗಿದೆ. ಘಾಟಿ ಪ್ರದೇಶದಲ್ಲಿ ರೈಲು ಈ ವೇಗವನ್ನು ಮೀರದಂತೆ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಮಾರ್ಗದಲ್ಲಿ 1.50ರಷ್ಟು ತೀವ್ರ ಇಳಿಜಾರು/ಏರುಗತಿಯಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಗಂಟೆಗೆ 30 ಕಿ.ಮೀ. ವೇಗದ ಮಿತಿಯನ್ನು ನಿಗದಿಪಡಿಸಿದ್ದಾರೆ.ಆ.13ರಿಂದ ಮತ್ತೆ ಪರೀಕ್ಷೆ:
ವಂದೇ ಭಾರತ್ ರೈಲಿನ ಪ್ರಯೋಗಾತ್ಮಕ ಸಂಚಾರದ ಹಿನ್ನೆಲೆಯಲ್ಲಿ ಯಶವಂತಪುರ–ಮಂಗಳೂರು ಜಂಕ್ಷನ್/ಕಾರವಾರ ನಡುವೆ ಸಂಚರಿಸುವ ಹಗಲು ರೈಲುಗಳನ್ನು ಗರಿಷ್ಠ 30 ನಿಮಿಷಗಳವರೆಗೆ ನಿಯಂತ್ರಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ವಂದೇ ಭಾರತ್ ರೇಕ್ಗೆ ತಾಂತ್ರಿಕ ಹಾಗೂ ವಿನ್ಯಾಸದ ಕಾರಣಗಳಿಂದ ಬ್ಯಾಂಕರ್ ಲೋಕೊ ಜೋಡಿಸಲು ಸಾಧ್ಯವಿಲ್ಲ. ಹೀಗಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಘಾಟಿ ಮಾರ್ಗದ ಸಂಚಾರಕ್ಕೆ ಅನುಗುಣವಾಗಿ ವಿಶೇಷ 20 ಬೋಗಿಗಳ ವಂದೇ ಭಾರತ್ ರೇಕ್ ನಿರ್ಮಿಸಲಾಗಿದೆ. ಈ ರೇಕ್ ಕಳೆದ ವಾರ ಮೈಸೂರಿಗೆ ಆಗಮಿಸಿದ್ದು, ಆ.11ರಂದು ಮೈಸೂರಿನಲ್ಲಿ ಸ್ಥಿರ ಪರೀಕ್ಷೆ ನಡೆಸಿದ ಬಳಿಕ ಅದೇ ರಾತ್ರಿ ಸಕಲೇಶಪುರಕ್ಕೆ ತರಲಾಗಿತ್ತು.