ಬಹುಮಹಡಿ ವಾಹನ ನಿಲುಗಡೆ ಯೋಜನೆ: ವರದಿಗೆ ಸೂಚನೆ

KannadaprabhaNewsNetwork |  
Published : Sep 12, 2026, 03:00 AM IST
ಬಹುಮಹಡಿ ವಾಹನ ನಿಲುಗಡೆ ಯೋಜನೆಯ ಸ್ಥಳಕ್ಕೆ ಆಯುಕ್ತರು ಭೇಟಿ ನೀಡಿದರು | Kannada Prabha

ಸಾರಾಂಶ

ನಗರದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜನಸಂಬಂಧಿತ ಸಮಸ್ಯೆಗಳ ಪರಿಶೀಲನೆಯ ಭಾಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ರತ್ನಂ ಪಾಂಡೆ ಶನಿವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮಂಗಳೂರು: ನಗರದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜನಸಂಬಂಧಿತ ಸಮಸ್ಯೆಗಳ ಪರಿಶೀಲನೆಯ ಭಾಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ರತ್ನಂ ಪಾಂಡೆ ಶನಿವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕೆ.ಎಸ್.ರಾವ್ ರಸ್ತೆಯ ಹಳೆಯ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಬಹುಮಹಡಿ ವಾಹನ ನಿಲುಗಡೆ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಕಾಮಗಾರಿಯ ಪ್ರಗತಿ ಹಾಗೂ ಯೋಜನೆಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪರಿಶೀಲಿಸಿದರು.

ಮಂಗಳೂರು ಸ್ಮಾರ್ಟ್ ಸಿಟಿ ಪ್ರೈವೇಟ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಯೋಜನೆಯ ಬಿಡ್ಡಿಂಗ್ ಪ್ರಕ್ರಿಯೆ, ಹೂಡಿಕೆ, ನಿರ್ಮಾಣದ ಗುಣಮಟ್ಟ, ಭೂಸ್ವಾಧೀನ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಯುಕ್ತರಿಗೆ ಮಾಹಿತಿ ನೀಡಿದರು.

ಯೋಜನೆಗೆ ಅಗತ್ಯವಿರುವ ಸ್ಥಳಾವಕಾಶ ಒದಗಿಸುವ ವಿಚಾರದಲ್ಲಿ ಕೆಲ ಭೂಮಾಲೀಕರು ತಮ್ಮ ಜಾಗವನ್ನು ನೀಡಲು ಒಪ್ಪದಿರುವುದರಿಂದ ರಸ್ತೆ ಹಾಗೂ ಯೋಜನೆಗೆ ಅಗತ್ಯವಿರುವ ಸ್ಥಳಾವಕಾಶದ ವಿಚಾರದಲ್ಲಿ ಸವಾಲು ಎದುರಾಗಿದೆ ಎಂದು ಅವರು ತಿಳಿಸಿದರು. ಯೋಜನೆಯ ಸುತ್ತಮುತ್ತ ಸುಮಾರು 84 ಮಂದಿ ಭೂಮಾಲೀಕರು ಇರುವುದಾಗಿ ಮಾಹಿತಿ ನೀಡಿದರು.

ಹಳೆಯ ಬಸ್ ನಿಲ್ದಾಣದ ಕಟ್ಟಡ ಏಳು ದಶಕಗಳಿಗೂ ಅಧಿಕ ಹಳೆಯದಾಗಿದ್ದು, ಸುತ್ತಮುತ್ತಲಿನ ಕಟ್ಟಡಗಳು ಸುಮಾರು ನಾಲ್ಕು ದಶಕಗಳಷ್ಟು ಹಳೆಯವು ಎಂದು ಅರುಣ್ ಪ್ರಭಾ ವಿವರಿಸಿದರು. ಯೋಜನೆಗಾಗಿ ಜಾಗವನ್ನು ಬಿಡ್ಡರ್‌ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವನೆ ಇರುವುದಾಗಿ ತಿಳಿಸಿದರು.

ಸ್ಥಳ ಪರಿಶೀಲನೆಯ ಬಳಿಕ, ಕಾಮಗಾರಿಯ ಪ್ರಗತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು 15 ತಿಂಗಳ ತಿಂಗಳುವಾರು ಮೈಲಿಗಲ್ಲು ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಬಳಿಕ ಸುರತ್ಕಲ್–ಇಡ್ಯಾ ವೆಟ್‌ವೆಲ್ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಪಂಪಿಂಗ್ ವ್ಯವಸ್ಥೆ ಹಾಗೂ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಆಯುಕ್ತರಿಗೆ, ವೆಟ್‌ವೆಲ್ ವ್ಯವಸ್ಥೆ ತಮ್ಮ ಪ್ರದೇಶದಲ್ಲಿ ಸ್ಥಾಪನೆಯಾಗುವುದಕ್ಕೆ ನಿವಾಸಿಗಳು ಬೆಂಬಲ ವ್ಯಕ್ತಪಡಿಸುತ್ತಿಲ್ಲ ಎಂದು ತಿಳಿಸಿದರು.

ವೆಟ್‌ವೆಲ್ ವ್ಯವಸ್ಥೆಯಿಂದಾಗಿ ಪ್ರದೇಶದಲ್ಲಿನ ಬಾವಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಆಯುಕ್ತರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಬಾವಿ ನೀರನ್ನು ಪರಿಶೀಲಿಸಿದ ಆಯುಕ್ತರು, ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟವನ್ನು ಪರೀಕ್ಷಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸ್ಥಳೀಯ ನಿವಾಸಿಗಳ ಅಭಿಪ್ರಾಯ ಹಾಗೂ ಆತಂಕಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ ಆಯುಕ್ತರು, ನಿವಾಸಿಗಳ ಇಚ್ಛೆಗೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಭರವಸೆ ನೀಡಿದರು. ಈ ಕುರಿತು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಪೀಡಿತ ತಾಲೂಕು ಘೋಷಣೆ ಶೇ.200 ಖಚಿತ: ನಾಡಗೌಡ
ನನಸಾಗದ ಡಾ.ಅಂಬೇಡ್ಕರ್ ಭವನ ಕನಸು।