ಮುಂಗಾರು ದುರ್ಬಲ: ಮಳೆಗಾಲದಲ್ಲೂ ಬೇಸಿಗೆ ಹವೆ!

KannadaprabhaNewsNetwork |  
Published : Jun 21, 2026, 03:00 AM IST
ಕಳೆದ ವರ್ಷ ಹಾಗೂ ಈ ವರ್ಷದ ಉಪ್ಪಿನಂಗಡಿ ನೇತ್ರಾವತಿ ನದಿಯ ದೃಶ್ಯ | Kannada Prabha

ಸಾರಾಂಶ

ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಮಳೆ ದೂರವಾಗಿದೆ. ದ.ಕ. ಜಿಲ್ಲೆಯಲ್ಲಿ ಜೂನ್‌ ತಿಂಗಳ ಮಳೆ ಹಂಗಾಮಿನಲ್ಲೂ ಬೇಸಿಗೆ ವಾತಾವರಣ ಕಂಡುಬರುತ್ತಿದೆ. ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.

ದಯಾನಂದ ಕಲ್ನಾರ್‌

ಮಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ದುರ್ಬಲಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಮಳೆ ದೂರವಾಗಿದೆ. ದ.ಕ. ಜಿಲ್ಲೆಯಲ್ಲಿ ಜೂನ್‌ ತಿಂಗಳ ಮಳೆ ಹಂಗಾಮಿನಲ್ಲೂ ಬೇಸಿಗೆ ವಾತಾವರಣ ಕಂಡುಬರುತ್ತಿದೆ. ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು.

ದ.ಕ. ಜಿಲ್ಲೆಯಲ್ಲಿ 2025ರ ಜೂ.1ರಿಂದ ಜೂ.19ರ ವರೆಗೆ 998.8 ಮಿಲಿ ಮೀಟರ್‌ ಮಳೆಯಾಗಿದ್ದರೆ, 2026ರ ಜೂ.1ರಿಂದ ಜೂ.19ರ ವರೆಗೆ ಕೇವಲ 229.1 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ. ಈ ವರ್ಷ 502 ಮಿ.ಮೀ. ಸಾಮಾನ್ಯ ಮಳೆಯೂ ಆಗಿಲ್ಲ.

ತಾಲೂಕುವಾರು ಕಡಿಮೆ ಮಳೆ:

2025ರ ಜೂ.1ರಿಂದ 19ರ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ 1121.1 ಮಿ.ಮೀ., ಬಂಟ್ವಾಳದಲ್ಲಿ 1034.9 ಮಿ.ಮೀ., ಮಂಗಳೂರಿನಲ್ಲಿ 880.4 ಮಿ.ಮೀ., ಪುತ್ತೂರಿನಲ್ಲಿ 881.2 ಮಿ.ಮೀ., ಸುಳ್ಯದಲ್ಲಿ 869.5 ಮಿ.ಮೀ., ಮೂಡುಬಿದಿರೆಯಲ್ಲಿ 1144.4 ಮಿ.ಮೀ., ಕಡಬದಲ್ಲಿ 981.2 ಮಿ.ಮೀ., ಮೂಲ್ಕಿಯಲ್ಲಿ 930.5 ಮಿ.ಮೀ., ಉಳ್ಳಾಲದಲ್ಲಿ 799.9 ಮಿ.ಮೀ.ಮಳೆಯಾಗಿತ್ತು. ಆದರೆ ಈ ವರ್ಷ ಬೆಳ್ತಂಗಡಿಯಲ್ಲಿ 210.5 ಮಿ.ಮೀ., ಬಂಟ್ವಾಳದಲ್ಲಿ 218 ಮಿ.ಮೀ., ಮಂಗಳೂರಿನಲ್ಲಿ 307.2 ಮಿ.ಮೀ., ಪುತ್ತೂರಿನಲ್ಲಿ 168.9 ಮಿ.ಮೀ., ಸುಳ್ಯದಲ್ಲಿ 203 ಮಿ.ಮೀ., ಮೂಡುಬಿದಿರೆಯಲ್ಲಿ 227.2 ಮಿ.ಮೀ., ಕಡಬದಲ್ಲಿ 264.8 ಮಿ.ಮೀ., ಮೂಲ್ಕಿಯಲ್ಲಿ 288.4 ಮಿ.ಮೀ., ಉಳ್ಳಾಲದಲ್ಲಿ 327.9 ಮಿ.ಮೀ.ಮಾತ್ರವೇ ಮಳೆಯಾಗಿದೆ. ಕಳೆದ ವರ್ಷವೂ ಮಂಗಳೂರು (ಶೇ.-14), ಪುತ್ತೂರು (ಶೇ.-9), ಮುಲ್ಕಿ (ಶೇ.-14), ಉಳ್ಳಾಲ (ಶೇ.-22) ತಾಲೂಕುಗಳಲ್ಲೂ ಸಾಮಾನ್ಯ ಮಳೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ ಒಟ್ಟು ಮಳೆಯಲ್ಲಿ ಕಳೆದ ವರ್ಷ ಶೇ.8ರಷ್ಟು ಹೆಚ್ಚು ಮಳೆಯಾಗಿದ್ದರೆ, ಈ ವರ್ಷ ಒಟ್ಟು ಮಳೆಯಲ್ಲಿ ಸಾಮಾನ್ಯ ಮಳೆಗಿಂತ ಶೇ.54ರಷ್ಟು ಕಡಿಮೆ ಮಳೆಯಾಗಿದೆ.

ಗೇಟ್‌ ತೆಗೆದ ಬಳಿಕ ನೀರಿನ ಸಮಸ್ಯೆ !:

ಜೂನ್‌ ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ನದಿಗೆ ನಿರ್ಮಿಸಲಾದ ಡ್ಯಾಂಗಳ ಗೇಟ್‌ ತೆರೆಯಲಾಗಿದೆ. ಅದರಂತೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಡ್ಯಾಂ ಗೇಟ್‌ ತೆರವು ಮಾಡಲಾಗಿತ್ತು. ಸಮೃದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಡ್ಯಾಂ ಗೇಟ್‌ ತೆರವು ಬಳಿಕ ನೀರಿಲ್ಲದೇ ಬರಿದಾದಂತೆ ಕಾಣುತ್ತಿದೆ.

ಸುಳ್ಯದ ಪಯಸ್ವಿನಿ ನದಿಯ ಡ್ಯಾಂನ ಗೇಟ್‌ ತೆರವು ಮಾಡಲಾಗಿತ್ತು. ಆದರೆ ಮಳೆಯಾಗದೆ ನದಿ ಸಂಪೂರ್ಣ ಬರಿದು ಸ್ಥಿತಿಯಲ್ಲಿ ಇದೀಗ ಕಾಣುತ್ತಿದೆ. ಸುಳ್ಯದಲ್ಲಿ ಡ್ಯಾಂ ಗೇಟ್‌ ತೆರೆದ ಬಳಿಕ ಮಳೆಯಾಗದೇ ನದಿಯಲ್ಲೂ ನೀರಿನ ಮಟ್ಟ ಕುಸಿದು ಕುಡಿಯಲು ನೀರಿನ ಸಮಸ್ಯೆ ಉಂಟಾಗಿತ್ತು. ಬಳಿಕ ನದಿಯ ಹೂಳು ತೆಗೆದು ಜಾಕ್‌ವೆಲ್‌ಗೆ ನೀರು ಹರಿಸಲು ವ್ಯವಸ್ಥೆ ಮಾಡಲಾಗಿ ನೀರಿನ ಸಮಸ್ಯೆಗೆ ಪರಿಹಾರ ಕ್ರಮ ವಹಿಸಲಾಗಿತ್ತು.

ಜೂನ್‌ ಆರಂಭದಲ್ಲಿ ಮಳೆಯಾಗಿದ್ದರಿಂದ ಸಣ್ಣ-ಪುಟ್ಟ ತೋಡು, ಹಳ್ಳಗಳಲ್ಲಿ ನೀರಿನ ಒರತೆ ಉಂಟಾಗಿ ನೀರು ಹರಿವು ಆರಂಭಗೊಂಡಿತ್ತು. ಇದೀಗ ಮಳೆಯಿಲ್ಲದೇ ಮತ್ತೆ ತೋಡು, ಹಳ್ಳಗಳು ನೀರಿಲ್ಲದೇ ಬತ್ತುತ್ತಿದೆ.

ಬೇಸಾಯಕ್ಕೆ ಅಡ್ಡಿ:

ಈ ಬಾರಿ ಮಳೆ ಇಲ್ಲದೇ ಗದ್ದೆ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗದ್ದೆ ಬೇಸಾಯ ಕೃಷಿಕರು ನೇಜಿ ಹಾಕಿ ನಾಟಿ ಮಾಡಲು ಮಳೆ ಇಲ್ಲದೇ ಅಡ್ಡಿಯಾಗಿದ್ದು, ಎರಡು, ಮೂರನೇ ಹಂತದ ನೇಜಿ ನಾಟಿಗೆ ಮಳೆ ಕೊರತೆ ಅಡ್ಡಿಯಾಗಲಿದೆ. ಈ ಬಾರಿ ಒಂದೇ ಹಂತದ ನೇಜಿ ಮಾಡಲು ಮಾತ್ರವೇ ಸಾಧ್ಯವಾಗುವ ಪರಿಸ್ಥಿತಿ ಕೃಷಿಕರಲ್ಲಿದೆ.ಮಳೆ ದೂರವಾಗಿರುವುದರಿಂದ ಅಡಕೆ ಕೃಷಿಕರಿಗೆ ಕೊಳರೋಗ ಭೀತಿ ಕೊಂಚ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ತೋಟಕ್ಕೆ ಔಷಧಿ ಸಿಂಪಡಿಸಲು ಅನುಕೂಲಕರವಾಗಿದೆ.

ಬಾಕ್ಸ್‌-------------

ಬತ್ತಿದ ಸ್ಥಿತಿಯಲ್ಲಿ ನೇತ್ರಾವತಿ

೨೦೨೫ರ ಜೂ. ೧೯ ರಂದು ಉಪ್ಪಿನಂಗಡಿಯ ನೇತ್ರಾವತಿ ನದಿ ಮೈತುಂಬಿ ಹರಿಯುತ್ತಿತ್ತು, ೨೦೨೬ರ ಜೂ .19ರಂದು ನದಿ ನೀರಿನ ಹರಿವುಲಿಲ್ಲದ ದೃಶ್ಯ ಕಂಡುಬಂದಿದೆ. ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡದ ಲೀಡರ್ ದಿನೇಶ್ ಬಿ. ಅವರು ಕಳೆದ ವರ್ಷ ಹಾಗೂ ಈ ವರ್ಷದ ನದಿಯ ನೀರಿನ ಮಟ್ಟದ ಸ್ಥಿತಿ ಪೋಟೋಗಳನ್ನು ಒದಗಿಸಿದ್ದಾರೆ. ಈ ಬಾರಿ ಮುಂಗಾರು ದುರ್ಬಲಗೊಂಡಿರುವುದು ಕಂಡುಬಂದಿದೆ. ಜೂನ್‌ ಕೊನೆವರೆಗೂ ಮಳೆಯಾಗದೇ ಇದ್ದಲ್ಲಿ ಭತ್ತ ಕೃಷಿಕರಿಗೆ ತೊಂದರೆಯಾಗಲಿದೆ. ಈಗ ಭತ್ತ ನರ್ಸರಿ ಪ್ರಕ್ರಿಯೆಯಲ್ಲಿದ್ದು, ಜುಲೈನಲ್ಲಿ ನಾಟಿ ಸಂದರ್ಭದ ಮೊದಲು ಮಳೆ ಆಗದೇ ಇದ್ದಲ್ಲಿ ತೊಂದರೆ ಆಗಲಿದೆ. ಪರ್ಯಾಯ ಕ್ರಮದ ಬಗ್ಗೆಯೂ ಕ್ರಮ ವಹಿಸಲಾಗುವುದು.

-ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂವರೆ ವರ್ಷದ ಬಾಲಕನ ಅಪರೂಪದ ಸಾಧನೆ!
ಬಿಎಲ್ಡಿಇ ಸಂಸ್ಥೆಯ 94 ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಯ್ಕೆ