ಮಂಗಳೂರು: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಂಗಳೂರು ನಗರ ಘಟಕದ ಪಂಚಮ ವಾರ್ಷಿಕ ಸಂಭ್ರಮ ಮೇ 23 ಗುರುವಾರ ಸಂಜೆ 3 ರಿಂದ ರಾತ್ರಿ 9ರ ತನಕ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಎಂಆರ್ಪಿಎಲ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಬಾಳದಗುತ್ತು ಸಂತೋಷ್ ಪೂಂಜಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ನ ಕೇಂದ್ರಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೆ. ಭಂಡಾರಿ ಮಾತನಾಡಿ, ಯಕ್ಷ ಧ್ರುವ ಪಟ್ಲ ಸಂಭ್ರಮ-2024 ಇದು ಮೇ 26ರಂದು ಅಡ್ಯಾರು ಗಾರ್ಡನ್ ನಲ್ಲಿ ನಡೆಯಲಿದೆ. ಅದಕ್ಕೆ ಪೂರ್ವಾಭಾವಿಯಾಗಿ ಮಂಗಳೂರು ಘಟಕದ ಪಂಚಮ ವಾರ್ಷಿಕ ಸಂಭ್ರಮ ನಡೆಯಲಿದ್ದು. ಉಡುಪಿಯ ವಿಶು ಶೆಟ್ಟಿ ಅಂಬಲಪಾಡಿಯವರಿಗೆ ಸಾಧನಾ ಪ್ರಶಸ್ತಿ ಹಾಗೂ ಮೂರು ಮಂದಿ ಅಶಕ್ತ ಕಲಾವಿದರಿಗೆ ಸಹಾಯಧನದೊಂದಿಗೆ ಸನ್ಮಾನ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ್ ವಹಿಸಿದರು.ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ಆರತಿ ಆಳ್ವ, ನಗರ ಘಟಕದ ಮಹಿಳಾ ಅಧ್ಯಕ್ಷೆ ಅನಿತಾ ಪಿಂಟೋ, ಕೋಶಾಧಿಕಾರಿ ಗೋಪಿನಾಥ್ ಶೆಟ್ಟಿ ಇದ್ದರು.