ಮಂಗಳೂರು ವಿವಿ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಸರ್ಕಾರಕ್ಕೆ ಅಭಾವಿಪ ಆಗ್ರಹ

KannadaprabhaNewsNetwork |  
Published : Nov 19, 2025, 01:45 AM IST

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಸಮಗ್ರ ತನಿಖೆಗೆ ಸರ್ಕಾರ ತಕ್ಷಣ ವಿಶೇಷ ಸಮಿತಿ ನಿಯೋಗ ರಚಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಅಭಾವಿಪ) ಆಗ್ರಹಿಸಿದೆ.

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಸಮಗ್ರ ತನಿಖೆಗೆ ಸರ್ಕಾರ ತಕ್ಷಣ ವಿಶೇಷ ಸಮಿತಿ ನಿಯೋಗ ರಚಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಅಭಾವಿಪ) ಆಗ್ರಹಿಸಿದೆ.

ಅಭಾವಿಪ ಮಂಗಳೂರು ವಿಭಾಗ ಸಂಚಾಲಕ್‌ ಸುವಿತ್‌ ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೊಮ್ಮೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರಮುಖ ಸ್ಥಾನ ಹೊಂದಿತ್ತು. ಆದರೆ ಇಂದಿನ ವಿಶ್ವವಿದ್ಯಾನಿಲಯದ ಸ್ಥಿತಿ ಕಳವಳಕಾರಿ ಆಗಿದ್ದು, ಅಭಿವೃದ್ಧಿ ನಿಂತಿದೆ. 30ಕ್ಕೂ ಹೆಚ್ಚು ಸ್ನಾತಕೋತ್ತರ ವಿಷಯ ವಿಭಾಗಗಳು, ಐದು ಘಟಕ ಕಾಲೇಜುಗಳು, ಅನೇಕ ಅಧ್ಯಯನ ಕೇಂದ್ರಗಳು ಹಾಗೂ ಅಧ್ಯಯನ ಪೀಠಗಳು ಇದ್ದರೂ ವಿಶ್ವವಿದ್ಯಾಲಯ ತನ್ನ ಮೂಲೋದ್ದೇಶವಾದ ಶೈಕ್ಷಣಿಕ ಸಂವರ್ಧನೆಯನ್ನು ಸಾಧಿಸಲು ವಿಫಲವಾಗಿದೆ. ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವೇ ವಿವಿಯ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಮಾನವಿಕ ಶಾಸ್ತ್ರಗಳಾದ ಸಮಾಜಶಾಸ್ತ್ರ, ತುಳು, ಕೊಂಕಣಿ, ಪುರಾತತ್ವ ಮತ್ತು ಇತಿಹಾಸದಂತಹ ಜನಪ್ರಿಯ ವಿಭಾಗಗಳನ್ನೇ ಮಂಗಳೂರು ವಿವಿಯಲ್ಲಿ ಮುಚ್ಚಲಾಗಿದೆ. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2024-25ನೇ ಸಾಲಿನಲ್ಲಿ 1,876 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆ 1,508 ಕ್ಕೆ ಇಳಿದಿದೆ. ಮೂಲಸೌಲಭ್ಯಗಳ ಸ್ಥಿತಿ ಇನ್ನೂ ದಯನೀಯವಾಗಿದೆ. ವಿವಿ ಪತ್ರಿಕೋದ್ಯಮ ವಿಭಾಗ ಕಾರ್ಯನಿರ್ವಹಿಸುತ್ತಿಲ್ಲ ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವೇ ಇಂತಹ ಸ್ಥಿತಿಗೆ ಕಾರಣ ಎಂದು ಅವರು ಆಪಾದಿಸಿದರು.ಮಂಗಳೂರು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯರಾದ ರಮೇಶ್‌ ಕೆ., ರವಿಚಂದ್ರ, ಅಭಾವಿಪ ಜಿಲ್ಲಾ ಸಂಚಾಲಕ್‌ ಶ್ರೀಜಿತ್‌ ರೈ, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ಇದ್ದರು.

‘ಮಂಗಳೂರು ವಿವಿ ಉಳಿಸಿ’ ಆಂದೋಲನ

ಮಂಗಳೂರು ವಿವಿಯ ಸಂವರ್ಧನೆ ಮತ್ತು ಸರಿಯಾಗಿರುವ ಸ್ಥಿತಿಗತಿ ಕುರಿತು ಚರ್ಚಿಸಲು ‘ಮಂಗಳೂರು ವಿವಿ ಉಳಿಸಿ’ ವಿದ್ಯಾರ್ಥಿ ಆಂದೋಲನದ ಭಾಗವಾಗಿ ಡಿಸೆಂಬರ್‌ ಮೊದಲ ವಾರದಲ್ಲಿ ಶಿಕ್ಷಣ ತಜ್ಞರೊಂದಿಗೆ ದುಂಡುಮೇಜು ಸಭೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಯೋಜಿಸಲಿದೆ ಎಂದು ಸುವಿತ್‌ ಶೆಟ್ಟಿ ತಿಳಿಸಿದರು.

PREV

Recommended Stories

ವಾಜಪೇಯಿಗೆ ಕಾರು ಚಾಲಕರಾಗಿದ್ದ ಸುಳ್ಯದ ಕುಶಾಲಪ್ಪ ಗೌಡ
ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ