ಉಪ್ಪಿನಂಗಡಿ: ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಸಂಗಮಿಸುವ ಉಪ್ಪಿನಂಗಡಿಯಲ್ಲಿ ಬಿಳಿಯೂರು ಅಣೆಕಟ್ಟಿನಲ್ಲಿ ೦.೨ ಟಿ ಎಂಸಿ ನೀರು ಸಂಗ್ರಹಗೊಂಡಿದ್ದು, ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೆ ಈ ನೀರು ಆಧಾರವಾಗಲಿದೆ.
ಕೃಷಿಕರಿಗೆ ಸಂತಸ, ಆಸ್ತಿಕರಿಗೆ ನೋವು ನಿರಾಸೆ: ಬಿಳಿಯೂರು ಅಣೆಕಟ್ಟಿನಲ್ಲಿ ಡಿಸೆಂಬರ್ ತಿಂಗಳಿಂದಲೇ ಗೇಟು ಅಳವಡಿಸಿ ನೀರು ಸಂಗ್ರಹಿಸುತ್ತಿರುವುದರಿಂದ ನದಿ ಪಾತ್ರದ ಕೃಷಿಕರಿಗೆ ಸುಲಲಿತ ನೀರಿನ ಸೌಲಭ್ಯ ದೊರೆಂತಂತಾಗಿ ಸಂತಸ ಮೂಡಿದೆ. ಆದರೆ ನೇತ್ರಾವತಿ ನದಿ ಗರ್ಭದಲ್ಲಿರುವ ಶಿವನ ಉದ್ಭವ ಲಿಂಗಕ್ಕೆ ಸನಾತನ ಕಾಲದಿಂದ ನಡೆದುಕೊಂಡು ಬರಲಾಗುತ್ತಿದ್ದ ಶಿವರಾತ್ರಿ ವಿಶೇಷ ಪೂಜೆಯು ನಡೆಯದಂತಾಗಿ ಭಕ್ತರಿಗೆ ನೋವು ಮತ್ತು ನಿರಾಸೆ ಆಗಿದೆ. ಗೇಟಿನ ಗಾತ್ರವನ್ನು ತಗ್ಗಿಸಿ ಮಾರ್ಚ್ ತಿಂಗಳ ನಂತರ ಗೇಟಿನ ಗಾತ್ರವನ್ನು ಹೆಚ್ಚಿಸಲು ತನ್ಮೂಲಕ ಪರಂಪರಾಗತವಾಗಿ ನಡೆಯುತ್ತಿದ್ದ ಪೂಜಾ ವಿಧಿವಿಧಾನವನ್ನು ನಡೆಸುವಂತಾಗಲು ಅವಕಾಶ ಕಲ್ಪಿಸಬೇಕೆಂಬ ಭಕ್ತರ ಮನವಿಗೆ ಮೂರು ವರ್ಷಗಳಲ್ಲಿ ಮಾನ್ಯತೆ ದೊರಕಿಲ್ಲ.
ಸುಡುವ ಬಿಸಿಲ ಬೇಗೆಯ ನಡುವೆ ಭರಪೂರ ಜಲರಾಶಿ ತುಂಬಿಕೊಂಡಿರುವ ನೇತ್ರಾವತಿಯ ಒಡಲು ಕಂಡಾಗ ಮನಸ್ಸು ತಂಪಾಗುತ್ತಿದೆ. ಈ ಬಾರಿಯ ಜೂನ್ ತಿಂಗಳಾರಂಭದವರೆಗೆ ಈ ಜಲರಾಶಿ ಜಿಲ್ಲೆಯ ಜನತೆಗೆ ಜಲಕ್ಷಾಮ ತಡೆಯುವ ಆಶಾಕಿರಣವಾಗಿಯೂ ಕಾಣಿಸುತ್ತಿದೆ.
ನೇತ್ರಾವತಿ ನದಿಯಲ್ಲಿ ಬಿಳಿಯೂರು ಅಣೆಕಟ್ಟಿನ ಕಾರಣಕ್ಕೆ ಹಿನ್ನೀರು ಸಂಗ್ರಹವಾಗಿ ಕೃಷಿಕರಿಗೆ ಅನುಕೂಲವಾಗಿರುವುದು, ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿರುವುದು ಸಂತಸದ ವಿಚಾರ. ಆದಾಗ್ಯೂ ನೇತ್ರಾವತಿ ನದಿ ಗರ್ಭದ ಶಿವನ ಉದ್ಭವ ಲಿಂಗಕ್ಕೆ ಶಿವರಾತ್ರಿಯ ವಿಶೇಷ ಪೂಜೆ ನಡೆಯುವಂತಾಗಲೂ ಜಿಲ್ಲಾಡಳಿತ ಮುಂದಾಗಬೇಕು.-ಸಂದೀಪ್ ಶೆಟ್ಟಿ, ಹೋಟೆಲ್ ಮಾಲೀಕರು ಉಪ್ಪಿನಂಗಡಿ