ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹಾಪ್ಸ್ಕಾಮ್ಸ್ ಎದುರು ಮಾವು-ಹಲಸಿನ ಘಮಲು...!ಹತ್ತು ವಿವಿಧ ಮಾದರಿಯ ಮಾವು-ಹಲಸಿನ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಸುವಾಸನೆಯುಕ್ತ, ಬಾಯಲ್ಲಿ ನೀರೂರಿಸುವ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸಿದವು.
ಮೇಳದಲ್ಲಿ ೧೫ ಮಳಿಗೆಗಳನ್ನು ತೆರೆದಿದ್ದು, ವಿವಿಧ ಮಾದರಿಯ ಹಲಸು, ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ವಿವಿಧ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮಾವಿನ ಹಣ್ಣುಗಳನ್ನು ಸಕ್ಕರೆ ಪಟ್ಟಣ, ಚಿಕ್ಕಮಗಳೂರು, ಕೋಲಾರ, ಹೊಗಳಗೆರೆ, ಮೈಸೂರು, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ವಿವಿಧ ತೋಟಗಾರಿಕೆ ಫಾರಂಗಳಲ್ಲಿ ಬೆಳೆದ ಹಣ್ಣುಗಳನ್ನು ಮಾರಾಟಕ್ಕಿಡಲಾಗಿತ್ತು. ಸಕ್ಕರೆ ಪಟ್ಟಣದಲ್ಲಿ ತಯಾರಾಗುವ ಹಲಸು, ಮ್ಯಾಂಗೋ ಹಲ್ವಾ ಕೂಡ ಗಮನಸೆಳೆಯಿತು.ಮಿಯಾಜಾಕಿ ಮಾವು ಕೆಜಿಗೆ ೨.೫೦ ಲಕ್ಷ ರು.:
ಜಪಾನ್ ಮೂಲದ ಮಿಯಾಜಾಕಿ ಮಾವಿನ ತಳಿ ಪ್ರದರ್ಶನದಲ್ಲಿ ಪ್ರಮುಖವಾಗಿ ಗಮನಸೆಳೆಯಿತು. ಈ ತಳಿಯ ಮಾವು ಪ್ರತಿ ಕೆಜಿಗೆ ೨.೫೦ ಲಕ್ಷ ರು.ಗೆ ಮಾರಾಟವಾಗುತ್ತಿರುವುದು ಅಚ್ಚರಿ ಮೂಡಿಸಿತು. ೭೫೦ ಗ್ರಾಂನಿಂದ ೯೦೦ ಗ್ರಾಂವರೆಗೆ ಬೆಳವಣಿಗೆ ಕಾಣುವ ಈ ಹಣ್ಣು ಕಡು ಕೆಂಪು ಬಣ್ಣವನ್ನು ಹೊಂದಿದೆ.ಮದ್ದೂರು ತಾಲೂಕಿನ ಕುದರಗುಂಡಿಯಲ್ಲಿರುವ ಡಾ.ನಂದಾ ಎಂಬುವರು ಪ್ರಾಯೋಗಿಕವಾಗಿ ಮಿಯಾಜಾಕಿ ತಳಿಯ ನಾಲ್ಕು ಮರಗಳನ್ನು ಬೆಳೆಸಿದ್ದಾರೆ. ಮೂರು ವರ್ಷಕ್ಕೆ ಕಾಯಿ ಬಿಡುವ ಈ ತಳಿಗಳ ಸಸಿಗಳಿಗೆ ೬ ಸಾವಿರ ರು. ಬೆಲೆ ಇದೆ. ಬಣ್ಣ, ಸುವಾಸನೆಯಿಂದಲೇ ಆಕರ್ಷಿಸುವ ಅಪರೂಪದ ತಳಿಯ ಈ ಮಾವಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಈ ತಳಿಯ ಮಾವಿನ ಮರಗಳನ್ನು ಬೆಳೆಯುವುದಕ್ಕೆ ಸುವ್ಯವಸ್ಥಿತ ರಕ್ಷಣೆ ಇರಬೇಕು. ಸೀಸಿ ಟೀವಿ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಈ ತಳಿಯ ಹಣ್ಣುಗಳನ್ನು ಬೆಳೆಯಬೇಕಿದೆ. ಇದೊಂದು ಲಾಭದಾಯಕ ಬೆಳೆಯಾಗಿ ಎಲ್ಲರ ಗಮನಸೆಳೆದಿದೆ.೪೦ಕ್ಕೂ ಹಚ್ಚಿನ ಮಾವಿನ ಹಣ್ಣುಗಳ ಪ್ರದರ್ಶನ:
ರಾಜ್ಯದ ನಾನಾ ಭಾಗಗಳಿಂದ ರೈತರು ತಂದಿದ್ದ ಬಾದಾಮಿ, ರಸಪುರಿ, ಮಲ್ಲಿಕಾ, ಮಲಗೋವಾ, ಸೆಂದೂರ, ಕೇರ್ಸ, ಸಕ್ಕರೆಬುತ್ತಿ, ಇಮಾಮ್ ಪಸಂದ, ತೋತಾಪುರಿ, ಲಾಂಗ್ರಾ, ರುಮಾನಿ, ಚಿಲಕ್ ರಸ, ಆಮ್ಲೇಟ್, ಮದನಪಲ್ಲಿ ಸೇರಿದಂತೆ ಇನ್ನೂ ಅನೇಕ ತಳಿಯ ಮಾವಿನ ಹಣ್ಣುಗಳು ಗ್ರಾಹಕರ ಮನಸೇಳೆದವು.ಮೇಳದಲ್ಲಿ ಹತ್ತು ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಮಾರಾಟಕ್ಕಿಡಲಾಗಿದೆ. ಬಾದಾಮಿ ಪ್ರತಿ ಕೆಜಿಗೆ ೧೦೦ ರು., ರಸಪುರಿ-೧೦೦ ರು., ಮಲ್ಲಿಕಾ-೧೧೦ ರು., ಮಲಗೋವಾ-೧೫೦ ರು., ಸೆಂದೂರ- ೬೦ ರು., ಬಂಗನಪಲ್ಲಿ-೬೦ ರು., ಕೇಸರ್-೧೫೦ ರು., ಸಕ್ಕರೆಬುತ್ತಿ-೨೦೦ ರು.., ಇಮಾಮ್ ಪಸಂದ-೧೮೦ ರು., ತೋತಾಪುರಿ-೧೩೦ ರು. ದರದಲ್ಲಿ ಮಾರಾಟವಾಗುತ್ತಿತ್ತು.
೧೦ಕ್ಕೂ ಹೆಚ್ಚು ವಿಧದ ಹಲಸಿನ ಹಣ್ಣಿನ ಪ್ರದರ್ಶನ:ಮೇಳದಲ್ಲಿ ೧೦ ಕ್ಕೂ ಹೆಚ್ಚಿನ ವಿವಿಧ ತಳಿ ಹಲಸಿನ ಹಣ್ಣುಗಳನ್ನು ಪ್ರದರ್ಶಿಸಲಾಯಿತು, ಗುಬ್ಬಿ ಬಕ್ಕೆ, ಬಕ್ಕೆ, ಚೇಲೂರು ಬಕ್ಕೆ, ಅಜ್ಜಿ ಹಲಸು, ಸಕ್ಕರೆ ಪಟ್ಟಣ ಒನಕೆ, ಗುರುಗಳ ತೋಟ, ಚಂದ್ರ ಹಲಸು ಸೇರಿದಂತೆ ಇನ್ನಿತರ ಹಲಸಿನ ಹಣ್ಣುಗಳನ್ನು ಗ್ರಾಹಕರು ಕಣ್ತುಂಬಿಕೊಂಡರು.
ಸಸ್ಯಗಳ ಪ್ರದರ್ಶನ:ಉತ್ತಮ ಗುಣಮಟ್ಟದ ಕಸಿ ಸಸಿಗಳನ್ನು ಇಲಾಖಾ ದರದಲ್ಲಿ ಮಾರಾಟ ಮತ್ತು ಪ್ರದರ್ಶನ ಮಾಡಲಾಯಿತು, ವಿವಿಧ ಬಗೆಯ ಸಸಿಗಳಾದ ನಿಂಬೆ, ಮಾವು, ಸೀಬೆ (ಅಲಹಾಬಾದ್ ಸಫೇದ್), ಸಪೋಟ (ಕ್ರಿಕೆಟ್ ಬಾಲ್), ನುಗ್ಗೆ, ಅಡಿಕೆ ಸೇರಿದಂತೆ ಇನ್ನಿತರ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಜಿಲ್ಲೆಯಲ್ಲಿ ಸುಮಾರು ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ರೈತರು ಬೆಳೆಯುತ್ತಿದ್ದು, ಮಾರುಕಟ್ಟೆ ಕಲ್ಪಿಸಲು ಮಾವು ಮತ್ತು ಹಲಸಿನ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ತೋಟಗಾರಿಕೆ ಬೆಳೆಗಳಲ್ಲಿ ಮಾವು ಪ್ರಮುಖವಾದದ್ದು, ಜಿಲ್ಲೆಯಲ್ಲಿ ವಾರ್ಷಿಕ ೨೦ ಸಾವಿರಕ್ಕೂ ಹೆಚ್ಚು ಟನ್ ಮಾವಿನ ಉತ್ಪಾದನೆಯಾಗುತ್ತಿದೆ. ಉತ್ತಮ ಬೆಲೆಗೆ ಗ್ರಾಹಕ ಗುಣಮಟ್ಟದ ಮಾವಿನ ಹಣ್ಣುಗಳನ್ನು ಕಲ್ಪಿಸಿ ಮಾವು ಬೆಳೆಗಾರರಿಗೆ ಉತ್ತೇಜನ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿಸಿಇಒ ಕೆ.ಆರ್.ನಂದಿನಿ, ಮೇಳದಲ್ಲಿ ೧೫ ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಜನತೆಗೆ ಕಾರ್ಬೈಡ್ ಹಾಗೂ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳನ್ನು ನೀಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.