ಮಾವಿಗೆ ಸಿಗದ ಬೆಂಬಲ ಬೆಲೆ: ಕೊಳಯುತ್ತಿರುವ ಮಾವು

KannadaprabhaNewsNetwork |  
Published : Jun 25, 2025, 12:34 AM IST
ಕೆಬಿ-  5 ಗಿಡದಲ್ಲೇ ಹಣ್ಣಾಗುತ್ತಿರುವ ಮಾವು.ಸಿಕೆಬಿ-6 ಮಂಡಿಯ ಹೊರಗೆ ರಾಶಿ ರಾಶಿಯಾಗಿ ಕೊಳೆತಿರುವ ವಿವಿಧ ತಳಿಯ ಮಾವಿನ ಹಣ್ಣುಗಳು.ಸಿಕೆಬಿ-7 ಮಂಡಿಯಲ್ಲಿ ಕೊಳ್ಳುವವರಿಲ್ಲದೇ ರಾಶಿಯಾಗಿ ಬಿದ್ದಿರುವ ಮಾವಿನ ಹಣ್ಣುಗಳು | Kannada Prabha

ಸಾರಾಂಶ

ಉತ್ತಮ ಬೆಲೆ ಸಿಗುತ್ತೆ ಎಂಬ ಆಸೆಯಿಂದ ಮಾರುಕಟ್ಟೆಗೆ ತಂದರೆ ಕಡಿಮೆ ಬೆಲೆಗೆ ಮಾರಾಟವಾಗುತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಬೆಲೆಗೆ ಮಾವು ಮಾರಾಟವಾಗುತ್ತಿದೆ. ಹಾಕಿದ ಬಂಡವಾಳ ವಾಪಸ್ಸು ಬಾರದೆ ಮಾವು ಬೆಳೆಗಾರ ಕಂಗಾಲಾಗಿದ್ದಾರೆ. ಅತ್ತ ಬಿಸಾಡಲು ಮನಸ್ಸಿಲ್ಲದೆ ಇತ್ತ ಉತ್ತಮ ಬೆಲೆಯೂ ಇಲ್ಲದೆ ಮಾರುಕಟ್ಟೆಯಲ್ಲಿಯೇ ಮಾವು ಕೊಳೆಯುವಂತಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವರ್ಷಕೊಮ್ಮೆ ಬರುವ ಮಾವಿನ ಸೀಸನ್‌ ಮಾವು ಪ್ರಿಯರು ಎದುರು ನೋಡುವಂತೆ ಬೆಳೆಗಾರರು ಉತ್ತಮ ಬೆಳೆ ಮತ್ತು ದರಕ್ಕೆ ಎದರು ನೋಡುತ್ತಿರುತ್ತಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಇಲ್ಲದೆ ರಾಶಿ ರಾಶಿ ಮಾವು ಕೊಳೆಯುತ್ತಿದೆ. ಕಳೆದ 10-15 ದಿನಗಳಿಂದ ಏಕಾಏಕಿ ಬೆಲೆ ಕುಸಿತಗೊಂಡ ಹಿನ್ನೆಲೆಯಲ್ಲಿ ಮಾವು ಬೆಳಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಯಾವ ಮಾವಿನ ತೋಟಕ್ಕೆ ಹೋದರೂ ಮರದ ತುಂಬಾ ಕಾಯಿ, ಮಾವಿನ ಮಂಡಿಯಲ್ಲಿ ಕೈ ತುಂಬಾ, ಬಾಕ್ಸ್ ಗಳಲ್ಲೂ ಮತ್ತು ನೆಲದ ಮೇಲೂ ರಾಶಿ ರಾಶಿಯಾಗಿ ಮಾವಿನ ಹಣ್ಣುಗಳು ರಾರಾಜಿಸುತ್ತಿವೆ. ಜಿಲ್ಲೆಯಲ್ಲಿ ಈ ಬಾರಿ ಮಾವಿನ ಹಣ್ಣುಗಳ ಬೆಳೆ ನೂರಕ್ಕೆ ಶೇಕಡಾ ತೊಂಬತ್ತರಷ್ಟು ಚೆನ್ನಾಗಿಯೇ ಬೆಳೆದು ಉತ್ತಮ ಫಸಲು ರೈತನ ಕೈ ಸೇರಿದೆ.

ಮಾರುಕಟ್ಟೆಯಲ್ಲಿ ದರ ಕುಸಿತ

ಉತ್ತಮ ಬೆಲೆ ಸಿಗುತ್ತೆ ಎಂಬ ಆಸೆಯಿಂದ ಮಾರುಕಟ್ಟೆಗೆ ತಂದರೆ ಕಡಿಮೆ ಬೆಲೆಗೆ ಮಾರಾಟವಾಗುತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಬೆಲೆಗೆ ಮಾವು ಮಾರಾಟವಾಗುತ್ತಿದೆ. ಹಾಕಿದ ಬಂಡವಾಳ ವಾಪಸ್ಸು ಬಾರದೆ ಮಾವು ಬೆಳೆಗಾರ ಕಂಗಾಲಾಗಿದ್ದಾರೆ. ಒಂದು ವರ್ಷದಿಂದ ರೈತ ,ಮಾವಿನ ಹಣ್ಣುಗಳನ್ನು ಊಜಿನೊಣಗಳು, ತಿಗಣೆಗಳಿಂದ ಮತ್ತು ಮಳೆ, ಗಾಳಿಗೆ ಸಿಲುಕದೆ ಜೋಪಾನವಾಗಿ ಕಾಪಾಡಿಕೊಂಡು ಬೆಳೆದು ಮಾರುಕಟ್ಟೆಗೆ ತಂದರೆ ಬೆಲೆ ಇಲ್ಲ, ಮೂರು-ನಾಲ್ಕು ರೂಪಾಯಂತೆ ಅಗ್ಗದ ಬೆಲೆಗೆ ಮಾರಾಟ ಆಗುತ್ತಿದೆ. ಅತ್ತ ಬಿಸಾಡಲು ಮನಸ್ಸಿಲ್ಲದೆ ಇತ್ತ ಉತ್ತಮ ಬೆಲೆಯೂ ಇಲ್ಲದೆ ಮಾರುಕಟ್ಟೆಯಲ್ಲಿಯೇ ಕೊಳೆಯುವಂತಾಗಿದೆ.

ದಿಢೀರ್ ಬೆಲೆ ಕುಸಿತ:

ಜಿಲ್ಲೆಯಲ್ಲಿ ರೈತರು 40ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆದಿದ್ದಾರೆ. ಚಿಕ್ಕಬಳ್ಳಾಪುರದ ಮಾವಿನ ಹಣ್ಣು ಹೊರ ದೇಶಗಳಿಗೆ ಉತ್ತಮ ದರಕ್ಕೆ ರಫ್ತಾಗುತಿತ್ತು, ಕಳೆದ ಬಾರಿಗೆ ಹೋಲಿಸಿಕೊಂಡರೇ ಮಾವಿನ ಹಣ್ಣಿನ ಬೆಲೆಯಲ್ಲಿ ಬಾರಿ ಕುಸಿತ ಕಂಡಿದೆ. ಮಾರಾಟಗಾರರು ಮಾತ್ರ ಇಮಾಯತ್ ಮಾವಿನ ಹಣ್ಣಿನ ಬೆಲೆ 50 ರೂಪಾಯಿಂದ 70 ರೂಪಾಯಿಗೆ ,ಮಲ್ಲಿಕಾ 30 ರಿಂದ 50ರೂಗಳಿಗೆ ,ಸಿಂದೂರ 12 ರಿಂದ 20 ರೂಗಳಿಗೆ, ರಸಪೂರಿ 20 ರಿಂದ 40 ರು.ಗಳಿಗೆ, ಬೆನಿಷಾ 15 ರಿಂದ 20 ರು., ತೋತಾಪೂರಿ 10 ರಿಂದ 30ರೂಗಳಿಗೆ ಮಾರಾಟವಾಗುತ್ತಿದೆ. ಆದರೆ ವಾಸ್ತವಿಕವಾಗಿ ವ್ಯಾಪಾರಿಗಳು ಬೆಳೆಗಾರರಿಗೆ ಪ್ರತಿ ಕೆಜಿಗೆ ನಾಲ್ಕೈದು ರು. ಮಾತ್ರ ನೀಡುತ್ತಿದ್ದಾರೆ.

ಏಕಕಾಲಕ್ಕೆ ಮಾರುಕಟ್ಟೆಗೆ ಲಗ್ಗೆ

ಬೆಲೆ ಕುಸಿತದ ಕಾರಣ ಏನು ಅಂತ ಮಾರುಕಟ್ಟೆಯ ಏಜೆಂಟರುಗಳನ್ನು ಕೇಳಿದಾಗ ಅವರು ಈಬಾರಿ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳು ನಾಡುಗಳಲ್ಲಿಯೂ ಎಥೇಚ್ಚವಾಗಿ ಮಾವಿನ ಫಸಲು ಬಂದಿದ್ದು, ಎಲ್ಲವೂ ಏಕ ಕಾಲಕ್ಕೆ ಮಾರುಕಟ್ಟೆಗೆ ಬಂದಿದ್ದರಿಂದ ಕೊಳ್ಳುವವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ.

ಕಳೆದ ಬಾರಿಯೂ ನಷ್ಟ

ಕಳೆದ ಸಾಲಿನಲ್ಲಿ ಇಳುವರಿ ಕಡಿಮೆಯಾಗಿ ವ್ಯಾಪಾರಿಗಳು ದಳ್ಳಾಳಿಗಗೆ ಲಾಭವಾಗಿ ರೈತನಿಗೆ ನಷ್ಟವಾಗಿತ್ತು. ಈ ಬಾರಿ ಉತ್ತಮ ಫಸಲು ಬಂದರೂ ಬೆಲೆ ಇಲ್ಲದೆ ರೈತನಿಗೆ ನಷ್ಟ ಉಂಟಾಗಿದೆ. ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ಆಗಿರುವ ನಷ್ಟ ತುಂಬಿಸುವಂತೆ ಮಾವು ಬೆಳೆಗಾರರ ಮತ್ತು ರೈತ ಹೋರಾಟಗಾರರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ