ಪುಸ್ತಕ ಬಾರದೇ ವಿದ್ಯಾರ್ಥಿಗಳ ಓದಿಗೆ ಅಡ್ಡಿ

KannadaprabhaNewsNetwork |  
Published : Jun 25, 2025, 12:34 AM IST
ಪೊಟೋ-ಸರ್ಕಾರಿ ಶಾಲೆಗಳಲ್ಲಿ ಈಗ ಲಭ್ಯ ಇರುವ ಪಠ್ಯ ಪುಸ್ತಕಗಳು | Kannada Prabha

ಸಾರಾಂಶ

2025-26ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆಯುತ್ತ ಬಂದರೂ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಪಠ್ಯ- ಪುಸ್ತಕ ವಿತರಣೆಯಾಗದೇ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ.

ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: 2025-26ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆಯುತ್ತ ಬಂದರೂ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಪಠ್ಯ- ಪುಸ್ತಕ ವಿತರಣೆಯಾಗದೇ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ.

ಸರ್ಕಾರ ಪ್ರಾಥಮಿಕ ಮತ್ತು ಪೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯ -ಪುಸ್ತಕ ಉಚಿತವಾಗಿ ವಿತರಣೆ ಮಾಡುತ್ತಿದ್ದು, ಶಾಲಾ- ಕಾಲೇಜುಗಳು ಆರಂಭವಾಗಿ ಒಂದು ತಿಂಗಳು ಗತಿಸುತ್ತ ಬಂದಿದ್ದರೂ ಲಕ್ಷ್ಮೇಶ್ವರ ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ವಿತರಣೆಯಾಗಿಲ್ಲ.

ಪ್ರಾಥಮಿಕ ವಿಭಾಗದಲ್ಲಿ 1ನೇ ತರಗತಿ ಗಣಿತ, 2ನೇ ತರಗತಿಯ ಇಂಗ್ಲಿಷ್‌, 3ನೇ ತರಗತಿಯ ಇಂಗ್ಲಿಷ್‌, 5ನೇ ತರಗತಿಯ ಸಮಾಜ ವಿಜ್ಞಾನ, 6ನೇ ತರಗತಿಯ ಕನ್ನಡ ಮತ್ತು ಇಂಗ್ಲಿಷ್‌ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 8 ನೇ ತರಗತಿಯ ಇಂಗ್ಲಿಷ್‌, ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ, 9ನೇ ತರಗತಿಯ ಕನ್ನಡ, ಇಂಗ್ಲಿಷ್‌, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ-ಭಾಗ 2 ಹಾಗೂ 10ನೇ ತರಗತಿಯಲ್ಲಿ ಕನ್ನಡ. ಇಂಗ್ಲಿಷ್‌, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪುಸ್ತಕಗಳು ಇದುವರೆಗೂ ಬಂದಿರುವುದಿಲ್ಲ.

ಪ್ರೌಢಶಾಲಾ ವಿಭಾಗದಲ್ಲಿ ಪ್ರಮುಖ ವಿಷಯಗಳ ಪುಸ್ತಕಗಳು ಇದುವರೆ ಬಾರದಿರುವುದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಈಗಲಾದರೂ ಸರ್ಕಾರ ಆದಷ್ಟು ಬೇಗನೆ ಉಳಿದಿರುವ ಪುಸ್ತಕ ನೀಡಿ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಒಕ್ಕೂರಲ ಕೂಗಾಗಿದೆ. ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳು ಹೋಗುತ್ತಾರೆ. ಸರ್ಕಾರ ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಶಾಲಾ ಕಾಲೇಜುಗಳು ಆರಂಭವಾಗಿ ತಿಂಗಳು ಕಳೆಯುತ್ತ ಬಂದಿದ್ದರೂ ಸರ್ಕಾರ ಎಲ್ಲ ಪುಸ್ತಕ ನೀಡುವಲ್ಲಿ ವಿಳಂಬ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಇದುವರೆಗೂ ಶೂ ನೀಡಿಲ್ಲ ಎಂದು ನ್ಯಾಯವಾದಿ ಬಸವರಾಜ ಬಾಳೇಶ್ವರಮಠ ಹೇಳಿದರು.

ಸರ್ಕಾರ ಹಂತ ಹಂತವಾಗಿ ನಮ್ಮ ತಾಲೂಕಿಗೆ ನೀಡಿರುವ ಪಠ್ಯ ಪುಸ್ತಕಗಳನ್ನು ಈಗಾಗಲೇ ನೀಡಿರುತ್ತೇವೆ. ಪ್ರಾಥಮಿಕ ವಿಭಾಗದಲ್ಲಿ ಶೇ 90ರಷ್ಟು ಪುಸ್ತಕ ನೀಡಿದ್ದೇವೆ. ಪ್ರೌಢಶಾಲಾ ವಿಭಾಗದಲ್ಲಿ ಶೇ 20ರಷ್ಟು ಪುಸ್ತಕ ನೀಡಿದ್ದೇವೆ. ಇನ್ನೊಂದು ವಾರದಲ್ಲಿ ಉಳಿದ ಪುಸ್ತಕ ಬರುವ ನಿರೀಕ್ಷೆ ಇದ್ದು ಅವುಗಳನ್ನು ನೀಡಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಬಿಇಒ ಎಚ್‌.ಎನ್‌. ನಾಯ್ಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ