ಮಾಹೆಯ ಆಧುನಿಕ ಕ್ರೀಡಾಂಗಣ ಮರೇನಾ, ಕ್ಯಾಂಪಸ್ನಲ್ಲಿರುವ ಸೌಲಭ್ಯಗಳು, ಶೈಕ್ಷಣಿಕ ವಿಭಾಗ, ವ್ಯವಸ್ಥೆಗಳನ್ನು ವೀಕ್ಷಿಸಿದ ಗೃಹ ಸಚಿವರು, ಮಾಹೆಯ ದೀರ್ಘಕಾಲದ ಪರಂಪರೆ ಹಾಗೂ ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆ ಕ್ಷೇತ್ರಗಳಲ್ಲಿ ಕಾಪಾಡಿಕೊಂಡಿರುವ ಉನ್ನತ ಮಟ್ಟದ ಮಾನದಂಡಗಳನ್ನು ಪ್ರಶಂಸಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಅಂತಾರಾಷ್ಟ್ರೀಯ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾನ್ಯತೆ ಪಡೆದಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ಗೆ ಶನಿವಾರ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ನೀಡಿದರು.ಈ ಸಂದರ್ಭ ಮಾಹೆಯ ಆಧುನಿಕ ಕ್ರೀಡಾಂಗಣ ಮರೇನಾ, ಕ್ಯಾಂಪಸ್ನಲ್ಲಿರುವ ಸೌಲಭ್ಯಗಳು, ಶೈಕ್ಷಣಿಕ ವಿಭಾಗ, ವ್ಯವಸ್ಥೆಗಳನ್ನು ವೀಕ್ಷಿಸಿದ ಸಚಿವರು, ಮಾಹೆಯ ದೀರ್ಘಕಾಲದ ಪರಂಪರೆ ಹಾಗೂ ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆ ಕ್ಷೇತ್ರಗಳಲ್ಲಿ ಕಾಪಾಡಿಕೊಂಡಿರುವ ಉನ್ನತ ಮಟ್ಟದ ಮಾನದಂಡಗಳನ್ನು ಪ್ರಶಂಸಿಸಿದರು.ನಂತರ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಹೆಯು ವಿಶ್ವಮಟ್ಟದ ಮೂಲಸೌಕರ್ಯ, ವೈವಿಧ್ಯಮಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬದ್ಧತೆ, ಶಿಕ್ಷಣದಲ್ಲಿ ಅಳವಡಿಸಿಕೊಂಡಿರುವ ಅಂತಾರಾಷ್ಟ್ರೀಯ ಮಾನದಂಡಗಳು ಪ್ರಸಂಶನೀಯ. ಉನ್ನತ ಶಿಕ್ಷಣದ, ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಡುವ ಮಾಹೆಯು ರಾಷ್ಟ್ರೀಯ ಹಾಗೂ ಜಾಗತಿಕ ಆರೋಗ್ಯ ಕ್ಷೇತ್ರಗಳಲ್ಲಿ ಅಗಾಧ ಕೊಡುಗೆಯನ್ನು ನೀಡುತ್ತಿದೆ ಎಂದರು.ಭಾರತದ ವಿಸ್ತರಿಸುತ್ತಿರುವ ಶೈಕ್ಷಣಿಕ ಮತ್ತು ಆರೋಗ್ಯದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸುವ ಮಹತ್ವವನ್ನು ಒತ್ತಿ ಹೇಳಿದರು. ನಿಪುಣ ತಜ್ಞರ ತಯಾರಿ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಶೈಕ್ಷಣಿಕ ಶಿಸ್ತಿನ ಕಡೆಗೆ ಮಾಹೆ ನೀಡಿರುವ ವಿಶೇಷ ಕೊಡುಗೆಯನ್ನು ಗುರುತಿಸಿದರು.ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಳ್ಳಾಲ್, ಸಚಿವ ಡಾ. ಪರಮೇಶ್ವರರನ್ನು ಸ್ವಾಗತಿಸಿ ಗೌರವಿಸಿದರು. ಸಹಉಪಕುಲಾಧಿಪತಿ ಡಾ. ನಾರಾಯಣ ಸಭಾಹಿತ್, ಮಾಜಿ ಸಚಿವ ಅಭಯಚಂದ್ರ ಜೈನ್, ಪ.ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಎಸ್ಪಿ ಹರಿರಾಮ್ ಶಂಕರ್, ಜಿಪಂ ಸಿಇಓ ಪ್ರತೀಕ್ ಬಾಯಲ್ ಮುಂತಾದವರು ಉಪಸ್ಥಿತರಿದ್ದರು. ಕುಲಸಚಿವ ಡಾ. ಗಿರಿಧರ ಕಿಣಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.