ಬೆಳ್ತಂಗಡಿ : ಧರ್ಮ ವಿರೋಧಿಗಳ ಮುಖವಾಡ ಬಯಲಾಗುತ್ತಿದ್ದು, ಒಂದೊಂದೇ ಸತ್ಯಗಳು ಹೊರಬೀಳುತ್ತಿವೆ. ಎಸ್ಐಟಿ ತನಿಖೆ ನಡೆಯುತ್ತಿರುವುದರಿಂದ ಹೆಚ್ಚೇನು ಮಾತನಾಡುವುದಿಲ್ಲ. ಒಟ್ಟಾರೆ ಪ್ರಕರಣದಿಂದ ಸತ್ಯವನ್ನು ತೊಳೆದಿಟ್ಟಂತಾಗಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು. ಎಲ್ಲರ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಕಾರ್ಕಳ ಸೀಮೆಯ ಜೈನ ಬಾಂಧವರು ಶನಿವಾರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರನ್ನು ಗೌರವಿಸಿದ ಸಂದರ್ಭ ದೂರುದಾರನ ಬಂಧನ ಕುರಿತು ಪ್ರತಿಕ್ರಿಯಿಸಿದರು.ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳ ಚರ್ತುವಿಧ ದಾನ ಪರಂಪರೆಯೊಂದಿಗೆ ವಿಶ್ವವಿಖ್ಯಾತವಾಗಿದೆ. ಕ್ಷುಲ್ಲಕ ಕಾರಣದಿಂದ, ಮಾಧ್ಯಮಗಳಲ್ಲಿ ಅಪಪ್ರಚಾರದಿಂದ ಎಲ್ಲರಿಗೂ ತೀವ್ರ ದುಃಖವಾಗಿದೆ.
ಧರ್ಮಸ್ಥಳದ ಭವ್ಯ ಪರಂಪರೆ ಹಾಗೂ ಹೆಗ್ಗಡೆಯವರ ಬಹುಮುಖಿ ಸಮಾಜಸೇವಾ ಕಾರ್ಯಗಳನ್ನು ಬೆಂಬಲಿಸಿ ಸಕ್ರಿಯ ಸಹಕಾರ ನೀಡುವುದು ಸಮಗ್ರ ಜೈನ ಸಮಾಜದ ಕರ್ತವ್ಯ ಎಂದು ಹೇಳಿದರು.ಕೆಸರಾದ ನೀರನ್ನು ಮತ್ತೆ ತಿಳಿಯಾಗಿ ಪರಿಶುದ್ಧಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಪಪ್ರಚಾರ, ಆರೋಪಗಳಲೆಲ್ಲ ದೂರವಾಗಲಿ. ಹೆಗ್ಗಡೆಯವರಿಗೆ ಎಲ್ಲ ದೈವ-ದೇವರು ದೀರ್ಘಾಯುರಾರೋಗ್ಯವನ್ನಿತ್ತು ಇನ್ನಷ್ಟು ಲೋಕಕಲ್ಯಾಣ ಕಾರ್ಯಗಳನ್ನು ಮಾಡುವಂತೆ ಹರಸಲೆಂದು ಸ್ವಾಮೀಜಿ ಪ್ರಾರ್ಥಿಸಿದರು.
ಕಾರ್ಕಳ ಸೀಮೆಯ ಎಲ್ಲ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪುರೋಹಿತರು ತಂದ ಪ್ರಸಾದವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು.ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸತ್ಯಕ್ಕೆ ಸದಾ ಜಯವಿದೆ. ಮಾತುಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸತ್ಯ ಪ್ರಕಟವಾಗುವುದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗಲಿ. ಹೆಗ್ಗಡೆಯವರ ಜೊತೆ ನಾವೆಲ್ಲ ಸದಾ ಪೂರ್ಣ ಬೆಂಬಲ ನೀಡಲು ಸಿದ್ಧ ಎಂದು ಭರವಸೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಶಿರ್ತಾಡಿಯ ಎಸ್.ಡಿ. ಸಂಪತ್ ಸಾಮ್ರಾಜ್ಯ, ಸುದರ್ಶನ ಜೈನ್ ಬಂಟ್ವಾಳ, ಪುಷ್ಪರಾಜ ಜೈನ್ ಮಂಗಳೂರು, ಕುಲದೀಪ್ ಚೌಟರ ಅರಮನೆ, ಅಂಡಾರು ಮಹಾವೀರ ಹೆಗ್ಡೆ, ಅನಂತ್ರಾಜ ಪೂವಣಿ, ಶಿಶುಪಾಲ ಜೈನ್, ಮೋಹನ ಪಡಿವಾಳ್, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಗುಣವರ್ಮ ಜೈನ್, ಕಾರ್ಕಳ, ನೇಮಿರಾಜ ಆರಿಗ ಮೊದಲಾದವರು ಇದ್ದರು.
ಕಾರ್ಕಳ ಸೀಮೆಯಿಂದ ಸುಮಾರು ಮುನ್ನೂರು ಮಂದಿ ಶ್ರಾವಕರು-ಶ್ರಾವಕಿಯರು ಆಗಮಿಸಿದರು.