ಮಣಿಪಾಲ: ಅಂಗಾಂಗ ದಾನವು ಯುವಜನರಿಗೆ ಮಾತ್ರ ಸೀಮಿತ ಎಂಬ ಸಾಮಾನ್ಯ ಕಲ್ಪನೆಯನ್ನು ಇಲ್ಲಿನ 76 ವರ್ಷದ ಮಹಿಳೆ ಸುಳ್ಳು ಮಾಡಿ, ಬೇರೆಯವರ ಸಾವಿನ ಬಳಿಕವೂ ಇತರರ ಜೀವ ಉಳಿಸಲು ವಯಸ್ಸು ಅಡ್ಡಿಯಲ್ಲ ಎಂಬ ಸ್ಫೂರ್ತಿದಾಯಕ ಸಂದೇಶ ಸಾರಿದ್ದಾರೆ. ಗಂಗೊಳ್ಳಿಯ ನಿವಾಸಿ ಜೆನ್ನಿ ಡಿಸೋಜಾ (76) ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಕುಟುಂಬವು ಅವರ ಅಂಗಾಂಗ ದಾನ ಮಾಡಿದೆ. ಜೆನ್ನಿ ಹಠಾತ್ ತಲೆಸುತ್ತು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಪ್ರಜ್ಞಾಹೀನರಾಗಿ ತುರ್ತಾಗಿ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ವೈದ್ಯಕೀಯ ಪರೀಕ್ಷೆಗಳಲ್ಲಿ ಅವರಿಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆಗಿದ್ದು, ಅವರನ್ನು ಉಳಿಸಲು ವೈದ್ಯರು ನಡೆಸಿದ ಚಿಕಿತ್ಸಾ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಶಿಷ್ಟಾಚಾರಗಳ ನಂತರ ಅವರನ್ನು ಮೆದುಳು ನಿಷ್ಕ್ರಿಯಗೊಂಡ ರೋಗಿ ಎಂದು ಘೋಷಿಸಲಾಯಿತು.ದುಃಖದ ನಡುವೆಯೂ ಅವರ ಕುಟುಂಬವು ವೈದ್ಯರ ಸಲಹೆ ಮೇರೆಗೆ ಮಾನವೀಯ ನಿರ್ಧಾರ ಕೈಗೊಂಡಿತು. ಈ ಮಹತ್ತರ ನಿರ್ಧಾರದ ಫಲವಾಗಿ, ಅವರ ಯಕೃತ್ತು (ಲಿವರ್)ಅನ್ನು ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಅಳವಡಿಸಿ ಅವರ ಹೊಸ ಬದುಕಿನ ಕಾರಣವಾಯಿತು. ಅವರ ನೇತ್ರಗಳು ದೃಷ್ಟಿಹೀನರಿಗೆ ಬೆಳಕನ್ನು ನೀಡಲಿದ್ದು, ಚರ್ಮವು ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಈ ಬಗ್ಗೆ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ನಾವು ಸಾಮಾನ್ಯವಾಗಿ ಅಂಗಾಂಗ ದಾನವನ್ನು ಯುವಜನರಿಗೆ ಮೀಸಲಾದದ್ದು ಎಂದು ಭಾವಿಸುತ್ತೇವೆ. ತಮ್ಮ 76 ವರ್ಷದ ಪ್ರೀತಿಪಾತ್ರರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಈ ಕುಟುಂಬವು ನಮಗೆ ಮಾದರಿಯಾಗಿದೆ. ಅವರ ಈ ನಿರ್ಧಾರವು ಇನ್ನೂ ನೂರಾರು ಕುಟುಂಬಗಳಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದ್ದಾರೆ.