ಕನ್ನಡಪ್ರಭ ವಾರ್ತೆ ಮಣಿಪಾಲ
ಕುಷ್ಠರೋಗ ಜಾಗೃತಿ ಮಾಸಾಚರಣೆದ ಅಂಗವಾಗಿ ಇಲ್ಲಿನ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಗದ ತಂತ್ರ ವಿಭಾಗವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜಾಗೃತಿ ಸಂವಾದ, ಅಭಿಯಾನ ಮತ್ತು ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಲತಾ ನಾಯಕ್, ಸಂಸ್ಥೆಯ ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್, ಯುಪಿಎಚ್ಸಿ ಮಣಿಪಾಲದ ವೈದ್ಯಕೀಯ ಅಧಿಕಾರಿ ಡಾ.ಶಾಮಿನಿ ಕುಮಾರ್, ಯುಜಿ ಡೀನ್ ಡಾ.ಶುಭಾ, ಇಂಟರ್ನ್ ಮೇಲ್ವಿಚಾರಕರಾದ ಡಾ.ರಮೇಶ್, ಅಗದ ತಂತ್ರದ ಸಹಾಯಕ ಪ್ರಾಧ್ಯಾಪಕ ಡಾ.ವಾರುಣಿ ಎಸ್.ಬಾಯರಿ ಜಂಟಿಯಾಗಿ ಉದ್ಘಾಟಿಸಿದರು.ನಂತರ ಡಾ.ಲತಾ ನಾಯಕ್, ಕುಷ್ಠರೋಗದ ಕುರಿತು ಉಪನ್ಯಾಸ ನೀಡಿ, ರೋಗದ ಆರಂಭಿಕ ಪತ್ತೆ, ತಪಾಸಣೆ ಮತ್ತು ರೋಗನಿರ್ಣಯದ ಮಹತ್ವವನ್ನು ವಿಷಧೀಕರಿಸಿದರು.ಕಾರ್ಯಕ್ರಮದಲ್ಲಿ ಭರತ್ (ಆರೋಗ್ಯ ತಪಾಸಣಾ ಅಧಿಕಾರಿ), ರಾಜು (ಪಾರಾಮೆಡಿಕಲ್ ವರ್ಕರ್), ಸಾಗರ್ (ಎಂಐಎಸ್ ಸಿಬ್ಬಂದಿ), ಡಾ.ಶಾಮಿನಿ ಕುಮಾರ್ (ವೈದ್ಯಕೀಯ ಅಧಿಕಾರಿ, ಯುಪಿಎಚ್ಸಿ ಮಣಿಪಾಲ) ಮತ್ತು ಪರಶುರಾಮ್ (ಆರೋಗ್ಯ ತಪಾಸಣಾ ಅಧಿಕಾರಿ, ಯುಪಿಎಚ್ಸಿ ಮಣಿಪಾಲ) ಅವರು ವಿದ್ಯಾರ್ಥಿಗಳಿಗೆ ಕುಷ್ಠರೋಗದ ಸಮೀಕ್ಷೆ, ಮಾಹಿತಿ ಸಂಗ್ರಹಣೆ ಮತ್ತು ರೋಗಿಗಳ ತಪಾಸಣೆ ನಡೆಸುವ ಕುರಿತು ಮಾರ್ಗದರ್ಶನ ನೀಡಿದರು.ನಂತರ ೫೦ ಸ್ವಯಂಸೇವಕ ವಿದ್ಯಾರ್ಥಿಗಳಿಗೆ ಮಂಚಿ ಮತ್ತು ಹುಡ್ಕೊ ಕಾಲೋನಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ತರಬೇತಿ ನೀಡಲಾಯಿತು. ಸುಮಾರು ೧೫೪೦ ಮನೆಗಳನ್ನು ಸಮೀಕ್ಷೆ ನಡೆಸಲು ತಿರ್ಮಾನಿಸಲಾಯಿತು.ಆಸ್ಪತ್ರೆಯಲ್ಲಿ ಫೆ.೧೦ರಿಂದ ೨೨ರ ವರೆಗೆ ಬೆಳಗ್ಗೆ ೯ರಿಂದ ಸಂಜೆ ೪ರ ವರೆಗೆ ಚರ್ಮದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ.ಈ ಕಾರ್ಯಕ್ರಮವು ಚರ್ಮ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು, ಆರಂಭಿಕ ರೋಗ ನಿರ್ಣಯವನ್ನು ಉತ್ತೇಜಿಸಲು ಮತ್ತು ಸಮುದಾಯಕ್ಕೆ ವೈದ್ಯಕೀಯ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿದೆ.