ಮಣಿಪಾಲ: ವೈದ್ಯಕೀಯ ಸ್ಯಾಂಪಲ್‌ ಸಾಗಾಟಕ್ಕೆ ಡ್ರೋನ್ ಬಳಕೆ

KannadaprabhaNewsNetwork |  
Published : Apr 11, 2024, 12:49 AM IST
ಡ್ರೋನ್10 | Kannada Prabha

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಜಂಟಿಯಾಗಿ ಈ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿವೆ. ಮುಂದೆ ಕರ್ನಾಟಕದ ಇತರ ಆಸ್ಪತ್ರೆಗಳ ನಡುವೆ ವೈದ್ಯಕೀಯ ಮಾದರಿಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆಯು ಹೊಂದಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ವೈದ್ಯಕೀಯ ಮಾದರಿ (ಸ್ಯಾಂಪಲ್)ಯೊಂದನ್ನು ಕಾರ್ಕಳದ ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆಯಿಂದ 35 ಕಿ.ಮೀ. ದೂರದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಡ್ರೋನ್ ನಲ್ಲಿ ತರುವ ಮೂಲಕ ವೈದ್ಯಕೀಯ ಉದ್ದೇಶಕ್ಕಾಗಿ ಡ್ರೋನ್ ಬಳಕೆಯ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಲಾಯಿತು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಜಂಟಿಯಾಗಿ ಈ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿವೆ. ಮುಂದೆ ಕರ್ನಾಟಕದ ಇತರ ಆಸ್ಪತ್ರೆಗಳ ನಡುವೆ ವೈದ್ಯಕೀಯ ಮಾದರಿಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆಯು ಹೊಂದಿದೆ.

ಈ ಯೋಜನೆಯಿಂದ ಸಾರಿಗೆ ವ್ಯವಸ್ಥೆಯ ಕೊರತೆ ಇರುವ ಗ್ರಾಮೀಣ ಪ್ರದೇಶದ ರೋಗಿಗಳ ವೈದ್ಯಕೀಯ ಮಾದರಿಗಳನ್ನು ಆಸ್ಪತ್ರೆಗೆ ಶೀಘ್ರ ಮತ್ತು ಸುರಕ್ಷಿತವಾಗಿ ಸಾಗಿಸುವ ಮೂಲಕ ಆರೋಗ್ಯ ಸೇವೆಗಳ ವಿತರಣೆಯಲ್ಲಿ ಕ್ರಾಂತಿ ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಮಾನವರಹಿತ ವೈಮಾನಿಕ ವಾಹನ (ಡ್ರೋನ್‌)ಗಳು ಆರೋಗ್ಯ, ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಜನಪ್ರಿಯತೆ ಗಳಿಸುತ್ತಿದ್ದು, ಪ್ರಥಮ ಬಾರಿಗೆ ಮಣಿಪಾಲದಲ್ಲಿ ಪರಿಚಯಿಸಲಾಗುತ್ತಿದೆ.

ಈ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ ಡಾ. ರಾಜೀವ್ ಬಹ್ಲ್, ಜಂಟಿ ಕಾರ್ಯದರ್ಶಿ ಡಾ. ಕಾಮಿನಿ ವಾಲಿಯಾ, ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯೆಲ್, ಐ.ಸಿ.ಎಂ.ಆರ್.ನ ಹೆಚ್ಚುವರಿ ಮಹಾನಿರ್ದೇಶಕ ಡಾ. ಸಂಘಮಿತ್ರ ಪತಿ, ಭುವನೇಶ್ವರದ ಐ.ಸಿ.ಎಂ.ಆರ್.-ಆರ್.ಎಂ,ಆರ್.ಸಿ. ನ ನಿರ್ದೇಶಕ ಅನು ನಗರ್, ಮಾಹೆಯ ಕುಲಪತಿ ಲೆ.ಜ. (ಡಾ) ಎಂ.ಡಿ.ವೆಂಕಟೇಶ್, ಸಹಕುಲಪತಿ (ಆರೋಗ್ಯ ವಿಜ್ಞಾನ) ಡಾ ಶರತ್ ಕೆ ರಾವ್ ಉಪಸ್ಥಿತರಿದ್ದರು. ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಐ.ಸಿ.ಎಂ.ಆರ್‌.ನ ವಿಜ್ಞಾನಿ ಡಾ. ಸುನಿಲ್ ಅಗರ್ವಾಲ್ ಸ್ವಾಗತಿಸಿದರು. ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ ಕೃತಜ್ಞತೆಗಳನ್ನು ಸಲ್ಲಿಸಿದರು.

ಮಾಹೆ ಸಹಕುಲಪತಿ (ತಂತ್ರಜ್ಞಾನ - ವಿಜ್ಞಾನ) ಡಾ.ನಾರಾಯಣ ಸಭಾಹಿತ್, ಕುಲಸಚಿವ ಡಾ.ಗಿರಿಧರ್ ಕಿಣಿ, ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಣಿಪಾಲ ಬೋಧನಾ ಆಸ್ಪತ್ರೆಯ ಸಿಓಓ ಡಾ. ಆನಂದ್ ವೇಣುಗೋಪಾಲ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ ನ ಡೀನ್ ಡಾ.ಅರುಣ್ ಮಯ್ಯ ಡೀನ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮತ್ತು ಐ ಸಿ ಎಂ ಆರ್.ನ ಡಾ. ಕುಲದೀಪ್ ನಿಗಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ