ಮಡಿಕೇರಿ: ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗುವಲ್ಲಿ ಯುಕೊ ಸಂಘಟನೆಯ ಪಾತ್ರವನ್ನು ಪರಿಗಣಿಸಿ ಪೊನ್ನಂಪೇಟೆಯ ವಸಂತನಗರದ ಶ್ರೀ ಇಗ್ಗುತ್ತಪ್ಪ ಕೊಡವ ಕೂಟದ ವತಿಯಿಂದ ಕೂಟದ ಅಧ್ಯಕ್ಷರಾದ ಚೇಂದಿರ ಅಪ್ಪಯ್ಯನವರ ನೇತೃತ್ವದಲ್ಲಿ, ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪನವರನ್ನು ಚಿನ್ನದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಚೇಂದಿರ ಅಪ್ಪಯ್ಯ, ಎಲ್ಲರೂ ಸ್ವಂತಕ್ಕಾಗಿ ದುಡಿಯುವಲ್ಲಿ ನಿರತರಾಗಿರುವಾಗ ಸಮಾಜ ಹಾಗೂ ಜನಾಂಗಕ್ಕಾಗಿ ದುಡಿಯುವವರನ್ನು ಗೌರವದಿಂದ ಕಾಣಬೇಕಿದೆ. ಈ ನಿಟ್ಟಿನಲ್ಲಿ ಕೊಡವ ಜನಾಂಗದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಮಂಜು ಚಿಣ್ಣಪ್ಪ ಹಾಗೂ ಅವರ ಬಳಗದ ಕೊಡುಗೆ ಅಪಾರವಾದುದು. ಕೊಡವ ಅಭಿವೃದ್ಧಿ ನಿಗಮದ ಯಶಸ್ಸು ಸಾಮಾನ್ಯ ವಿಷಯವಲ್ಲ, ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವುದು ನಮಗೆ ಹೆಮ್ಮೆಯೆನಿಸಿದೆ ಎಂದು ಹೇಳಿದರು.
ಮತ್ತೊಬ್ಬ ಹಿರಿಯರಾದ ಕಲ್ಳೇಂಗಡ ಶಂಬು ಮಾತನಾಡಿ, ಕೊಡವ ಅಭಿವೃದ್ದಿ ನಿಗಮ ಘೋಷಣೆಯಾಗಿರುವುದು ನಮಗೆಲ್ಲ ಅತೀವ ಸಂತೋಷ ತಂದಿದೆ. ಈ ವಿಷಯದಲ್ಲಿ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹಾಗು ಮಂಜು ಚಿಣ್ಣಪ್ಪನವರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.ಕೂಟದ ಕಾರ್ಯದರ್ಶಿ ಹಾಗು ಕರ್ನಾಟಕ ಕೊಡವ ಸಾಹಿತ್ಯ ಅಖಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ನಮ್ಮಲ್ಲಿ ಮಾತನಾಡುವವರ ಸಂಖ್ಯೆ ಬಹಳಷ್ಟಿದೆ, ಆದರೆ ಜನಾಂಗಕ್ಕೆ ಕೆಲಸ ಮಾಡುವವರು ವಿರಳ. ಅಂತದ್ದರಲ್ಲಿ ಯುಕೊ ಸಂಘಟನೆ ಸದ್ದಿಲ್ಲದೆ ಹಿಡಿದ ಕೆಲಸವನ್ನು ಸಾಧಿಸಿ ತೋರಿಸಿರುವುದು ಕೊಡವರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.