ಕನ್ನಡಪ್ರಭ ವಾರ್ತೆ ಅರಕಲಗೂಡು
ಕಳೆದ ನಾಲ್ಕು ದಶಕಗಳಿಂದಲೂ ಕೂಡ ನಿರಂತರವಾಗಿ ಕ್ಷೇತ್ರದ ರಾಜಕಾರಣದಲ್ಲಿ ತೊಡಗಿಕೊಂಡಿರುವ ಎ.ಮಂಜು ಅವರು ನಾಲ್ಕುಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಒಂದು ಅವಧಿಯಲ್ಲಿ ಪಶು ಸಂಗೋಪನೆ, ರೇಷ್ಮೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಅವರು ಇತರೆ ರಾಜಕಾರಣಿಗಳಂತೆ ಅಧಿಕಾರದ ಮದದಿಂದ ಮೆರೆದವರಲ್ಲ. ಇದಕ್ಕೆ ಪ್ರಮುಖ ಸಾಕ್ಷಿ ಪಟ್ಟಣದ ಕೋಟೆಯಲ್ಲಿನ ಪುಟ್ಟ ಗೂಡಂಗಡಿಯ ರಸ್ತೆ ಬದಿ ಸಾಮಾನ್ಯರಂತೆ ಪ್ಲಾಸ್ಟಿಕ್ ಸ್ಟೂಲ್ನಲ್ಲಿ ಕುಳಿತು, ಗಾಜಿನ ಲೋಟದಲ್ಲಿ ಕಾಫಿಯನ್ನು ಕುಡಿಯುತ್ತಾ ತಮ್ಮ ಬಳಿ ಬಂದ ಜನರಿಗೆ ಟೀ ಕುಡಿಸಿ, ಸಮಸ್ಯೆಯನ್ನು ಆಲಿಸಿ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.ಅಲ್ಲದೆ ರಾಜಕಾರಣಕ್ಕೆ ಬರುತ್ತಿರುವ ಯುವ ಸಮುದಾಯಕ್ಕೆ ಆದರ್ಶಪ್ರಾಯರಾಗಿದ್ದಾರೆ ಎನ್ನಬಹುದು.
ರಸ್ತೆ ಬದಿಯಲ್ಲಿನ ಗೂಡಂಗಡಿಯಲ್ಲಿ ಶಾಸಕರು ಕುಳಿತ ಕಾಫಿ ಸೇವನೆ ಮಾಡುತ್ತಿರುವುದನ್ನು ಕಂಡ ತಹಸೀಲ್ದಾರ್ ಸೌಮ್ಯ, ಬಿಇಒ ಕೆ.ಪಿ.ನಾರಾಯಣ ಅವರು ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲು ಮುಜುಗರಪಟ್ಟರು. ಮೇಡಂ ನಾವೆಲ್ಲರೂ ಜನ ಸೇವಕರು, ಜನರ ನಡುವೆಯೇ ನಮ್ಮ ಕೆಲಸ ಕಾರ್ಯಗಳು ನಡೆಯುತ್ತವೆ. ಇಲ್ಲಿ ಸೇರಿರುವ ಬಹುತೇಕರು ಬಡವರೇ ,ಇವರು ನನ್ನನ್ನು ಒಬ್ಬ ಸಾಮಾನ್ಯ ಮನುಷ್ಯನಂತೆ ನನ್ನ ರಾಜಕೀಯ ಜೀವನದ ಆರಂಭದಿಂದಲೂ ಕಾಣುತ್ತಾರೆ. ಇವರ ನಡುವೆ ನಾನು ಕುಳಿತ ಕಾಫಿ ಕುಡಿಯುವುದು, ಸಮಸ್ಯೆ ಆಲಿಸುವುದು ಅತೀವ ಸಂತಸದ ಕ್ಷಣವಾಗಿದೆ. ನೀವು ಯಾವುದೇ ಮುಜುಗರಪಟ್ಟುಕೊಳ್ಳದೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿ ಎಂದು ಶಾಸಕ ಎ.ಮಂಜು ಅವರು ತಿಳಿಸಿದಾಗ ತಹಸೀಲ್ದಾರ್ ಆಹ್ವಾನ ಪತ್ರಿಕೆ ನೀಡಿದರು.ಅಧಿಕಾರಿಗಳನ್ನು ಇಷ್ಟಕ್ಕೆ ಬಿಡದ ಶಾಸಕರು, ಅವರಿಗೂ ಕೂಡ ಟೀ ಕುಡಿಸಿ ಬೀಳ್ಕೊಟ್ಟರು.-