ಗೆಡ್ಡೆ ಗೆಣಸು ಮೇಳಕ್ಕೆ ಚಾಲನೆ

KannadaprabhaNewsNetwork | Published : Mar 3, 2024 1:34 AM

ಸಾರಾಂಶ

ಮೂರು ದಿನಗಳ ಮೇಳದಲ್ಲಿ ಪರ್ಪಲ್ ಯಾಮ್, ಸಿಹಿ ಗೆಣಸು, ಕೆಸು, ಸುವರ್ಣ ಗೆಡ್ಡೆ, ಬಳ್ಳಿ ಆಲೂಗೆಡ್ಡೆ, ಕೂವೆ ಗೆಡ್ಡೆ, ಬಣ್ಣದ ಸಿಹಿ ಗೆಣಸು, ಹಸಿರು ಮತ್ತು ಕಪ್ಪು ಹರಿಷಿಣ, ಮಾವಿನ ಶುಂಠಿ ಮೊದಲಾದ ಗೆಡ್ಡೆ ಗೆಣಸು ಪ್ರದರ್ಶನ ಮತ್ತು ಮಾರಾಟಕ್ಕೆ ಬಂದಿವೆ. ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ, ದೇಸಿ ಅಕ್ಕಿ, ಸಿರಿಧಾನ್ಯಗಳು, ಜವಾರಿ ಬೀಜಗಳು, ಗಾಣದ ಎಣ್ಣೆ , ಮತ್ತು ಸಾವಯವ ಪದಾರ್ಥಗಳು ಮಾರಾಟಕ್ಕಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ನಜರ್ ಬಾದ್ ಮೊಹಲ್ಲಾದಲ್ಲಿರುವ ನೆಕ್ಸಸ್ ಸೆಂಟರ್ ಸಿಟಿನಲ್ಲಿ ಆಯೋಜಿಸಿರುವ ಮೂರು ದಿನಗಳ ಗೆಡ್ಡೆ ಗೆಣಸು ಮೇಳವನ್ನು ಡೆಲ್ಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಮಂಜು ಶರ್ಮ ಶುಕ್ರವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಳೆಯ ವೈಪರಿತ್ಯವನ್ನು ಎದುರಿಸಿ, ನೈಸರ್ಗಿಕವಾಗಿ ಬೆಳೆಯುವ ಗೆಡ್ಡೆ ಗೆಣಸುಗಳನ್ನು ನಮ್ಮ ನಿತ್ಯದ ಆಹಾರವಾಗಿ ಬಳಸಬೇಕು. ನಾರಿನಿಂದ ಸಮೃದ್ಧವಾಗಿರುವ ಗೆಡ್ಡೆ ಗೆಣಸುಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ನೆಕ್ಸಸ್ ಸೆಂಟರ್ ಸಿಟಿ ಕಾರ್ಯಾಚರಣೆ ಮುಖ್ಯಸ್ಥ ಎಂ.ಎಸ್. ಮೋಹನ್ ಕುಮಾರ್ ಮಾತನಾಡಿ, ಗೆಡ್ಡೆ ಗೆಣಸುಗಳ ವೈವಿಧ್ಯ ಅಪಾರವಾಗಿದೆ. ನಗರದ ಗ್ರಾಹಕರಿಗೆ ಗೆಡ್ಡೆ ಗೆಣಸುಗಳ ಮಹತ್ವದ ಅರಿವು ಮಾಡಿಕೊಡಲು ಮೇಳ ಆಯೋಜಿಸಲಾಗಿದೆ. ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಮೇಳದ ಆಯೋಜಕರಾದ ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಮಾತನಾಡಿ, ಗೆಡ್ಡೆ ಗೆಣಸಿನಿಂದ ಅಡುಗೆ ಮಾಡುವ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿದೆ. ಗೆಡ್ಡೆ ಗೆಣಸುಗಳನ್ನು ಉಳಿದ ತರಕಾರಿಗಳಂತೆ ನಿತ್ಯದ ಆಹಾರದಲ್ಲಿ ಬಳಸಬಹುದಾಗಿದೆ ಎಂದು ತಿಳಿಸಿದರು.

ಮೂರು ದಿನಗಳ ಮೇಳದಲ್ಲಿ ಪರ್ಪಲ್ ಯಾಮ್, ಸಿಹಿ ಗೆಣಸು, ಕೆಸು, ಸುವರ್ಣ ಗೆಡ್ಡೆ, ಬಳ್ಳಿ ಆಲೂಗೆಡ್ಡೆ, ಕೂವೆ ಗೆಡ್ಡೆ, ಬಣ್ಣದ ಸಿಹಿ ಗೆಣಸು, ಹಸಿರು ಮತ್ತು ಕಪ್ಪು ಹರಿಷಿಣ, ಮಾವಿನ ಶುಂಠಿ ಮೊದಲಾದ ಗೆಡ್ಡೆ ಗೆಣಸು ಪ್ರದರ್ಶನ ಮತ್ತು ಮಾರಾಟಕ್ಕೆ ಬಂದಿವೆ. ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ, ದೇಸಿ ಅಕ್ಕಿ, ಸಿರಿಧಾನ್ಯಗಳು, ಜವಾರಿ ಬೀಜಗಳು, ಗಾಣದ ಎಣ್ಣೆ , ಮತ್ತು ಸಾವಯವ ಪದಾರ್ಥಗಳು ಮಾರಾಟಕ್ಕಿವೆ.

ಡೆಲ್ಲಿ ಪಬ್ಲಿಕ್ ಶಾಲೆಯ ಅಮಿರಾ ಸುಭೋಯಿ, ನಂದಿತಾ ಫಿಲಿಪ್, ನೆಕ್ಸಸ್ ಸೆಂಟರ್ ಸಿಟಿಯ ಸಿ.ಎಸ್. ಮನು, ಮಧುಸೂದನ್, ಸಹಜ ಸಮೃದ್ಧದ ಕೆ.ಎಸ್. ಮಂಜು, ಕೋಮಲ್ ಕುಮಾರ್ ಇದ್ದರು.

Share this article