ಮನ್ಮಲ್‌: ದೆಹಲಿ ಮಾರುಕಟ್ಟೆಯಲ್ಲಿ 50 ಸಾವಿರ ಲೀಟರ್‌ ಹಾಲು ವಿಸ್ತರಣೆ

KannadaprabhaNewsNetwork |  
Published : May 21, 2025, 12:07 AM IST
20ಕೆಎಂಎನ್‌ಡಿ-6ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ ದೆಹಲಿಗೆ ಪೂರೈಕೆಯಾಗುತ್ತಿರುವ ಹಾಲು 50 ಸಾವಿರ ಲೀಟರ್‌ಗೆ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಒಕ್ಕೂಟದ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಭ್ರಮ ಆಚರಿಸಿದರು. | Kannada Prabha

ಸಾರಾಂಶ

ಒಕ್ಕೂಟದ ಹಾಲು ದೆಹಲಿ ಮಾರುಕಟ್ಟೆ ಪ್ರವೇಶದ ನಂತರ ಪ್ರತಿಸ್ಪರ್ಧಿ ಬ್ಯಾಂಡ್ ಗಳ ಹಾಲಿನ ಡೇರಿಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿದವಾದರೂ ಗುಣಮಟ್ಟದ ಹಾಲು ಪೂರೈಕೆಯಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರು, ಮಾರುಕಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಶ್ರಮ ಪ್ರಮುಖ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಮನಮುಲ್ ಹಾಲು ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ ದಿನ 50 ಸಾವಿರ ಲೀಟರ್‌ಗೆ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ ಒಕ್ಕೂಟದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಂಗಳವಾರ ಸಂಭ್ರಮಾಚರಣೆ ನಡೆಸಿದರು.

ಒಕ್ಕೂಟದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಬೋರೇಗೌಡ, ಒಕ್ಕೂಟದ ನೂತನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿ, ದೆಹಲಿ ಮಾರುಕಟ್ಟೆಗೆ ಕಳೆದ 2024ರ ನ.24ರಂದು ಪ್ರವೇಶ ಮಾಡಿದ ಒಕ್ಕೂಟದ ಹಾಲು ಮೇ 19 ರಂದು ಪ್ರತಿದಿನ 50 ಸಾವಿರ ಲೀಟರ್ ಮಾರಾಟವಾಗುತ್ತಿದೆ ಎಂದರು.

ಒಕ್ಕೂಟದ ಹಾಲು ದೆಹಲಿ ಮಾರುಕಟ್ಟೆ ಪ್ರವೇಶದ ನಂತರ ಪ್ರತಿಸ್ಪರ್ಧಿ ಬ್ಯಾಂಡ್ ಗಳ ಹಾಲಿನ ಡೇರಿಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿದವಾದರೂ ಗುಣಮಟ್ಟದ ಹಾಲು ಪೂರೈಕೆಯಿಂದ ಮಾರುಕಟ್ಟೆ ವಿಸ್ತರಣೆಯಾಗಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರು, ಮಾರುಕಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಡಾ. ಮಂಜೇಶ್ ಪ್ರಶಂಸೆ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ಯು.ಸಿ.ಶಿವಪ್ಪ, ನಿರ್ದೇಶಕ ರಾಧಾಕೃಷ್ಣೇಗೌಡ, ಎಂ.ಎಸ್‌.ರಘುನಂದನ್, ಬಿ.ಆರ್.ರಾಮಚಂದ್ರ, ಎಸ್.ಪಿ.ಸ್ವಾಮಿ, ಕರ್ನಾಟಕ ಸಹಕಾರ ಹಾಲುಮಂಡಳಿಯ ಆರ್. ಪದ್ಮಾವತಿ, ಮಾರುಕಟ್ಟೆ ವ್ಯವಸ್ಥಾಪಕ ಪ್ರದೀಪ್ ಕುಮಾರ್, ಸಹಾಯಕ ವ್ಯವಸ್ಥಾಪಕ ಸಿ.ಎನ್.ಸಾಗರ್ ಹಾಗೂ ಒಕ್ಕೂಟದ ವಿವಿಧ ವಿಭಾಗಗಳ ಅಧಿಕಾರಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಾಳೆ ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ತಾಲೂಕಿನ ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ.ಛೇದಕಗಳನ್ನು ಬದಲಾಯಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮೇ 22 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತಾಲೂಕಿನ ತೂಬಿನಕೆರೆ, ತೂಬಿನಕೆರೆ ಇಂಡಸ್ಟ್ರಿಯಲ್ ಏರಿಯಾ, ಉರಮಾರಕಸಲಗೆರೆ, ಯಲಿಯೂರು, ಕಾಳೇನಹಳ್ಳಿ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಸುಂಡಹಳಿ, ಪೀಹಳ್ಳಿ , ಕೊಡಿಯಾಲ, ಆಲಗೂಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯತ್ ಸರಬರಾಜು ನಿಗಮ ನಿಯಮಿತ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV