ಮಳವಳ್ಳಿ: ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಕಲೆ, ವಾಸ್ತುಶಿಲ್ಪ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಕೊಡುಗೆ ನೀಡಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಸ್ಮರಿಸಿದರು.
ಸಾವಿರಾರು ವರ್ಷಗಳಿಂದಲೂ ತಮ್ಮ ವೃತ್ತಿಯನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ವಿಶ್ವಕರ್ಮರ ಚಿತ್ರಪಟಗಳ ಕೆತ್ತನೆ ಹೆಚ್ಚಿನ ಶ್ರೀಮಂತಿಕೆಯಿಂದ ಕೂಡಿದೆ ಎಂದು ಹೇಳಿದರು.
ಪ್ರತಿನಿತ್ಯ ಜನರು ಬಳಸುವ ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದು ಸಾಕ್ಷಿಯಾಗಿದೆ ಎಂದರು.ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತು ಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಇತಿಹಾಸವನ್ನು ಅರಿಯುವ ಮೂಲಕ ಮಹನೀಯರ ಚರಿತ್ರೆಯನ್ನು ಮುಂದಿನ ಸಮಾಜಕ್ಕೆ ತಿಳಿಸುವ ಕಾಯಕ ಮಾಡಬೇಕಿದೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯ ಜನರು ಬಹಳ ಶ್ರಮ ಜೀವಿಗಳು, ತಮ್ಮ ಬದುಕು, ಸಂಸಾರವನ್ನು ಬದಿಗಿಟ್ಟು ಸಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಅಲ್ಲದೇ ಸುಂದರ ಹಾಗೂ ಕಷ್ಟಗಳನ್ನು ಅರಿತ ಈ ಸಮುದಾಯವು ಉಳಿದು ಇತರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದರು.ವಿಶ್ವಕರ್ಮ ಸಮುದಾಯದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ವೇಳೆ ವಿಶ್ವಕರ್ಮ ಸೇವಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್, ಬಿಜಿಪುರ ಹೋಬಳಿ ಘಟಕದ ಅಧ್ಯಕ್ಷ ಬಸವಣ್ಣಾಚಾರಿ, ಮುಖಂಡರಾದ ಇಂದ್ರಚಾರಿ, ಶ್ರೀನಿವಾಸಾಚಾರಿ, ದೇವರಾಜಾಚಾರಿ, ಅರ್ಚಕ ಶ್ರೀಕಂಠಾಚಾರಿ, ಮಂಟೇಸ್ವಾಮಿ, ಕೆಂಪರಾಜು ಪಾಲ್ಗೊಂಡಿದ್ದರು.