ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಭಾರತದಲ್ಲಿ ಸ್ತ್ರೀಯರಿಗೆ ಗೌರವ ಹಾಗೂ ಉನ್ನತ ಸ್ಥಾನಮಾನ ನೀಡಿದ್ದು ೧೨ನೇ ಶತಮಾನದಲ್ಲಿ. ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರು ಹೆಣ್ಣು ಗಂಡು ಎಂಬ ತಾರತಮ್ಯ ಹೋಗಲಾಡಿಸಲು ಪ್ರಯತ್ನ ಮಾಡುವ ಜತೆಗೆ ಅರಿವನ್ನು ಮೂಡಿಸುತ್ತಿದ್ದರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತ ಮಹಾಂತೇಶ್ ಮುನವಳ್ಳಿಮಠ್ ತಿಳಿಸಿದರು.ಪಟ್ಟಣದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರ ಮೇಲಿನ ಅನ್ಯಾಯ, ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾನೂನು ಜಾರಿಗೆ ತರುವ ಜತೆಗೆ ಮಹಿಳೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಫಲರಾಗುವ ದೃಷ್ಠಿಯಿಂದ ಹಲವು ಯೋಜನೆಗಳನ್ನು ರೂಪಿಸಿದೆ. ಪೋಕ್ಸೋ, ವರದಕ್ಷಿಣೆ ವಿರುದ್ಧದ ಕಾಯ್ದೆ, ಆಸ್ತಿಯ ಸಮಾನತೆಯ ಹಕ್ಕು ಎಲ್ಲವೂ ಮಹಿಳಾ ಸಬಲೀಕರಣದ ಕಾಯ್ದೆಗಳಾಗಿವೆ, ಎಲ್ಲರೂ ಇದರ ಅರಿವು ಹೊಂದುವುದು ಬಹುಮುಖ್ಯವೆಂದರು.ಸಿವಿಲ್ ನ್ಯಾಯಾಧೀಶೆ ಚೇತನಾ ಅವರು ಮಾತನಾಡಿ, ಸ್ತ್ರೀಯರಲ್ಲಿರುವ ವಿಶೇಷ ಗುಣವನ್ನು ಪರಿಗಣಿಸಿಯೇ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಈ ಕಾರಣದಿಂದಲೇ ಜಗತ್ತಿನ ಎಲ್ಲ ಮಹತ್ವಗಳಿಗೆ ಸ್ತ್ರೀಗೆ ಹೋಲಿಸಲಾಗುತ್ತದೆ ಮತ್ತು ಭಾರತದಲ್ಲಿ ಸ್ತ್ರೀಯರ ಸ್ಥಾನಮಾನ ಉತ್ತಮವಾಗಿದೆ. ಲಿಂಗಭೇದ, ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಕಾನೂನು ರೀತ್ಯ ಅಪರಾಧವಾಗಿದ್ದರೂ ಕದ್ದು ಮುಚ್ಚಿ ಇಂತಹ ಪ್ರಕರಣಗಳು ನಡೆದಿದೆ. ಆದ್ದರಿಂದ ಎಲ್ಲರೂ ಜಾಗೃತರಾಗಿ, ಗಮನ ಹರಿಸುವ ಮೂಲಕ ಸಮಾನತೆಯ ಪರಿಕಲ್ಪನೆಗೆ ಒತ್ತು ನೀಡಬೇಕಿದೆ. ಕಷ್ಟದಲ್ಲಿ ಇರುವ ಮಹಿಳೆಯರ ಕಷ್ಟ ಪರಿಹರಿಸಲಾಗದಿದ್ದರೂ, ಇತರೆ ಮಹಿಳೆಯರು ಸಾಂತ್ವನ ಹೇಳಬೇಕಿದೆ. ವರದಕ್ಷಿಣಿ ಪಿಡುಗು ಸಮಾಜದಲ್ಲಿ ಮಾರಕವಾಗಿ ಕಾಡುತ್ತಿದೆ, ಹಣ, ಚಿನ್ನ ತೆಗೆದುಕೊಂಡರೂ ನಂತರದಲ್ಲಿ ಹಣಕ್ಕಾಗಿ ಮಾನಸಿಕ, ದೈಹಿಕ ಹಿಂಸೆ ಕೊಡುವುದು ವಿವಾಹ ನಂತರವೂ ಪಿಡುಗಾಗಿ ಕಾಡಿದೆ. ಆಸ್ತಿ ಹಕ್ಕು ಮಹಿಳೆಯರಿಗೆ ಇದೆ ಮತ್ತು ದೃತಿಗೆಡುವುದು ಬೇಡ ಜತೆಗೆ ಸ್ತ್ರೀಯರು ಕಾನೂನು ಇದೆ ಎಂದು ದುರುಪಯೋಗ ಪಡಿಸಿಕೊಳ್ಳುವುದು ಬೇಡ. ಕಾರಣ ಸಮಾಜದಲ್ಲಿ ಇರುವ ಸ್ತ್ರೀಯ ಸ್ಥಾನಮಾನವನ್ನು ಉಳಿಸಿಕೊಂಡು ಬದುಕೋಣ ಎಂದರು.
ಫೋಟೊ:,ಹೊಳೆನರಸೀಪುರದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತ ಮಹಾಂತೇಶ್ ಮುನವಳ್ಳಿಮಠ್ ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶೆ ಚೇತನಾ, ಎಂ.ವಿ.ಶಿವಕುಮಾರ್, ಇಂದು ನಾರಾಯಣ್, ಉಮಾ ಗಣೇಶ್, ಎಚ್.ಬಿ.ನಾಗವೇಣಿ, ಎಚ್.ಎಸ್.ಸುದರ್ಶನ್ ಇದ್ದರು.