ಕಾಫಿ ಬೆಳೆಗಾರರ ಸಮಸ್ಯೆಗಳ ಅಧ್ಯಯನಕ್ಕೆ 17 ಸಮಿತಿಗಳ ರಚನೆ, ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದಲ್ಲಿ ತಿಂಗಳ ಅತಿಥಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಂದಿನ 10 ವರ್ಷದಲ್ಲಿ ಕಾಫಿ ಉದ್ಯಮ ಉಳಿಸಲು ಅಗತ್ಯವಾದ ಹ ಬದಲಾವಣೆಗಳನ್ನು ತರಲು ರಚಿಸಿರುವ 17 ವಿವಿಧ ಸಮಿತಿಗಳಲ್ಲಿನ 316 ಸದಸ್ಯರು ಕಾಫಿ ಗುಣಮಟ್ಟ ಹಾಗೂ ಸ್ಥಳೀಯವಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳಿದರು.
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಪ್ರಪಂಚ ಬದಲಾವಣೆ ಕಾಣುತ್ತಿದ್ದು, ಯುವಕರು ಕಾಫಿ ಉದ್ಯಮಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಬೆಳೆಗಾರರು ಬರುತ್ತಿಲ್ಲ ಎಂದು ವಿಷಾಧಿಸಿದ ಅವರು, ಭಾರತದಲ್ಲಿ ಕಾಫಿ ಉದ್ಯಮಕ್ಕೆ ಭವಿಷ್ಯದ ದೃಷ್ಟಿಯಿಂದ ಬೇರೆ ಬೇರೆ ರಾಜ್ಯಗಳ ಯುವಕರು ಕಲಿಕೆ ಆರಂಭಿಸಿದ್ದಾರೆ ಎಂದರು.ರತನ್ ಟಾಟಾ ಕಾಫಿ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗ ನೀಡಿ ಕಾಫಿ ಬೆಳಗಾರರಿಗೆ ಉತ್ತೇಜನ ನೀಡಿದ್ದರು. ನಟ ಪುನೀತ್ರಾಜಕುಮಾರ್ ಸಹ ಸಮಾಜ ಸೇವೆಗೆ ತೊಡಗಿಸಿಕೊಂಡಿದ್ದರಿಂದ ಇಂದು ಈ ಇಬ್ಬರು ಮಹನಿಯರನ್ನು ಜನತೆ ಸ್ಮರಿಸುತಿದ್ದಾರೆ. ಅದಕ್ಕಾಗಿ ಶ್ರದ್ಧಾಂಜಲಿ ಅರ್ಪಿಸೋಣವೆಂದು ಹೇಳಿದರು. ಇಂದು ಕಾಫಿಗೆ ಉತ್ತಮ ಬೆಲೆ ಬಂದಿದೆ, ಅರೇಬಿಕಾ ಕಾಫಿ ಬೆಳೆಯುವುದು ಎಲ್ಲಾ ದೇಶಗಳಲ್ಲಿ ಕಡಿಮೆ ಆಗುತ್ತಿದೆ. ರೋಬಸ್ಟಾ ಹೆಚ್ಚು ಉತ್ಪಾದನೆ ಆಗುತ್ತಿರುವ ಕಾರಣಕ್ಕೆ ಉತ್ತಮ ಬೆಲೆ ಕಾಣಬಹುದಾಗಿದೆ ಎಂದು ತಿಳಿಸಿದರು. ಕೆಫೆ ಕಾಫಿಡೆಯನ್ನು ಉದ್ಯಮಿ ಸಿದ್ದಾರ್ಥರವರು ಸ್ಥಾಪನೆ ಮಾಡಿದ ಪರಿಣಾಮ ಅನೇಕ ಯುವಕರು ಕಾಫಿಡೆಯಲ್ಲಿ ಉದ್ಯೋಗ ಪಡೆಯಲು ಆಕರ್ಷಿತರಾಗಿದ್ದಾರೆ. ಮೊದಲು ಅರೆಬಿಕಾ, ರೋಬಸ್ಟಾ ಎಂಬ ವ್ಯತ್ಯಾಸಗೊತ್ತಿರಲಿಲ್ಲ ನಂತರ ಗುಣಮಟ್ಟದ ಕಾಫಿ ತಯಾರಿಕೆ ಮೂಲಕ ಗ್ರಾಹಕರಿಗೆ ತಲುಪಿಸಲಾಯಿತು. ಈಗ ವಿಯಟ್ನಾಂನಲ್ಲಿ ನೆರಳಿನಲ್ಲಿ ಕಾಫಿ ಬೆಳೆಯಲು ಪ್ರಾರಂಭಿಸಲಾಗಿದೆ ಎಂದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ನಮ್ಮ ಪೂರ್ವಿಕರು ಹಲವು ಸಂಕಷ್ಟಗಳ ನಡುವೆಯೂ ಕಾಫಿ ಬೆಳೆದು ಇಂದು ನಮ್ಮನ್ನು ಸಂತೋಷವಾಗಿಟ್ಟಿದ್ದಾರೆ. ಕಾಫಿ ಬೆಳೆಗಾರರು ತಮ್ಮ ಮಕ್ಕಳನ್ನು ಬೇರೆ ಕಡೆ ಉದ್ಯೋಗಕ್ಕೆ ಕಳಿಸಿ ವೇತನಕ್ಕೆ ಕಾಯದೆ ಕಾಫಿ ಉದ್ಯಮದಲ್ಲಿ ತೊಡಗಿಸಬೇಕು ಎಂದು ಕಿವಿಮಾತು ಹೇಳಿದರು.
ಬೆಳೆಗಾರರಿಂದ ಕಾಫಿ ಖರೀದಿ ಮಾಡಿದ ವರ್ತಕ ಕಾಫಿ ಪುಡಿ ಮಾರಾಟ ಮಾಡಿ, ಅಧಿಕ ಲಾಭಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುಣಮಟ್ಟದ ಕಾಫಿ ಮಾರಾಟ ಮಾಡಿ ಚಿಕ್ಕಮಗಳೂರಿನಲ್ಲಿ ಕಾಫಿ ಉದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಇದೆ ಎಂದು ಹೇಳಿದರು. ಕಾಫಿ ಅಪಪ್ರಚಾರದಿಂದ ಅದರ ಮಾರಾಟ ಮತ್ತು ಬೆಲೆ ಕಡಿಮೆ ಇತ್ತು. ಇದಕ್ಕೆ ಟೀ ಬೆಳೆಯ ಲಾಭಿಯೂ ಪ್ರಮುಖ ಕಾರಣ ಆದ್ದರಿಂದ ಕಾಫಿ ಕುಡಿಯುವುದರಿಂದ ಹಲವು ರೋಗ ನಿರೋಧಕ ಶಕ್ತಿ ಇದೆ ಎಂಬುದನ್ನು ಮನಗಣಬೇಕೆಂದು ತಿಳಿಸಿದರು.ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ, ಕಾಫಿ ಬೆಳೆಗಾರರು ಆರ್ಥಿಕ ಸಬಲರಾಗದಿದ್ದರೆ ಜನಾಂಗದ ಅಭಿವೃದ್ಧಿ ಅಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ವೈ.ಬಿ.ವೆಂಕಟರೆಡ್ಡಿ, ಪ್ರಭುಗೌಡ, ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯ ಸುಕುಮಾರನ್, ಕಾರ್ಯದರ್ಶಿ ಅಮಿತ ವಿಜಯೇಂದ್ರ, ಸಹ ಕಾರ್ಯದರ್ಶಿ ಕೋಮಲಾ ರವಿ, ನಿರ್ದೇಶಕರಾದ ಚಂಪ ಜಗದೀಶ್, ಶಕುಂತಲಾ ವೀರೇಗೌಡ, ವೇದ ಚಂದ್ರಶೇಖರ್, ಸವಿತಾ ರಮೇಶ್ ಉಪಸ್ಥಿತರಿದ್ದರು.
30 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರನ್ನು ಸನ್ಮಾನಿಸಲಾಯಿತು. ಟಿ. ರಾಜಶೇಖರ್, ರೀನಾ ಸುಜೇಂದ್ರ, ಸವಿತಾ ರಮೇಶ್ ಇದ್ದರು.