ಕನ್ನಡಪ್ರಭ ವಾರ್ತೆ ಬೆಳಗಾವಿ
ಸರ್ಕಾರಿ ಶಾಲೆಗಳನ್ನು ಮುಚ್ಚುವ ಕರ್ನಾಟಕ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ನೀತಿಯನ್ನು ವಿರೋಧಿಸಿ ನಗರದ ಸಾಹಿತ್ಯ ಭವನದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ನಡೆದ ಉದ್ದೇಶಿಸಿ ಅವರು ಮಾತನಾಡಿದರು. ಗಡಿನಾಡು ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಒಂದಾಗಿ ಊರಿನ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಇಂದು ಶಾಲೆಗಳನ್ನು ಉಳಿಸಲು ಆಳ್ವಿಕರ ವಿರುದ್ಧ ಬಡವರು ಒಗ್ಗಟ್ಟಾಗಿ ನಡೆಸುವ ಐತಿಹಾಸಿಕ ಹೋರಾಟವಾಗಿದೆ. ರಾಜ್ಯದ ಮೂಲೆ-ಮೂಲೆಯಲ್ಲು ಹೋರಾಟ ಹಬ್ಬಬೇಕು ಎಂದು ಕರೆ ನೀಡಿದರು.
ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲ ಎಂದು ಹೇಳುತ್ತಿರುವ ಸರ್ಕಾರದ ವಾದ ಶುದ್ಧ ಸುಳ್ಳು. ರಾಜ್ಯದಲ್ಲಿ 37 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಸರ್ಕಾರದ ವ್ಯವಸ್ಥಿತ ನಿರ್ಲಕ್ಷ್ಯದಿಂದ ಶಾಲೆ ಕಟ್ಟಡ ಕುಸಿದು ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಾವಾಗಿದೆ. ಇದೇ ರೀತಿ ರಾಜ್ಯದ 21 ಸಾವಿರ ಸರ್ಕಾರಿ ಶಾಲೆ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಂಡಿಲ್ಲ. 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇದೆ. ಈ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಹಳ್ಳಿ ಶಾಲೆಗಳನ್ನು ಮುಚ್ಚಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆಗಳನ್ನು ಸರ್ಕಾರ ಮಾಡಲು ಹೊರಟಿದೆ ಎಂದು ದೂರಿದರು.ಏಷಿಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ ಸಾಲ ತಂದು ಅಮೆರಿಕಾದ ಮ್ಯಾಗ್ನೆಟ್ ಶಾಲೆಗಳನ್ನು ಇಲ್ಲಿ ರಚಿಸಲಾಗುತ್ತಿದೆ. ಈ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಬಡ ಮಕ್ಕಳಿಗೆ ಅಡಿಕೆ ಸುಲಿಯುವ ಯಂತ್ರ ರಿಪೇರಿ ಮಾಡುವ ಕೆಲಸಗಳನ್ನು ಕಲಿಸಿ ಕಾರ್ಖಾನೆಗಳಿಗೆ ಕಾರ್ಮಿಕರನ್ನಾಗಿ ತಯಾರಿ ಮಾಡಲಾಗುತ್ತದೆ. ಈ ಶಾಲೆಗಳ ಉಸ್ತುವಾರಿಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ. ಇದು ದೇಶದ ಕಾರ್ಪೊರೇಟ್ ಮನೆತನಗಳಿಗೆ ಶಿಕ್ಷಣವನ್ನು ಹರಾಜು ಹಾಕುವ ಹುನ್ನಾರ. ಕಾಂಗ್ರೆಸ್- ಬಿಜೆಪಿ ಪಕ್ಷಗಳ ಈ ಕ್ರೂರ ನೀತಿಯ ವಿರುದ್ಧ ಜನರು ಬಲಿಷ್ಠ ಹೋರಾಟ ಬೆಳೆಸಬೇಕು ಎಂದು ಕರೆ ನೀಡಿದರು.