ಸಿರುಗುಪ್ಪ: ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶ್ರಾವಣ ಮಾಸದ ಮೂರನೇ ಮಂಗಳವಾರದಂದು ಶ್ರೀಮಾರೆಮ್ಮದೇವಿಯ ತನು ಬಿಂದಿಗೆ ಉತ್ಸವ ಭಕ್ತಿಭಾವದಿಂದ ಸಂಪನ್ನಗೊಂಡಿತು.
ಬೆಳಗ್ಗೆ ಕುಂಬಾರರ ಮನೆಯಿಂದ ಬಿಂದಿಗೆ, ಬಳೆಗಾರರ ಮನೆಯಿಂದ ಬಳೆ, ಹೂಗಾರರ ಮನೆಯಿಂದ ಪುಷ್ಪಗಳು ಹಾಗೂ ಬಾರಕಿರ ಸಮಾಜದವರಿಂದ ಬಾಳೆಕಂಬ, ಮಾವಿನ ತೋರಣ ಮತ್ತು ತೆಂಗಿನಗರಿಗಳು ಮತ್ತು ಕಳಸ ತರಲಾಯಿತು. ಅಲ್ಲದೆ ಗ್ರಾಪಂದಿಂದ ಮಾಂಗಲ್ಯಕ್ಕೆ ಸಂಬಂಧಿಸಿದ ಪವಿತ್ರ ಸಾಮಗ್ರಿ ತಂದು ಮೆರವಣಿಗೆ ನಡೆಸಿ, ತುಂಗಭದ್ರಾ ನದಿಯ ದಡಕ್ಕೆ ತೆರಳಲಾಯಿತು.
ನದಿಯ ದಡದಲ್ಲಿ ಗಂಗೆ ಪೂಜೆ ಗೈದು ದೇವಿಯ ತನು ಬಿಂದಿಗೆ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ದೇವಿಗೆ ಉಡಿ ತುಂಬಿ ಮಾಂಗಲ್ಯ ಧಾರಣೆ ಮಾಡಿ ಮಹಾ ಮಂಗಳಾರತಿ ನೈವೇದ್ಯ ಸಮರ್ಪಿಸಲಾಯಿತು.ನಂತರ ಭಕ್ತಾದಿಗಳು ಕಾಯಿ-ಕರ್ಪೂರ ಬೆಳಗಿ ನೈವೇದ್ಯ ಅರ್ಪಿಸಿ ದೇವಿಗೆ ಭಕ್ತಿ ಸಮರ್ಪಿಸಿದರು. ಮಠದ ಬಸವರಾಜಯ್ಯ ಸ್ವಾಮಿ, ಸೋಮನಾಥ ಸ್ವಾಮಿ ಹಾಗೂ ಪುಗ್ಗಿ ಪ್ರಶಾಂತ ಸ್ವಾಮಿ ಶಾಸ್ತ್ರೋಕ್ತವಾಗಿ ಪೂಜೆ ಕಾರ್ಯ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಾವಿಕಟ್ಟಿ ಪಂಪಾಪತಿ ಗೌಡ, ಎಸ್.ಅಮರೇಗೌಡ, ಕುಂಬಾರ ರುದ್ರಪ್ಪ, ಬಳೆಗಾರ ಸಿದ್ದರಾಮ, ಜೀರ ಮಲ್ಲಪ್ಪ, ಪಟ್ಟೆದ ದೇವೇಂದ್ರಪ್ಪ, ಪ್ಯಾಟೆ ನಂದೆಪ್ಪ, ಕ್ಯಾತರಿ ಲಿಂಗಪ್ಪ, ಉಲ್ತಿ ಭೀಮಣ್ಣ, ಗಡಿಗಿ ಶರಣಪ್ಪ, ಹೊಸಮನೆ ಉಪ್ಪಳಪ್ಪ, ಹಲಿಗದ ಶಿವಣ್ಣ, ಮುರಣಿ ನಾಗಪ್ಪ, ಅಮರಾಪುರ ಗಾದಿಲಿಂಗಪ್ಪ, ಮುದಕಪ್ಪ ನಾಯಕ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.