ಹೊಸಪೇಟೆ: ಮದುವೆ ಎಂದರೆ ಜೀವನ ರಥದ ಎರಡು ಚಕ್ರಗಳಿದ್ದ ಹಾಗೆ; ಆದ್ದರಿಂದ ಪ್ರತಿನಿತ್ಯವೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಎಂದು ಸ್ಥಳೀಯ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ಅನಾವಶ್ಯಕ ಕಾರಣಗಳಿಗೆ ಅಥವಾ ಮೂರನೇ ವ್ಯಕ್ತಿಗಳ ಚುಚ್ಚು ಮಾತುಗಳಿಗೆ ಬಲಿಯಾಗದೆ ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು. ಚುಚ್ಚುಮಾತುಗಳಿಗೆ ಬಲಿಯಾಗಿ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ ಎಂದು ವಿಷಾದಿಸಿದರು.
ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಅತ್ಯಂತ ವಿಜೃಂಭಣೆ, ದುಂದುವೆಚ್ಚ ಮಾಡುವುದೇ ಆಗಿದೆ. ಈ ರೀತಿ ಮಾಡುವುದರಿಂದ ಹೆಣ್ಣಿನ ಹಾಗೂ ಗಂಡನ ಮನೆಯವರಿಗೂ ವಿಪರೀತ ಆರ್ಥಿಕವಾಗಿ ಹೊರೆ ಆಗುವುದು. ನಂತರದ ದಿನಗಳಲ್ಲಿ ಆ ಸಾಲ ತೀರಿಸಲಾಗದೆ ಹಲವಾರು ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿರುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ವರದಾನವಾಗಿದೆ. ಸಾಮೂಹಿಕ ವಿವಾಹಗಳು ಹೆಚ್ಚು ನಡೆಸಬೇಕು ಎಂದರು.ಗಂಗಾವತಿ, ಬೃಹನ್ ಮಠ ಅರಳಿಹಳ್ಳಿಯ ಪೂಜಾರಿ ಗವಿಸಿದ್ದೇಶ್ವರ ತಾತನವರು ಸಾನ್ನಿಧ್ಯ ವಹಿಸಿದ್ದರು.