ಕನ್ನಡಪ್ರಭ ವಾರ್ತೆ ಸಕಲೇಶಪುರಮದುವೆ ಎನ್ನುವುದು ಎರಡು ಹೃದಯಗಳ ಹಾಗೂ ಎರಡು ಕುಟುಂಬಗಳ ಪವಿತ್ರ ಬಂಧನವಾಗಿದ್ದು, ಅದು ಪ್ರತಿಷ್ಠೆ ಮೆರೆಯುವ ಪ್ರದರ್ಶನದ ವೇದಿಕೆಯಾಗಬಾರದು ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ವೈಎಸ್) ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಹೇಳಿದರು.ಪಟ್ಟಣದಲ್ಲಿ ಆಯೋಜಿಸಲಾದ ‘ಮಾದರಿ ಮದುವೆ’ ಅಭಿಯಾನದ ಸಮಾರೋಪ ಸಮ್ಮೇಳನದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮದುವೆಗಳು ಸಂತೃಪ್ತಿದಾಯಕವಾಗಿ, ಸಭ್ಯವಾಗಿ ಮತ್ತು ಅನಾಚಾರಮುಕ್ತವಾಗಿ ನಡೆಯಬೇಕು ಎಂದರು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗಳು ಪ್ರತಿಷ್ಠೆಯ ಪ್ರದರ್ಶನ ಮತ್ತು ಹೊಸಹೊಸ ಆಚರಣೆಗಳಿಂದ ಭಾರವಾಗುತ್ತಿರುವುದು ವಿಷಾದನೀಯ. ಇದರ ಪರಿಣಾಮವಾಗಿ ಅನೇಕ ಬಡ ಕುಟುಂಬಗಳು ಸಾಲಬಾಧೆ ಸೇರಿದಂತೆ ವಿವಿಧ ಸಂಕಷ್ಟಗಳಿಗೆ ಒಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ವೈಎಸ್ ವತಿಯಿಂದ ‘ಮಾದರಿ ಮದುವೆ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸಮಾಜದಲ್ಲಿ ದಿನೇದಿನೇ ಹೆಚ್ಚುತ್ತಿರುವ ದುಂದು ವೆಚ್ಚ, ಆಡಂಬರ ಮತ್ತು ಅನಗತ್ಯ ಆಚರಣೆಗಳಿಂದ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಮನಗಂಡು, ಸರಳತೆ ಮತ್ತು ಸಂಸ್ಕಾರಯುತ ಮೌಲ್ಯಗಳ ಆಧಾರದಲ್ಲಿ ಮದುವೆಗಳನ್ನು ನಡೆಸಬೇಕು ಎಂದು ಕರೆ ನೀಡಿದರು. ರಾಜ್ಯ ಕಾರ್ಯದರ್ಶಿ ಹಸೈನಾರ್ ಆನೆಮಹಲ್ ಮಾತನಾಡಿ, ಮೇ 2ರಂದು ಪುತ್ತೂರಿನಲ್ಲಿ ‘ಮಾದರಿ ಮದುವೆ’ ಅಭಿಯಾನದ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಎಸ್ವೈಎಸ್ ಜಿಲ್ಲಾ ಅಧ್ಯಕ್ಷ ರಶೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಂಇಯತುಲ್ ಉಲಮಾ ಜಿಲ್ಲಾಧ್ಯಕ್ಷ ಸೈದಲವಿ ಸಖಾಫಿ, ಎಸ್ವೈಎಸ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ (ಉಡುಪಿ), ರಾಜ್ಯ ಕಾರ್ಯದರ್ಶಿ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯಾ, ಜಿಲ್ಲಾ ಕಾರ್ಯದರ್ಶಿ ಖಲೀಲ್ ದೇಖ್ಲ, ಪ್ರಮುಖರಾದ ಶರಪುದ್ದೀನ್ ತಂಙಳ್, ಸಲೀಂ ಕನ್ಯಾಡಿ, ಶರೀಫ್ ಮಿಸ್ಬಾಹಿ, ಝಕರಿಯಾ ಹಾಸನ ಸೇರಿದಂತೆ ಇತರರು ಉಪಸ್ಥಿತರಿದ್ದರು.