ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮಸ್ಥರ ದಿಢೀರ್ ಪ್ರತಿಭಟನೆಯಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮವನ್ನು ಸೇರ್ಪಡೆ ಮಾಡುವ ವಿವಾದ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿದೆ.
ಈ ವಿವಾದ ಇತ್ಯರ್ಥವಾಗುವವರೆಗೆ ಗ್ರಾಮದ ಕುಡಿಯುವ ನೀರು, ಸುಚಿತ್ವ ಸೇರಿದಂತೆ ಮೂಲ ಸೌಲಭ್ಯಗಳನ್ನು ತಾಲೂಕು ಆಡಳಿತ ಅಥವಾ ತಾಪಂ ಪಂಚಾಯ್ತಿಯಿಂದ ಮಾತ್ರವೇ ನಿರ್ವಹಣೆ ಮಾಡಬೇಕು. ಅದನ್ನು ಬಿಟ್ಟು ನಗರಸಭೆಯಿಂದ ನಿರ್ವಹಣೆ ಮಾಡಲ್ಲ ಅವಕಾಶ ನೀಡುವುದಿಲ್ಲ ಎಂದು ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಪಟ್ಟು ಹಿಡಿದು ಶುದ್ಧ ನೀರು ಘಟಕದ ದುರಸ್ತಿಗೆ ಅಡ್ಡಿಪಡಿಸಿ ಧರಣಿ ನಡೆಸಿದರು.ಗ್ರಾಮಸ್ಥರು ಧರಣಿಯನ್ನು ಲೆಕ್ಕಿಸದ ಅಧಿಕಾರಿಗಳು ಶುದ್ಧ ನೀರು ಘಟಕದ ಬೀಗ ಒಡೆದು ದುರಸ್ತಿಗೆ ಮುಂದಾದರು. ಈ ವೇಳೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ನಗರಸಭೆ ಆಯುಕ್ತೆ ರಾಧಿಕಾ ಸೋಮಶೇಖರ್ ಹಾಗೂ ಗ್ರಾಮಸ್ಥರು ನಡುವೆ ವಾಗ್ವಾದ ನಡೆಯಿತು.
ಕಳೆದ ಐದು ದಿನಗಳಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ
ಗೆಜ್ಜೆಲಗೆರೆ ಗ್ರಾಮಕ್ಕೆ ಕಳೆದ ಐದು ದಿನಗಳಿಂದ ಕುಡಿಯುವ ನೀರು. ಜನ ಜಾನುವಾರುಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಕೂಡಲೇ ನೀರು ಪೂರೈಕೆ ಮಾಡಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಹಾಗೂ ಗ್ರಾಮದ ಇತರರು ನಗರಸಭೆ ಆಗಮಿಸಿ ತಾಲೂಕು ಆಡಳಿತ, ನಗರಸಭೆಗೆ ಮನವಿ ನೀಡಿದರು.
ನಗರಸಭೆ ಆಯುಕ್ತರು ರಾಧಿಕಾ ಮಾತನಾಡಿ, ವಾಟರ್ ಮ್ಯಾನ್ ಗ್ರಾಮದಲ್ಲಿ ನೀರು ಪೂರೈಕೆ ಮಾಡಲು ಹೋದಾಗ ತಡೆದು ಅವರನ್ನು ಕಳಿಸಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಿದ್ದಾರೆ. ನಗರಸಭೆ ಕಾರ್ಯಾಲಯಕ್ಕೂ ಬೀಗ ಹಾಕಿದ್ದಾರೆ. ನೀರು ಬಿಡಲು ಬಂದವರಿಗೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ನೀರು ಕೊಡಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗೆಜ್ಜೆಲಗೆರೆ ನಗರಸಭೆ ಉಪ ಕಚೇರಿ ಕಾರ್ಯಾಲಯ ಬೀಗ ತೆಗೆದು ನೀರು ಪೂರೈಕೆ ಮಾಡುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.