ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ : ಬಡವರಿಗೆ ಇತ್ತೀಚಿನ ದಿನಗಳಲ್ಲಿ ವಿವಾಹವೆಂದರೆ ಆರ್ಥಿಕ ಸಮಸ್ಯೆ ತಂದೊಡ್ಡುತ್ತಿವೆ. ಸಾಲ ಮಾಡಿ ವಿವಾಹ ಮಾಡುವುದು ಎಂದರೆ ಕಷ್ಟದ ಕೆಲಸ. ಇಂತಹ ದಿನಗಳಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿಯವರು ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದರ ಜತೆಗೆ ಇಂತಹ ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಮಾಡುತ್ತಿರುವುದು ಶ್ಲಾಘನೀಯ ಎಂದು ಹಾಲುಮತ ಗುರುಪೀಠ ಶಾಖಾ ಮಠದ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಹೇಳಿದರು.
ವಿವಾಹವಾಗುವ ದಂಪತಿಗಳು ದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಉಳಿಸುವುದರೊಂದಿಗೆ ಹಿರಿಯರಿಗೆ ಗೌರವಿಸುವ ಮೂಲಕ ಸುಖ ಸಂಸಾರ ನಡೆಸಿಕೊಂಡು ಹೋಗಬೇಕು ಎಂದ ಅವರು, ಈ ರೀತಿ ಉಚಿತ ವಿವಾಹ ಏರ್ಪಡಿಸುವುದರಿಂದ ಜಾತಿ, ಧರ್ಮದ ಸಂಕೋಲೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಸ್ಥಿತಿವಂತರು ಇಂತಹ ಬಡವರಿಗೆ ಅನುಕೂಲವಾಗುವ ಭಾವೈಕ್ಯತೆಯ ಸಂಕೇತ ಬಿಂಬಿಸುವ ಸರ್ವಧರ್ಮ ಸಾಮೂಹಿಕ ವಿವಾಹಗಳಂತಹ ಜನಪರ ಕಾರ್ಯಕ್ರಮಗಳನ್ನು ಮಾಡಬೇಕು. ಇಂತಹ ವಿವಾಹಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಬೇಕು ಎಂದು ಶ್ರೀಗಳು ಆಶಿಸಿದರು.
ಸತಿ ಪತಿ ಇಬ್ಬರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು. ಜತೆಗೆ ಯಾರೂ ದುಶ್ಚಟಗಳಿಗೆ ದಾಸರಾಗದೇ ಬಸವಣ್ಣನವರ ಆಶಯದಂತೆ ಕಾಯಕದಲ್ಲಿ ತಲ್ಲೀನರಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.ಈ ವೇಳೆ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿನ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾದ ಭೀರಲಿಂಗೇಶ್ವರ, ಕಾಡಸಿದ್ದೇಶ್ವರ ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ೧೨ ನವದಂಪತಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಜೀವನ ಸಂತೋಷ ಮತ್ತು ಸಮೃದ್ಧದಿಂದ ಕೂಡಿರಲಿ ಎಂದು ಆಶಿಸಿದರು.
-------
ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಷ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಆತ್ಮಬಲ ತುಂಬುವ ಉದ್ದೇಶದಿಂದ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದೇವೆ. ಸುಮಾರು ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಕೊಂಡಿದ್ದಾರೆ.