ಶೆಡ್‌ನಲ್ಲಿ ಮೊಬೈಲ್‌ ಚಾರ್ಜ್‌ ಹಾಕಬೇಡ ಎಂದ ಮೇಸ್ತ್ರಿಯನ್ನೇ ಕೊಂದ!

KannadaprabhaNewsNetwork |  
Published : May 22, 2026, 02:00 AM IST
ಕೊಲೆಯಾದ ದಾದಾಪೀರ | Kannada Prabha

ಸಾರಾಂಶ

ದಾದಾಪೀರ ಹಾಗೂ ಅಜೀಂ ಛಬ್ಬಿ ಗ್ರಾಮದವರಾಗಿದ್ದು, ಇಬ್ಬರೂ ಸಂಬಂಧಿಕರೇ (ಮಾವ-ಅಳಿಯ) ಆಗಿದ್ದಾರೆ. ಮಾವ ಸೆಂಟ್ರಿಂಗ್‌ ಮಾಡಿದರೆ, ಅಳಿಯ ಸಹಾಯಕನಾಗಿದ್ದ. ದಾದಾಪೀರ ಅಜೀಂನಿಗೆ ಮುಂಗಡವಾಗಿ ಹಣ ನೀಡಿದ್ದ. ಈ ಕುರಿತು ಸಣ್ಣ ಜಗಳವಾಗಿತ್ತು.

ಹುಬ್ಬಳ್ಳಿ:

ಶೆಡ್‌ನಲ್ಲಿ ಮೊಬೈಲ್‌ ಚಾರ್ಜ್‌ ಹಾಕಬೇಡ ಎಂದ ಮೇಸ್ತ್ರಿಯನ್ನೇ ಕಟ್ಟಡ ಕಾರ್ಮಿಕ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಬುಧವಾರ ತಡರಾತ್ರಿ ತಾಲೂಕಿನ ರೇವಡಿಹಾಳದಲ್ಲಿ ನಡೆದಿದೆ.

ಛಬ್ಬಿ ಗ್ರಾಮದ ದಾದಾಪೀರ ಕೋಲಕಾರ (38) ಹತ್ಯೆಗೀಡಾದ ವ್ಯಕ್ತಿ.

ಈತನ ಅಳಿಯ ಹಾಗೂ ಕಾರ್ಮಿಕ ಅಜೀಂ ಜಮಾಖಾನೆ ಹತ್ಯೆ ಮಾಡಿದ್ದು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ದಾದಾಪೀರ ಹಾಗೂ ಅಜೀಂ ಛಬ್ಬಿ ಗ್ರಾಮದವರಾಗಿದ್ದು, ಇಬ್ಬರೂ ಸಂಬಂಧಿಕರೇ (ಮಾವ-ಅಳಿಯ) ಆಗಿದ್ದಾರೆ. ಮಾವ ಸೆಂಟ್ರಿಂಗ್‌ ಮಾಡಿದರೆ, ಅಳಿಯ ಸಹಾಯಕನಾಗಿದ್ದ. ದಾದಾಪೀರ ಅಜೀಂನಿಗೆ ಮುಂಗಡವಾಗಿ ಹಣ ನೀಡಿದ್ದ. ಈ ಕುರಿತು ಸಣ್ಣ ಜಗಳವಾಗಿತ್ತು. ಬಳಿಕ ಶೆಡ್‌ನಲ್ಲಿ ಮೊಬೈಲ್‌ ಚಾರ್ಜ್‌ ಹಾಕಲು ಅಜೀಂ ತೆರಳಿದಾಗ ದಾದಾಪೀರ ಇಲ್ಲಿ ಚಾರ್ಜ್‌ ಹಾಕಬೇಡ. ಅಲ್ಲಿ ಬೆಲೆಬಾಳುವ ವಸ್ತುಗಳಿರುತ್ತವೆ. ಏನಾದರೂ ಆದರೆ ಸಮಸ್ಯೆ ಎಂದು ಆಕ್ಷೇಪಿಸಿದ್ದಾನೆ. ಇದಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.

ಮಾತಿಗೆ ಮಾತು ಬೆಳೆದು ನಾನು ಕೊಟ್ಟಿರುವ ಮುಂಗಡ ಹಣ ಕೊಡು. ಕೆಲಸಕ್ಕೆ ಬರಬೇಡ ಎಂದು ದಾದಾಪೀರ ಹೇಳಿದನಂತೆ. ಇದರಿಂದ ಕುಪಿತಗೊಂಡ ಅಜೀಂ ತಕ್ಷಣವೇ ಅಲ್ಲೇ ಇದ್ದ ಕಬ್ಬಿಣದ ರಾಡ್‌ ತೆಗೆದುಕೊಂಡು ದಾದಾಪೀರನ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಆತ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಉಳಿದ ಕಾರ್ಮಿಕರು ಕೆಎಂಸಿಆರ್‌ಐಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ, ಅಷ್ಟರೊಳಗೆ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿ ವಶಕ್ಕೆ:

ಈ ನಡುವೆ ಪರಾರಿಯಾಗಿದ್ದ ಆರೋಪಿ ಅಜೀಂನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ