ಎಂಟು ವರ್ಷಗಳಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಠನ

KannadaprabhaNewsNetwork |  
Published : Aug 11, 2024, 01:34 AM ISTUpdated : Aug 11, 2024, 01:35 AM IST
ತುಲಸೀದಾಸ ಹನುಮಾನ್ ಚಾಲೀಸಾ ಮ್ಯಾಟರ್ ಗೆ ಸಂಬಂಧಿಸಿದ ಚಿತ್ರಗಳು | Kannada Prabha

ಸಾರಾಂಶ

ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ವಿದ್ಯಾರ್ಥಿಗಳು ರಾತ್ರಿ ವಿಶ್ರಾಂತಿಗೆ ಮೊದಲು ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಠಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಗಣೇಶ್‌ ಕಾಮತ್‌

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಈ ಲೌಕಿಕ, ಡಿಜಿಟಲ್ ಯುಗದಲ್ಲಿ ಸುಖ ಸಂತೋಷಗಳಿಗೆ ನೂರೆಂಟು ಸಾಧನಗಳಿರುವಾಗ ಇದು ನೆಮ್ಮದಿ ಮತ್ತು ಯಶಸ್ಸಿಗಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯುತ್ತಿರುವ ವಿದ್ಯಾರ್ಥಿಗಳ ಯಶೋಗಾಥೆ ಇದು.

ನಿರಂತರ ಎಂಬಂತೆ ಕಳೆದ ಎಂಟು ವರ್ಷಗಳಿಂದ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ವಿದ್ಯಾರ್ಥಿಗಳು ರಾತ್ರಿ ವಿಶ್ರಾಂತಿಗೆ ಮೊದಲು ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಠಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಆಧ್ಯಾತ್ಮಿಕ ಮಾರ್ಗದ ಮೂಲಕವೂ ಜೀವನದಲ್ಲಿ ನೆಮ್ಮದಿ ಯಶಸ್ಸು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಹನುಮಂತನ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯ, ಆರೋಗ್ಯ, ಆಲಸ್ಯ, ವಾಕ್ಪಟುತ್ವ ಎನ್ನುವ ಮಾತಿದೆ. ಹಾಗಾಗಿ ಹನುಮಾನ್ ಚಾಲೀಸಾದಂತಹ ಪ್ರಭಾವಿ ಸಾಲುಗಳನ್ನು ಪಠಿಸಿ ಬದುಕಿನಲ್ಲಿ ಯಶಸ್ಸು ಕಾಣುವ ಕನಸು ಎಕ್ಸಲೆಂಟ್ ಕ್ಯಾಂಪಸ್ ಆವರಣದಲ್ಲಿ ನನಸಾಗಿದೆ. ಅಷ್ಟಕ್ಕೂ ಶಿಕ್ಷಣ, ಸಂಸ್ಕೃತಿಯ ರಂಗದಲ್ಲಿ ದ.ಕ. ಜಿಲ್ಲೆಯ ಮೂಡುಬಿದಿರೆಯ ಸಾಧನೆ ಏನೂ ಇರಬಹುದು. ಆದರೆ ಧಾರ್ಮಿಕ ನೆಲೆಯಲ್ಲಿ ಮೂಡುಬಿದಿರೆ ಎಂದಾಕ್ಷಣ ಇಲ್ಲಿನ ಸೀಯಾಳಾಭಿಷೇಕ ಪ್ರಿಯ ಕಾರಣಿಕ ಶ್ರೀ ಹನುಮಂತ ದೇವರ ಸನ್ನಿಧಾನ ವಿಶೇಷ. ಸರ್ವ ಧರ್ಮೀಯರ ಆರಾಧ್ಯ ಶಕ್ತಿಯಾಗಿರುವ ಮೂಡುಬಿದಿರೆಯ ಹನುಮನ ನಾಮ ಸ್ಮರಣೆಯೂ ಆಗಬೇಕು. ವಿದ್ಯಾರ್ಥಿಗಳಿಗೂ ಯಶಸ್ಸು ಸಿಗಬೇಕು ಎನ್ನುವ ಆಶಯದೊಂದಿಗೆ ೨೦೧೬ರಿಂದ ತಮ್ಮ ಎಕ್ಸಲೆಂಟ್ ಕ್ಯಾಂಪಸ್‌ನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಾತ್ರಿ ವಿಶ್ರಾಂತಿಗೆ ಮೊದಲು ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಠನಕ್ಕೆ ಅವಕಾಶ ನೀಡಲಾಗಿದೆ. ಈ ಅಭಿಯಾನ ಇಂದಿಗೂ ನಿರಂತರ ಮುನ್ನಡೆದಿದೆ.

ರಾತ್ರಿ ಹತ್ತಾಗುತ್ತಿದ್ದಂತೆ ಆವರಣದಲ್ಲಿರುವ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ನಿರತ ಎಲ್ಲ ವಿದ್ಯಾರ್ಥಿಗಳೂ ಈ ಸಾಮೂಹಿಕ ಪಠನಕ್ಕೆ ಸಜ್ಜಾಗುತ್ತಾರೆ. ೨೧ ಬಾರಿ ಓಂಕಾರ ಹೇಳಿ ಮತ್ತೆ ಹನುಮಾನ್ ಚಾಲೀಸಾ ಪಠಿಸುತ್ತಾರೆ. ಎಕ್ಸಲೆಂಟ್ ಆವರಣದಲ್ಲಿ ತನಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಗುರು ರಾಮಚಂದ್ರ ಆಚಾರ್ಯರ ಗೌರವಕ್ಕಾಗಿ ಒಂದು ಹಾಸ್ಟೆಲ್‌ಗೆ ರಾಮಚಂದ್ರ ನಾಮಕರಣವೂ ಆಗಿದೆ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್.

ವಿಶೇಷವಾಗಿ ಹುಡುಗರ ಹಾಸ್ಟೆಲ್‌ ಮುಂದೆ ಮೂರು ದಿಕ್ಕಿಗೆ ಮುಖ ಮಾಡಿರುವ ಹನುಮನ ಮೂರ್ತಿಗಳನ್ನೂ ಇಲ್ಲಿ ಕಾಣಬಹುದಾಗಿದೆ. ಶಿಕ್ಷಣ ಎನ್ನುವುದು ಬರೇ ಅಂಕ ಗಳಿಕೆಗೆ ಸೀಮಿತವಾಗುವುದಲ್ಲ. ಅದು ಮೌಲ್ಯಗಳ ಸಂಪಾದನೆಯಾಗಬೇಕು. ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಸಮಾಜಕ್ಕೆ ಆಸ್ತಿಯಾಗಬೇಕು ಎನ್ನುವ ತಪೋವನ ಮಾದರಿಯ ಶಿಕ್ಷಣದ ಕನಸನ್ನು ಎಕ್ಸಲೆಂಟ್‌ನ ಯಶಸ್ಸಿಗೆ ಹಿಂದೆ ಈ ಅಭಿಯಾನವೂ ಕಾರಣವಾಗಿದೆ. ಸ್ಫೂರ್ತಿ ಚೇತನ ತುಳಸೀದಾಸರೂ..

ಹನುಮಾನ್ ಚಾಲೀಸಾ ಹಿನ್ನೆಲೆಯೂ...!

ರಾಮಾಯಣದ ವಾಲ್ಮೀಕಿಯ ಅವತಾರ ಎನ್ನಲಾಗುವ ತುಳಸೀದಾಸರು ( ೧೫೩೨-೧೬೨೩) ಉತ್ತರ ಪ್ರದೇಶ ಮೂಲದವರು. ಸಂಸಾರ ತ್ಯಜಿಸಿ ರಾಮನಾಮ ಸ್ಮರಣೆಯ ಸಂತನಾಗಿ ರಾಮಚರಿತ ಮಾನಸ ಸಹಿತ ಹಲವು ಪ್ರಮುಖ ಕೃತಿಗಳನ್ನು ರಚಿಸಿದವರು. ಅವರ ಮಹಿಮೆಯಿಂದ ಸತ್ತವನೋರ್ವ ಬದುಕಿದ ಎಂದು ತಿಳಿದ ಮೊಘಲ್ ದೊರೆ ಅಕ್ಬರ್ ತುಳಸೀದಾಸರನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಳ್ಳುತ್ತಾನೆ. ನನ್ನದೇನಿಲ್ಲ ಎಲ್ಲವೂ ರಾಮನ ಮಹಿಮೆ ಎಂಬ ಮಾತನ್ನು ನಂಬದ ಅಕ್ಬರ್ ದಾಸರನ್ನು ಸೆರೆಮನೆಯಲ್ಲಿಡುತ್ತಾರೆ. ಆ ೪೦ ದಿನಗಳ ಅವಧಿಯಲ್ಲಿ ಅಲ್ಲಿ ೪೦ ಶ್ಲೋಕಗಳ ಹನುಮಾನ್ ಚಾಲೀಸಾವನ್ನು ತುಳಸೀದಾಸ್ ರಚಿಸಿದರು ಎನ್ನಲಾಗಿದೆ. ಹನುಮಂತನ ಕಾರಣಿಕ ಕ್ಷೇತ್ರವಾಗಿರುವ ಮೂಡುಬಿದಿರೆಯಲ್ಲಿ ಆತನ ನಾಮಸ್ಮರಣೆ, ರಾಮ ಸ್ಮರಣೆ ಈ ಪಠನದ ಹಿನ್ನೆಲೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಯಶಸ್ಸು, ಮೌಲ್ಯಗಳ ವರ್ಧನೆ, ಸಾಧನೆಗೆ ಪ್ರೇರಣೆಯೂ ಸಿಗಬೇಕು ಎನ್ನುವ ಆಶಯದಿಂದ ಈ ಅಭಿಯಾನ ಬೆಳೆದಿದೆ. ನಮ್ಮ ವಿದ್ಯಾರ್ಥಿಗಳೂ ನಿರೀಕ್ಷೆಗೆ ಮೀರಿ ಯಶಸ್ಸು ಕಾಣುತ್ತಿದ್ದಾರೆ. - ಯುವರಾಜ್ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಮೂಡುಬಿದಿರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿರುಪತಿಗೆ ಬಮುಲ್‌ ತುಪ್ಪ ಪೂರೈಕೆಗೆ ಡಿಕೆಸು ಚಾಲನೆ
ಬೆಂಗಳೂರಿನಲ್ಲಿ ಮಳೆಗೆ ಗೋಡೆ ಕುಸಿದು 7 ಜನ ದಾರುಣ ಸಾವು