ಕುಷ್ಟಗಿ:ಸಾಮೂಹಿಕ ವಿವಾಹದಲ್ಲಿ ವಿವಾಹ ಮಾಡಿಕೊಳ್ಳಲು ಪುಣ್ಯ ಮಾಡಿರಬೇಕು ಎಂದು ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಕಲಾಲಬಂಡಿಯಲ್ಲಿ ಸೋಮವಾರ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ವಿರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳ ಜಾತ್ರಾ ಮಹೋತ್ಸವ, ಪ್ರಥಮ ವರ್ಷದ ಪುರಾಣ ಮಹಾಮಂಗಳ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರಿಗೆ ಅನೇಕ ಶ್ರೀಗಳ ಹಾಗೂ ರಾಜಕಾರಣಿಗಳ ಹಾರೈಕೆ ಸಿಗುತ್ತದೆ. ಇಲ್ಲಿ ಮದುವೆಯಾಗುವವರು ಭಾಗ್ಯವಂತರು ಎಂದರು.
ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಕಲಾಲಬಂಡಿಯಲ್ಲಿ ಸರ್ವಧರ್ಮವನ್ನು ಆಧರಿಸಿ ಸಾಮೂಹಿಕ ವಿವಾಹ ಮಾಡುವುದು ಉತ್ತಮ ಎಂದರು.ಯುವಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪುರ, ನವದಂಪತಿಗಳಿಗೆ ಶುಭ ಹಾರೈಸಿದರು. ಧರ್ಮ ಗುರು ಖಾಜಾ ಮೈನುದ್ದೀನ್ ಮುಲ್ಲಾ, ಜೀಗೇರಿ ಮಠದ ಶ್ರೀಗಳು ಮತ್ತು ದೋಟಿಹಾಳದ ಚಂದ್ರಶೇಖರ ದೇವರು ಆಶೀರ್ಚನ ನೀಡಿದರು. ಈ ವೇಳೆ ಚಳಗೇರಾ ಗ್ರಾಪಂ ಅಧ್ಯಕ್ಷ ಶರಣಮ್ಮ ಚಂದಾಲಿಂಗಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ್ ಕುಲಕರ್ಣಿ, ದೇವೇಂದ್ರಪ ಬಳೂಟಗಿ, ಶರಣಪ್ಪ ಬಿಂಗಿಕೊಪ್ಪ, ಬುಡನಸಾಬ ಕಲಾದಗಿ, ಬಸಪ್ಪ ಗೊಣ್ಣಾಗರ, ದ್ಯಾಮಣ್ಣ ಮೇಟಿ, ಮುರ್ತುಜಸಾಬ್ ಸೇರಿದಂತೆ ಹಲವರು ಇದ್ದರು. ಶಿಕ್ಷಕ ಚನ್ನಯ್ಯ ಹಿರೇಮಠ ನಿರೂಪಿಸಿದರು. 7 ಜೋಡಿ ನವಜೀವನಕ್ಕೆ ಕಾಲಿಟ್ಟರು.