ಎಲ್ಲ ಸಮಾಜ ಬಾಂಧವರು ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡಬೇಕು ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಶ್ಲಾಘಿಸಿದರು.
ಕುಂದಗೋಳ: ಸಾಮೂಹಿಕ ವಿವಾಹದಿಂದ ದುಂದುವೆಚ್ಚ ಕಡಿವಾಣ ಬೀಳಲಿದೆ. ಮುಸ್ಲಿಂ ಸಮಾಜ ಬಾಂಧವರೂ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಶ್ಲಾಘಿಸಿದರು.
ಇಲ್ಲಿನ ಪ್ರವಾಸಿ ಮಂದಿರದ ಬಳಿ ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಕುಟುಂಬ, ತಾಲೂಕು ಮುಸ್ಲಿಂ ಶಾದಿ ಕಮಿಟಿ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮುಸಲ್ಮಾನ್ ಬಾಂಧವರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲ ಸಮಾಜ ಬಾಂಧವರು ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡಬೇಕು. ಇಲ್ಲಿ ವಿವಾಹವಾದ ಜೋಡಿಗಳು ಮುಂದೆ ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉನ್ನತ ಹುದ್ದೆ ಅಲಂಕರಿಸುವ ಸಾಮರ್ಥ್ಯ ಕಲ್ಪಿಸಿಕೊಡುವಂತೆ ಕರೆ ನೀಡಿದರು.
ಸಾಮಾಜಿಕ ನ್ಯಾಯ
ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಮಾತನಾಡಿ, ಶಿವಳ್ಳಿ ಕುಟುಂಬದ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ, ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುತ್ತಿದೆ. ಶಿವಳ್ಳಿ ಕುಟುಂಬದ ಈ ಸಾಮಾಜಿಕ ಕಾರ್ಯ ಇತರರಿಗೆ ಮಾದರಿ ಎಂದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಜನರು ಧರ್ಮಾಧಾರಿತವಾಗಿ ವಿಭಜನೆಗೊಂಡು ಪರಸ್ಪರ ದ್ವೇಷ ಹರಡುತ್ತ ಹೋದರೆ ದೇಶವೇ ನಾಶವಾಗುತ್ತದೆ. ದೇಶ ಸುಭಿಕ್ಷವಾಗಿ ಮತ್ತು ಉನ್ನತಿ ಸಾಧಿಸಬೇಕಾದರೆ ನಾವೆಲ್ಲರೂ ಜಾತ್ಯತೀತರಾಗಿ ಬಾಳಬೇಕು ಎಂದು ಕರೆ ನೀಡಿ, ಶಿವಳ್ಳಿ ಕುಟುಂಬ ಪ್ರತಿವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಬಡ ವಧು-ವರರಿಗೆ ಉಚಿತವಾಗಿ ವಿವಾಹ ಮಾಡಿಸುತ್ತಿರುವುದು ಉತ್ತಮ ಮತ್ತು ಪುಣ್ಯದ ಕೆಲಸ ಎಂದರು.
ಸಾನ್ನಿಧ್ಯ ವಹಿಸಿದ್ದ ಶಿಥಿಕಂಟೆಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಶ್ರೀಗಳು ಪಾಲ್ಗೊಂಡಿರುವುದು ಭಾವೈಕ್ಯತೆಯ ಸಂಕೇತವಾಗಿದೆ. ದಿ. ಸಿ.ಎಸ್. ಶಿವಳ್ಳಿ ಕುಟುಂಬ ಇಂದಿಗೂ ಜನಪರ ಕೆಲಸ ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀಗಳು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಷಣ್ಮುಖ ಶಿವಳ್ಳಿ ಶಾಸಕರಾಗಿ ಆಯ್ಕೆಯಾಗಿ ಈ ಭಾಗದ ಬಡವರ ನೋವು- ನಲಿವುಗಳಿಗೆ ಸ್ಪಂದಿಸಲಿ ಎಂದು ಹಾರೈಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ, ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿದರು. ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಶಿವಾನಂದ ಮಠದ ಶಿವಾನಂದ ಶ್ರೀಗಳು, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಅರವಿಂದ ಕಟಗಿ, ಚಂದ್ರಶೇಖರ ಜುಟ್ಟಲ್, ಅಡಿವೆಪ್ಪ ಶಿವಳ್ಳಿ, ಅಮರಶಿವ ಶಿವಳ್ಳಿ, ವೆಂಕನಗೌಡ ಪೊಲೀಸಪಾಟೀಲ, ಶಾದಿ ಕಮಿಟಿ ಅಧ್ಯಕ್ಷ ಜಾಫರಸಾಬ ಕ್ಯಾಲಕೊಂಡ, ಸಕ್ರು ಲಮಾಣಿ, ಸಲೀಂ ಕ್ಯಾಲಕೊಂಡ ಸೇರಿ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.