ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನಲ್ಲಿ ಅಸ್ಥಿತ್ವದಲ್ಲಿದ್ದ ಕರುನಾಡ ವಿಜಯ ಸೇನೆಗೆ ತಾಲೂಕಿನ ಬಹುತೇಕ ಸದಸ್ಯರು ಮತ್ತು ಪದಾಧಿಕಾರಿಗಳು ಜಿಲ್ಲಾಧ್ಯಕ್ಷರ ಸರ್ವಾಧಿಕಾರ ಧೋರಣೆಯನ್ನು ಖಂಡಿಸಿ ಸಾಮೂಹಿಕವಾಗಿ ರಾಜೀನಾಮೆ ನೀಡಿರುವುದಾಗಿ ಸೇನೆಯ ಅಧ್ಯಕ್ಷ ಗುಡ್ಡೇನಹಳ್ಳಿ ಗವಿರಂಗಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಅಧ್ಯಕ್ಷರಾಗಿದ್ದ ತಾವರೇಕೆರೆ ಸುರೇಶ್ ರವರ ಬಗ್ಗೆ ಹಲವಾರು ಗುರುತರವಾದ ಆಪಾದನೆಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ತಾಲೂಕು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ತದ ನಂತರ ತಮ್ಮ ಅಧ್ಯಕ್ಷತೆಯಲ್ಲಿ ತಾತ್ಕಾಲಿಕವಾಗಿ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯನವರು ಪುನಃ ಹಿಂದಿನ ಅಧ್ಯಕ್ಷ ತಾವರೇಕೆರೆ ಸುರೇಶ್ ರವರನ್ನೇ ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದ್ದಾರೆ. ಇದು ಅವರ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ.ಪುನಃ ತಾವರೇಕೆರೆ ಸುರೇಶ್ ರವರನ್ನು ನೇಮಿಸುವ ಸಂಧರ್ಭದಲ್ಲಿ ತಾಲೂಕಿನ ಕರುನಾಡ ವಿಜಯ ಸೇನೆಯ ಯಾವೊಬ್ಬ ಸದಸ್ಯರನ್ನೂ ಭೇಟಿ ಮಾಡದೇ, ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ತಾಲೂಕಿಗೆ ಆಗಮಿಸಿ ಸಂಘಟನೆಯಲ್ಲಿ ಆಗಿರುವ ಗೊಂದಲವನ್ನು ಬಗೆಹರಿಸಿ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದ್ದ ಅರುಣ್ ಕೃಷ್ಣಯ್ಯನವರು ಪದಾಧಿಕಾರಿಗಳನ್ನು ನಿರ್ಲಕ್ಷಿಸಿದ್ದರಿಂದ ನಮ್ಮ ಎಲ್ಲಾ ಘಟಕಗಳ ಪದಾಧಿಕಾರಿಗಳು ಸಭೆ ನಡೆಸಿ ಸಾಮೂಹಿಕವಾಗಿ ಕರುನಾಡ ವಿಜಯ ಸೇನೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಹಣ ನೀಡಿಕೆ ಆರೋಪ : ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ತಾಲೂಕಿನ ಗೋಪಾಲಪುರ ನಿವಾಸಿ ಚಿಕ್ಕಣ್ಣ ಎಂಬುವವರು ತಮ್ಮ ಗ್ರಾಮದಲ್ಲಿ ಜಮೀನಿನ ವಿಚಾರವಾಗಿ ನಡೆದ ಗಲಾಟೆ ಪ್ರಕರಣದಲ್ಲಿ ನಮ್ಮಿಂದ ಪೋಲಿಸರು ವಶಪಡಿಸಿಕೊಂಡಿದ್ದ ಮೋಟಾರ್ ಪಂಪ್ ಗಳು ಸೇರಿದಂತೆ ಇತರೆ ಪರಿಕರಗಳನ್ನು ಪೋಲಿಸರಿಂದ ಹಿಂತಿರುಗಿಸಿ ಕೊಡಿಸುವ ಸಲುವಾಗಿ ಕರುನಾಡ ವಿಜಯ ಸೇನೆಯ ಅಧ್ಯಕ್ಷರಾಗಿದ್ದ ತಾವರೇಕೆರೆ ಸುರೇಶ್ ರವರು ನಮ್ಮಿಂದ ೨೫ ಸಾವಿರ ರೂಗಳನ್ನು ಪಡೆದಿದ್ದರು. ಆದರೆ ಅವರು ನಮಗೆ ನಮ್ಮ ಮೋಟಾರ್ ಪಂಪ್ ಸೆಟ್ ಪರಿಕರಗಳನ್ನೂ ಕೊಡಿಸಲಿಲ್ಲ. ಮತ್ತು ಹಣವನ್ನೂ ಹಿಂತಿರುಗಿಸಲಿಲ್ಲ. ಈ ಸಂಬಂಧ ವಿಚಾರಿಸಿದ ವೇಳೆ ತಾವು ಪೋಲಿಸರಿಗೆ ದುಡ್ಡು ಕೊಟ್ಟಿರುವುದಾಗಿ ಸಬೂಬು ಹೇಳಿದರು. ಈ ಸಂಬಂಧ ಸುರೇಶ್ ರವರು ಆಡಿರುವ ಮಾತು ಮತ್ತು ವಿಡಿಯೋಗಳನ್ನು ಸಹ ನಾವು ರೆಕಾರ್ಡ್ ಮಾಡಿದ್ದೇವೆ ಎಂದು ಚಿಕ್ಕಣ್ಣ ದೂರಿದರು. ಈ ಸಂಧರ್ಭದಲ್ಲಿ ಮುಖಂಡರಾದ ಮೋಹನ್, ಮಾರಪ್ಪನಹಳ್ಳಿ ಲೋಕೇಶ್, ಮುನಿಯೂರು ಮಂಜುನಾಥ್, ಆಟೋ ಚಂದ್ರಣ್ಣ, ಅಕ್ಕಳಸಂದ್ರ ಪ್ರಕಾಶ್, ನೂರುಲ್ಲಾ, ಟ್ಯಾಕ್ಸಿ ಘಟಕದ ವೆಂಕಟೇಶ್, ಮಹಿಳಾ ಘಟಕದ ಲಲಿತಮ್ಮ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.