ಭಕ್ತರು ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಸಭೆಗಳಲ್ಲಿ ಶರಣ ಸಂತರ ಹಿತನುಡಿಗಳನ್ನು ಆಲಿಸಿದಾಗ, ಮನಸ್ಸು ಪರಿಶುದ್ಧವಾಗುತ್ತದೆ.
ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದಲ್ಲಿ ಗೋಣಿ ಬಸವೇಶ್ವರ ಜಾತ್ರಾಮಹೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠಮಾನ್ಯಗಳಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವುದರಿಂದ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದು.ಇದೊಂದು ಪುಣ್ಯದ ಕೆಲಸವಾಗಿದ್ದು, ಮದುವೆಯ ನೆಪದಲ್ಲಿ ದುಂದು ವೆಚ್ಚ ಮಾಡಿ ಸಾಕಷ್ಟು ಕುಟುಂಬಗಳು ಸಾಲ ಸುಳಿಯಲ್ಲಿ ಸಿಲುಕಿವೆ, ಇದಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳೇ ಕಡಿವಾಣವಾಗಿದೆ ಎಂದರು.
ಭಕ್ತರು ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಸಭೆಗಳಲ್ಲಿ ಶರಣ ಸಂತರ ಹಿತನುಡಿಗಳನ್ನು ಆಲಿಸಿದಾಗ, ಮನಸ್ಸು ಪರಿಶುದ್ಧವಾಗುತ್ತದೆ. ನಿಮ್ಮ ಮಕ್ಕಳಿಗೆ ಸಂಸ್ಕಾರ, ಉತ್ತಮ ಶಿಕ್ಷಣ ನೀಡಿದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ಅನ್ನದಾನೇಶ್ವರ ಸ್ವಾಮೀಜಿ ನವದಾಂಪತ್ಯಕ್ಕೆ ಕಾಲಿಟ್ಟ ನವ ವಧುವರರಿಗೆ ಆಶೀರ್ವಾದ ನೀಡಿದರು.
ಎಚ್.ಎಂ. ಬಸವರಾಜಯ್ಯ ಸ್ವಾಮಿ ಪೌರಹಿತ್ಯ ವಹಿಸಿದ್ದರು. ದೇವಸ್ಥಾನ ಸಮಿತಿಯ ಸತೀಶ ಅಂಬಿಗೇರ, ಲೋಹಿತ ಕುಮಾರ, ಕೋಟೆಪ್ಪ, ಗಿರಿಯಪ್ಪ, ನೀಲಪ್ಪ, ಚಂದ್ರಪ್ಪ, ನಾಗರಾಜ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 10 ಜೋಡಿ ನವವಧು ವರರು ಹೊಸ ಜೀವನಕ್ಕೆ ಕಾಲಿಟ್ಟರು.
ಇದಕ್ಕೂ ಮುನ್ನ ಪೂರ್ಣ ಕುಂಭೋತ್ಸವ ಕಾರ್ಯಕ್ರಮದಲ್ಲಿ ತುಂಗಭದ್ರಾ ನದಿಗೆ ತರೆಳಿ ಗಂಗಾ ಪೂಜೆ ನೆರವೇರಿಸಿ ನಂತರದಲ್ಲಿ ಗೋಣಿ ಬಸವೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.