ಹೊಸಪೇಟೆ: ವಿಶ್ವ ವಿಖ್ಯಾತ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸೇರಿದ ಸುಮಾರು 42 ವರ್ಷದ ಆನೆ "ಲಕ್ಷ್ಮಿ "ಯ ಸ್ಥಳಾಂತರ ವಿರೋಧಿಸಿ ಸ್ಥಳೀಯ ನಿವಾಸಿಗಳು, ಭಕ್ತರು, ಪ್ರವಾಸಿ ಮಾರ್ಗದರ್ಶಕರು ಮಂಗಳವಾರ ಪ್ರತಿಭಟಿಸಿದರು.
ಪ್ರತಿಭಟನಾಕಾರರ ಮನವಿ ಆಲಿಸಲು, ಮನವಿ ಸ್ವೀಕರಿಸಲು ಯಾವುದೇ ಅಧಿಕಾರಿಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಭಾರಿ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.
ತಹಶೀಲ್ದಾರ್ ಎಂ.ಶೃತಿ, ಹಂಪಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಆಂಜನೇಯ, ಅಡಿಷನಲ್ ಎಸ್ಪಿ ಜಿ.ಮಂಜುನಾಥ, ಹೊಸಪೇಟೆ ಉಪವಿಭಾಗದ ಡಿವೈಎಸ್ಪಿ ಪಿ.ಮುರಳೀಧರ್, ಹಂಪಿ ಸಿಪಿಐ ರಾಜೇಶ್ ಸೇರಿದಂತೆ ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.ಇನ್ನೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ‘ಹಂಪಿಯ ಆನೆ ಲಕ್ಷ್ಮೀಯನ್ನು ಇಲ್ಲೇ ಉಳಿಸಿ’ ಎಂಬ ಅಭಿಯಾನ ಜೋರಾಗಿ ನಡಿಯಿತು.
ಮಾವುತನ ಕುಟುಂಬಸ್ಥರು ಕಣ್ಣೀರು:
ಆನೆಯನ್ನು ಲಾರಿಗೆ ಹತ್ತಿಸಿ ಕರೆದೊಯ್ಯಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಂತೆ, ಅನೇಕ ವರ್ಷಗಳಿಂದ ಆನೆಯನ್ನು ಮಗುವಿನಂತೆ ಸಾಕಿದ್ದ ಮಾವುತನ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು. ಮಾವುತನ ಪತ್ನಿ, ಮಕ್ಕಳು ಆನೆಯ ಸೊಂಡಿಲನ್ನು ಹಿಡಿದು, ಆನೆಯ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅತ್ತರು. “ನಮ್ಮ ಲಕ್ಷ್ಮಿಯನ್ನು ನಮ್ಮಿಂದ ದೂರ ಮಾಡಬೇಡಿ, ಅವಳು ಇಲ್ಲೇ ಇರಲಿ. ಹಂಪಿಯಿಂದ ಬೇರ್ಪಡಿಸಬೇಡಿ " ಎಂದು ಮಾವುತ ರಾಜಣ್ಣ ಗೋಳಾಡಿದರು.