ರೈತರಿಗೆ ದಿಕ್ಕು ತಪ್ಪಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪತ್ರಿಕಾ ಹೇಳಿಕೆ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಸಚಿವರು ಮಾಡುತ್ತಿದ್ದಾರೆ.
ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 2ನೇ ಬೆಳೆಗೆ ನೀರಿಗೆ ಬಿಡುಗಡೆಗೆ ಮಾಡುವಂತೆ ರಾಜ್ಯ ಸರ್ಕಾರದ ಗಮನ ಸೆಳೆದು ನೀರು ಬಿಡುವ ನಿರ್ಧಾರಕ್ಕೆ ಕೈಗೊಳ್ಳುವಂತೆ ಒತ್ತಾಯಿಸಿ ಪಟ್ಟಣದಲ್ಲಿ ವಿವಿಧ ರೈತ ಸಂಘಟನೆ, ರೈತರು ಮತ್ತು ವಿವಿಧ ಪಕ್ಷಗಳು ಸೇರಿ ಪಕ್ಷಾತೀತವಾಗಿ ಬುಧವಾರ ಬೃಹತ್ ಪ್ರತಿಭಟನೆ ಮಾಡಿ ಆಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.
ಇಲ್ಲಿನ ವಿಶೇಷ ಎಪಿಎಂಸಿ ಆವರಣದ ಮುಂದೆ ಜಮಾವಣೆಗೊಂಡ ರೈತರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದರು. ಮೆರವಣಿಗೆ ಆರ್.ಜಿ. ರಸ್ತೆಯಲ್ಲಿ ಸಾಗಿ ಕನಕದಾಸ ವೃತ್ತದವರೆಗೆ ನಡೆಸಿ ಅಲ್ಲಿ ರಸ್ತೆಯಲ್ಲಿ ಕುಳಿತ ನೀರು ಬಿಡುಗಡೆಗೆ ಒತ್ತಾಯಿಸಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು.
ರಸ್ತೆ ಮೇಲೆ ಕುಳಿತ ಪ್ರತಿಭಟನಾಕಾರರ ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ 2 ನೇ ಬೆಳೆಗೆ ನೀರು ಬಿಡುಗಡೆ ಮಾಡಲೇಬೇಕು ಎಂದು ಘೋಷಣೆ ಕೂಗಿದರು.
ನಂತರ ಆಹೋ ರಾತ್ರಿ ಧರಣಿ ಕುಳಿತುಕೊಂಡು ನೀರು ಬಿಡುಗಡೆ ಮಾಡಬೇಕು. ಅಣೆಕಟ್ಟೆಯಲ್ಲಿ ಸುಮಾರು 80 ಟಿಎಂಸಿ ನೀರಿದ್ದು, ರೈತರಿಗಾಗಿ ನೀರು ಬಿಡಲೇಬೇಕೆಂದು ಒತ್ತಾಯಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಮಾತನಾಡಿ, ರೈತರಿಗೆ ದಿಕ್ಕು ತಪ್ಪಿಸುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪತ್ರಿಕಾ ಹೇಳಿಕೆ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಸಚಿವರು ಮಾಡುತ್ತಿದ್ದಾರೆ. ಅಣೆಕಟ್ಟೆಯಲ್ಲಿ ನೀರಿದೆ. ರೈತರಿಗೆ ನೀರಿನ ಅವಶ್ಯಕತೆ ಇದೆ. ಹೀಗಾಗಿ ಮೊದಲು ನೀರು ಬಿಡುವ ಕೆಲಸ ಸರ್ಕಾರ ಮಾಡಲೇಬೇಕೆಂದು ಒತ್ತಾಯಿಸಿದರು.
ನಂತರ ರೈತ ಸಂಘಟನೆಗಳ ಪದಾಧಿಕಾರಿಗಳು ಮತ್ತು ಪ್ರಮುಖ ನಾರಾಯಣ ಈಡಿಗೇರ, ಮಂಜುಳಾ ಪೂಜಾರ, ಮರಿಯಪ್ಪ ಸಾಲೋಣಿ, ಶರಣಪ್ಪ ಕೊತ್ವಾಲ್, ಬಸವರಾಜ ಬಿಲ್ಗಾರ, ಹನುಮಂತಪ್ಪ ಹಂಚಿನಾಳ, ನಾಗರಾಜ ಬಿಲ್ಗಾರ, ಶರಣೆಗೌಡ ಕೇಸರಹಟ್ಟಿ, ಮೋಹನ ಕುರಿ, ಚಂದ್ರಶೇಖರ ಮುಸಾಲಿ, ಬಸವರಾಜ ದೇಸಾಯಿ ಮಾತನಾಡಿ, ಮುಂಗಾರು ಮಳೆಗೆ ಮತ್ತು ಅಕಾಲಿಕ ಮಳೆಗೆ ರೈತರು ಹಾಳಾಗಿದ್ದಾರೆ. ಸರ್ಕಾರ ಬೆಳೆ ಹಾನಿ ಪರಿಹಾರ ನೀಡಿಲ್ಲ. ಹೀಗಾಗಿ ಮೊದಲು 2ನೇ ಬೆಳೆಗೆ ನೀರು ಕೊಟ್ಟು ಸಂಕಷ್ಟದಿಂದ ಪಾರು ಮಾಡಬೇಕೆಂದರು.
ತುಂಗಭದ್ರಾ ಜಲಾಶಯವಿರುವುದು ಮುನಿರಾಬಾದನಲ್ಲಿ. ಬಾಗಿನ ಅರ್ಪಿಸಲು ಮುನಿರಾಬಾದಿನಲ್ಲಿರುವ ಜಲಾಶಯಕ್ಕೆ ಬರುವ ಐಸಿಸಿ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬೆಂಗಳೂರಲ್ಲಿ ಐಸಿಸಿ ಸಭೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿ. ನ.14 ರಂದು ನೀವು ನಡೆಸುವ ಸಭೆಯಲ್ಲಿ ಏನೇ ನಿರ್ಣಯ ಕೈಗೊಂಡರು ನಮಗೆ ಏ.20ರವರೆಗೆ ನೀರು ಬಿಡಬೇಕು. ಇಲ್ಲವಾದಲ್ಲಿ ಇನ್ನು ಮುಂದೆ ನೀವು ತುಂಗಭದ್ರಾ ಜಲಾಶಯ ಭರ್ತಿಯಾದಾಗ ಮುಂದೆ ಯಾರೇ ಮುಖ್ಯಮಂತ್ರಿಯಾಗಲಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಬದಲು ಬೆಂಗಳೂರಿನ ವಿಧಾನಸಭೆಯಲ್ಲಿ ಬಾಗಿನ ಅರ್ಪಿಸಿರಿ ಎಂದು ರೈತ ಸಂಘದ ಅಧ್ಯಕ್ಷ ನಾರಾಯಣ ಈಡಿಗೇರ್ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.