ಕನ್ನಡಪ್ರ ವಾರ್ತೆ, ಶಿರಾಳಕೊಪ್ಪ
ಪಟ್ಟಣದ ವಾಲ್ಮೀಕಿ ಭವನದಲ್ಲಿ ಭಾನುವಾರ ಸಂಜೆ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಜ್ ವಕೀಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿ ಸೆ.೯ರಂದು ಸೋಮವಾರ ಶಿಕಾರಿಪುರ ಶಾಸಕರಿಗೆ ಮನವಿ ಕೊಡ ಬೇಕು ಎಂದು ಸಭೆ ನಿರ್ಣಯ ಕೈಗೊಂಡು ಹಲವಾರು ತೀರ್ಮಾನ ಕೈಗೊಂಡಿತು.
ಟೋಲ್ ಗೇಟ್ ಹೋರಾಟ ಸಮಿತಿ ಸಂಚಾಲಕ ವಕೀಲ ವಿನಯ ಪಾಟೀಲ್ ಮಾತನಾಡಿ, ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಕಳೆದ ತಿಂಗಳು ೨೯ರಂದು ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆ ಮಾಡಿ ನಂತರ ಮನವಿ ಕೊಟ್ಟು ಟೋಲ್ ತೆರವಿಗೆ ೧೫ ದಿನಗಳ ಗಡುವು ನೀಡಿ ಬರಲಾಗಿತ್ತು. ಆದರೆ, ಅವರಿಂದ ಯಾವುದೇ ಉತ್ತರ ಬಾರದಿದ್ದರಿಂದ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚಿಸಿ ಸೆ.೨೬ರಂದು ಶಿಕಾರಿಪುರ ತಾಲ್ಲೂಕಿನ ಬಳಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೋಲ್ಗೇಟ್ ಬಳಿ ಹೋರಾಟ ಮಾಡಬೇಕು ಎಂದು ಸಭೆಯಲ್ಲಿ ಒಟ್ಟಾಭಿಪ್ರಾಯ ವ್ಯಕ್ತವಾಯಿತು.ಸಭೆಯಲ್ಲಿ ಶಿವರಾಜ್ ವಕೀಲರು ಮಾತನಾಡಿ, ಟೋಲ್ಗೇಟ್ ಹೋರಾಟ ಸಮಿತಿ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದೆ. ಈ ಟೋಲ್ ಗಳು ಅನಧಿಕೃತ ಎಂದು ಹೇಳಿ ಟೋಲ್ಗೇಟ್ ತೆಗೆಯುವವರೆಗೆ ಹೋರಾಟ ಮಾಡೋಣ ಎಂದರು.