ಕುಂದಾಪುರ: 240 ಹೆಕ್ಟೇರ್ ಅರಣ್ಯ ಪ್ರದೇಶಗಳಿಗೆ ಅನುಮತಿ ದೊರಕಿದ್ದರೆ ವಾರಾಹಿ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತು. ಮೂಲ ಯೋಜನೆಯ ಬದಲಾವಣೆಯಲ್ಲಿ ಸಂಸದ ರಾಘವೇಂದ್ರ ಅವರ ಕೊಡುಗೆಯೂ ಇದೆ. ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ನಾಯಕರಿಗೆ ಜನಸೇವೆಯಲ್ಲಿ ಬದ್ದತೆ ಇದೆ. ಬಲದಂಡೆ ಯೋಜನೆ ಅನುಷ್ಠಾನವಾಗುವ ವಿಶ್ವಾಸವಿದೆ. ಚಡ್ಡಿ ಹಾಕಿ ದೊಣ್ಣೆ ಬೀಸುವವರಿಗೆ ನೀರಾವರಿ ಬಗ್ಗೆ ಏನು ಗೊತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಕಾಂಗ್ರೆಸ್ ಮುಖಂಡ ಕೆ. ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಂಡ್ಲೂರಿನಿಂದ ಸಿದ್ದಾಪುರದವರೆಗೆ ನಡೆದ ‘ನೀರಿಗಾಗಿ ನಡಿಗೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಹರಿಯುವ 13 ನದಿಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಿಂದ ನೀರಿನ ಬವಣೆ ನೀಗಿಸುವ ಸಾಕಷ್ಟು ಯೋಜನೆಗಳಿಗೆ ಅವಕಾಶವಿದೆ. ಜಾತಿ-ಧರ್ಮಗಳ ಭೇದವಿಲ್ಲದೆ ಮನುಕುಲದ ಸೇವೆ ಮಾಡುತ್ತಿರುವ ಜಿ.ಶಂಕರ್ ಅವರ ಬಗ್ಗೆ ಅಪಸ್ವರದ ಮಾತು ಸರಿಯಲ್ಲ ಎಂದರು.ಪಾದಯಾತ್ರೆಯ ನೇತೃತ್ವ ವಹಿಸಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು, ಏತ ನೀರಾವರಿ ಯೋಜನೆಯ ವಿರುದ್ದ ನಾನೆದ್ದೇನೆ ಎನ್ನುವುದನ್ನು ಸಾಬೀತು ಮಾಡಬೇಕು ಇಲ್ಲವಾದಲ್ಲಿ ಒಂದು ತಿಂಗಳ ಒಳಗೆ ಸಾರ್ವಜನಿಕ ಕ್ಷಮೆ ಕೇಳುವಂತೆ ಬಹಿರಂಗವಾಗಿ ಆಗ್ರಹಿಸಿದ್ದೆ. ಇಲ್ಲಿಯವರೆಗೂ ಮೌನವಾಗಿರುವ ಬಿಜೆಪಿ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಿದೆ ಎಂದರು.ಮಂದಗತಿಯಲ್ಲಿ ಸಾಗುವ ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಲು ಬಿಜೆಪಿ ಸರ್ಕಾರದ ಕೊಡುಗೆ ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ತಿಳಿಸಬೇಕು ಎಂದರು.ನಾನು ಹೇಡಿಯಲ್ಲ: ಹೇಡಿಯಾಗಿ ಓಡಿ ಹೋಗುವ ಜಾಯಮಾನ ನನ್ನದಲ್ಲ. ಉಸಿರಿರುವವರೆಗೂ ಬಡವರ ಹಾಗೂ ಕ್ಷೇತ್ರದ ಜನರ ಪರವಾಗಿ ಸೇವೆ ಮಾಡುತ್ತೇನೆ. ಶಾಸಕನಾಗಿದ್ದಾಗ ಜಾತಿ ತಾರತಮ್ಯ ಮಾಡಿಲ್ಲ. ಎಲ್ಲ ಸಮುದಾಯವರಿಗೂ ದೊರಕಬೇಕಾದಂತಹ ಗೌರವದ ಬಗ್ಗೆ ಪ್ರಯತ್ನಿಸಿದ್ದೇನೆ. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಜಿ. ಶಂಕರ್ ಅವರ ಋಣ ನಮ್ಮ ಮೇಲಿದೆ. ನಾನು ಕೊಟ್ಟಿರುವ ಪತ್ರದಲ್ಲಿರುವ ಅಂಶಗಳಿಗೆ ಪೂರಕವಾಗಿ ತೀರ್ಮಾನಗಳು ಬಂದಲ್ಲಿ ನಿಮ್ಮ ನಿಲುವು ಏನು ಎನ್ನುವುದನ್ನು ಶಾಸಕ ಗಂಟಿಹೊಳೆ ಸ್ಪಷ್ಟಪಡಿಸಬೇಕು ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದರು.
ಡಿಸಿಗೆ ಅಹವಾಲು: ಪ್ರತಿಭಟನಾ ಸ್ಥಳಕ್ಕೆ ಸಂಜೆ ವೇಳೆ ಆಗಮಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಬೇಡಿಕೆಯ ಅಹವಾಲು ಸ್ವೀಕರಿಸಿ, ರೈತರ ಹಾಗೂ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ವ್ಯಕ್ತಪಡಿಸಿದರು. ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ, ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಸಿಪಿಐ ಸಂತೋಷ್ ಕಾಯ್ಕಿಣಿ ಇದ್ದರು.
ನಿಮ್ಮಂತೆ ಬೇರೆ-ಬೇರೆ ಚಪಲ ನನಗಿಲ್ಲ: ವಿಕಾಸ್ ಹೆಗ್ಡೆಗೆ ಮಾತಿನ ಚಪಲ ಎನ್ನುವ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಅವರು ಶಾಸಕರನ್ನು ಮೆಚ್ಚಿಸುವ ಭರದಲ್ಲಿ ಚಪಲತೆ ಬಗ್ಗೆ ಮಾತನಾಡಿದ್ದಾರೆ. ನನಗೆ ಮಾತಿನ ಚಪಲವಿದ್ದಿರಬಹುದು. ಆದರೆ ನಿಮ್ಮಂತೆ ಬೇರೆ-ಬೇರೆ ಚಪಲಗಳು ನನಗಿಲ್ಲ. ವಾರಾಹಿ ಯೋಜನೆ ಬಗ್ಗೆ ನೇರ ಸಂವಾದಕ್ಕೆ ನಾವಂತೂ ತಯಾರಿದ್ದೇವೆ ಎಂದು ವಿಕಾಸ್ ಮಾತಿಗೆ ತಿರುಗೇಟು ನೀಡಿದರು.