ರಟ್ಟೀಹಳ್ಳಿ: ಮಕ್ಕಳಿಗೆ ಗಣಿತ ವಿಷಯವನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಗಣಿತ ಕಲಿಕಾ ಆಂದೋಲನ ಮೌಲ್ಯ ಮಾಪನ ಕಾರ್ಯಕ್ರಮವನ್ನು 4, 5, 6ನೇ ತರಗತಿಯ ಮಕ್ಕಳಿಗೆ ನಡೆಯುತ್ತಿದ್ದು, ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಲು ಇದು ಸಹಕಾರಿಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚೇತನಕುಮಾರ ಬಣಕಾರ ಅವರು ಹೇಳಿದರು.ತಾಲೂಕಿನ ಕುಡಪಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಗಣಿತ ಕಲಿಕಾ ಆಂದೋಲನ ಮೌಲ್ಯ ಮಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿಕ್ಷಕರು ಕಲಿಸಲು ಸಿದ್ಧರಿದ್ದು ಅದನ್ನು ಪರಿಣಾಮಕಾರಿಯಾಗಿ ಮಕ್ಕಳು ಕಲಿಯಲು ಸಿದ್ಧರಾಗಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ಇದರ ಸದ್ಬಳಕೆಮಾಡಿಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆಯಿರಿ ಎಂದು ಶುಭ ಹಾರೈಸಿದರು. ಪ್ರಸ್ತುತ ವರ್ಷದಿಂದ ಕುಡಪಲಿ ಹೆಣ್ಣು ಮಕ್ಕಳ ಶಾಲೆಗೆ ಆಂಗ್ಲ ಮಾಧ್ಯಮ ಶಾಲೆಯ ಜೊತೆಗೆ ಎಲ್ಕೆಜಿ, ಯುಕೆಜಿ ಪ್ರಾರಂಭಿಸಲು ಈಗಾಗಲೇ ಸರ್ಕಾರ ಶಾಲೆಗೆ ಅವಕಾಶ ನೀಡಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಮಕ್ಕಳಲ್ಲಿ ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಜಂಟಿಯಾಗಿ ಗಣಿತ ಕಲಿಕಾ ಆಂದೋಲನ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಿದ್ದು, ಆ ಮೂಲಕ ವಿದ್ಯಾರ್ಥಿಗಳು ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಕಲಿಯಲು ಪ್ರೇರೇಪಿಸಲಾಗುತ್ತದೆ. ಗಣಿತ ಎಂದರೆ ಕಬ್ಬಿಣದ ಕಡಲೆಯಲ್ಲ. ಗಣಿತ ವಿಷಯವನ್ನು ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಬೋಧಿಸುವ ಕುರಿತು ನಿರಂತರ ಪ್ರಯತ್ನಗಳು ನಡೆಯಬೇಕು. ಕಲಿಕಾ ಆಂದೋಲನಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಯೋಜನವಾಗಿದೆ. ಶಿಕ್ಷಣಕ್ಕೆ ಅನುಕೂಲವಾಗುವಂತಹ ಕಿಟ್ಗಳನ್ನು ವಿತರಣೆ ಮಾಡಲಾಗಿದೆ. ಕಿಟ್ನಲ್ಲಿರುವ ಬೋಧನಾ ಕಲಿಕಾ ಸಾಮಗ್ರಿಗಳೊಂದಿಗೆ ತೊಡಗಿಸಿಕೊಳ್ಳವ ಮೂಲಕ ಮಕ್ಕಳ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.ಮುಖ್ಯ ಶಿಕ್ಷಕರಾದ ಎಂ.ಆರ್. ಮರಿಗೌಡ್ರ, ಎಸ್.ಬಿ. ಬಣಕಾರ ಮಾತನಾಡಿದರು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಮಹೇಶಪ್ಪ ಕುಸಗೂರು, ಕರಿಯಪ್ಪ ಚೌಡಕ್ಕನವರ, ತಾಯಂದಿರ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಕುಸಗೂರು, ಉಪಾಧ್ಯಕ್ಷೆ ಲತಾ ಕುಸಗೂರು, ಸುಜತಾ ಮರಿಗೌಡ್ರ, ಶಶಿಕಲಾ ಹೊಸಕುರುಬರ, ಶರಣಪ್ಪ ರಾಮಗಿರಿ, ಮುಖ್ಯ ಶಿಕ್ಷಕರಾದ ಎಂ.ಆರ್. ಮರಿಗೌಡ್ರ, ಎಸ್.ಬಿ.ಬಣಕಾರ, ಜಿ.ಎನ್. ಕಲ್ಡಣ್ಣನವರ, ಎಸ್.ಎಸ್. ದೊಡ್ಡಮನಿ ಸೇರಿದಂತೆ ಎಸ್ಡಿಎಂಸಿಯವರು,ಶಿಕ್ಷಕ-ಶಿಕ್ಷಕಿಯರು, ಮಕ್ಕಳು ಇದ್ದರು.