ರಟ್ಟೀಹಳ್ಳಿ:ಮಠ, ಮಂದಿರಗಳು ಮನುಷ್ಯನ ಶಾಂತಿ, ನೆಮ್ಮದಿ ಜೀವನ ನಡೆಸಲು ಅತ್ಯಂತ ಮಹತ್ವ ಪಾತ್ರ ವಹಿಸುತ್ತವೆ. ಆ ನಿಟ್ಟಿನಲ್ಲಿ ನೂತವಾಗಿ ನಿರ್ಮಾಣವಾದ ಮಾವಿನತೋಪಿ ಗ್ರಾಮದ ಸಿದ್ಧಾರೂಢರ ಮಠ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಮಾವಿನತೋಪಿ ಗ್ರಾಮದ ಸಿದ್ಧಾರೂಢ ಮಠಕ್ಕೆ ನೂತನ ಪೀಠಾಧಿಪತಿಗಳ ನಿಯೋಜನೆ ಹಾಗೂ ಪ್ರಥಮ ವೇದಾಂತ ಪರಿಷತ್ತಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನ ನೀಡಿದ್ದು ಆ ನಿಟ್ಟಿನಲ್ಲಿ ಮಠಗಳು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮಠಗಳ ಕೊಡುಗೆ ಅಪಾರ ಎಂದರು.ಗ್ರಾಮದಲ್ಲಿ ನಿರ್ಮಾಣವಾದ ಮಠಕ್ಕೆ ಮುಂದಿನ ದಿನಗಳಲ್ಲಿ ಸರಕಾರದ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಆ ಮೂಲಕ ಗ್ರಾಮದ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಚೇತನಾ ಶಕ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಇಂದಿನ ದಿನಗಳಲ್ಲಿ ಜಾತಿಗೊಂದು ಮಠಗಳು ಹುಟ್ಟಿಕೊಂಡು ಮಠಗಳು ರಾಜಕೀಯ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಖೇದಕರ ಸಂಗತಿ. ಆದರೆ, ಸಿದ್ಧಾರೂಢ ಮಠ ಜಾತ್ಯತೀತವಾಗಿದ್ದು, ಸರ್ವ ಜನಾಂಗದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿವೆ ಎಂದರು.ಸಿದ್ಧರೂಢಸ್ವಾಮಿ ಟ್ರಸ್ಟ ಕಮೀಟಿ ಅಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ ಬೇವಿನಹಳ್ಳಿ ಮಾತನಾಡಿ ಪ್ರತಿಯೋಬ್ಬ ಮನುಷ್ಯ ಹುಟ್ಟಿನ ಸಾರ್ಥಕತೆಯಾಗಲು ತಮ್ಮ ಆದಾಯದ ತಕ್ಕ ಮಟ್ಟಿನ ಉಳಿತಾಯದ ಹಣವನ್ನು ಸಮಾಜದ ಅಭಿವೃದ್ದಿ ಹಾಗೂ ಮಠ ಮಂದಿರಗಳ ಉದ್ದಾರಕ್ಕಾಗಿ ಅಳಿಲು ಸೇವೆ ಮಾಡಿ ಜೀವನದ ಸಾರ್ಥಕತೆ ಹೊಂದೋಣ ಎಂದರು.
ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಪೀಠಾಧಿಪತಿ ಶಿವಲಿಂಗ ಶಿವಾಚಾರ್ಯ ಮಹಸಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಬಡಾಸಂಗಾಪುರದ ಸಿದ್ಧಾರೂಢ ಮಠದ ಶ್ರೀ ಹನುಮಾರೂಢ ಸ್ವಾಮಿಗಳು, ಮಠದ ನೂತನ ಪೀಠಾಧಿಪತಿ ಸತ್ಯಪ್ರಮೋದೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ವೇದಮೂರ್ತಿ ಕಳ್ಳಿಮಠ, ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ದೊಡ್ಡಮನಿ, ಪ್ರಕಾಶ ಬನ್ನಿಕೋಡ, ನಿಂಗಪ್ಪ ಕಡೂರ, ಎ.ಎಸ್.ಐ ಅಶೋಕ ಕೊಂಡ್ಲಿ, ಶಿವಪ್ಪ ಬನ್ನಿಕೋಡ, ಸೋಮಪ್ಪ ಕಣಗೊಟಗಿ, ಸುಶೀಲಾ ದೊಡ್ಡಮನಿ, ರವೀಂದ್ರ ಕಣಗೊಟಗಿ, ನಾಗಪ್ಪ ಬನ್ನಿಕೋಡ, ವೀರಪ್ಪ ಗೋಣಿಮಠ, ಶಿವಪ್ಪ ದಂಡಗಿಹಳ್ಳಿ ಹಾಗೂ ಮಠದ ಟ್ರಸ್ಟ್ ಕಮಿಟಿ ಸದಸ್ಯರು, ಗ್ರಾಮಸ್ಥರು ಇದ್ದರು.