ಕನ್ನಡಪ್ರಭ ವಾರ್ತೆ ನಾಗಮಂಗಲ
ಸಚಿವ ಎನ್.ಚಲುವರಾಯಸ್ವಾಮಿ ಅವರ ಕಟ್ಟಾ ಬೆಂಬಲಿಗ ತಾಲೂಕಿನ ಜೋಡಿಚಿಕ್ಕನಹಳ್ಳಿ ಆನಂದ ಅವರೇ ಭವಿಷ್ಯದಲ್ಲಿ ಚಲುವರಾಯಸ್ವಾಮಿ ಸಿಎಂ ಆಗಲಿ ಎಂದು ಹರಕೆ ಹೊತ್ತು ಚಲುವರಾಯಸ್ವಾಮಿ ಫೋಟೋ ಹಿಡಿದುಕೊಂಡು ತಮ್ಮ ಹದಿನೈದು ಮಂದಿ ಸ್ನೇಹಿತರ ಜೊತೆಗೂಡಿ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವ ಅಪ್ಪಟ ಅಭಿಮಾನಿ.
ಪಟ್ಟಣದ ಟಿ.ಬಿ.ಬಡಾವಣೆಯ ಕೆಲ ಸ್ನೇಹಿತರು ಸೇರಿದಂತೆ ತಾಲೂಕಿನ ಲಕ್ಕೇಗೌಡನಕೊಪ್ಪಲು ಮತ್ತು ದೊಡ್ಡಚಿಕ್ಕನಹಳ್ಳಿಯ ಹಲವು ಯುವಕರೊಂದಿಗೆ ಕಳೆದ ಬುಧವಾರದಿಂದ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವ ಆನಂದ್ ನ.15ರಂದು ತಿರುಪತಿ ತಲುಪಿ ಇಷ್ಟಾರ್ಥ ನೆರವೇರಿಸುವಂತೆ ತಿಮ್ಮಪ್ಪನಲ್ಲಿ ಪ್ರಾರ್ಥಿಸಲಿದ್ದಾರೆಂದು ತಿಳಿದುಬಂದಿದೆ.ಪಾದಯಾತ್ರೆಯಲ್ಲಿದ್ದ ಆನಂದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕನ್ನಡ ಪ್ರಭಕ್ಕೆ ಪ್ರತಿಕ್ರಿಯಿಸಿ, ಕಳೆದ 1998ರಿಂದಲೂ ನಾನು ಎನ್.ಚಲುವರಾಯಸ್ವಾಮಿ ಅವರ ಅಭಿಮಾನಿಯಾಗಿದ್ದೇನೆ. ಅವರು ಶಾಸಕ, ಸಂಸದ ಮತ್ತು ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಾಡಿರುವ ಅನೇಕ ಶಾಶ್ವತ ಅಭಿವೃದ್ಧಿ ಕಾರ್ಯಗಳು ಸಾಕ್ಷಿಗುಡ್ಡೆಗಳಾಗಿ ಉಳಿದಿವೆ. ಈಗ ಕೃಷಿ ಸಚಿವರಾಗಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿರುವುದರಿಂದ ರೈತರು ಮತ್ತು ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.
ಹಾಗಾಗಿ ಮುಂದೊಂದು ದಿನ ಭವಿಷ್ಯದಲ್ಲಿ ಎನ್.ಚಲುವರಾಯಸ್ವಾಮಿ ಮುಖ್ಯಮಂತ್ರಿಯಾಗಬೇಕು. ಅಲ್ಲಿವರೆಗೂ ಅವರ ಆಯಸ್ಸು, ಆರೋಗ್ಯ, ರಾಜಕೀಯ ಶ್ರೇಯಸ್ಸು ಮತ್ತು ಜನಸೇವೆ ಮಾಡುವ ಶಕ್ತಿ ಕರುಣಿಸಲೆಂದು ಹರಕೆ ಹೊತ್ತು ಕಳೆದ ನಾಲ್ಕು ವರ್ಷದಿಂದ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.