ತಾಲೂಕಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
ಕನ್ನಡಪ್ರಭ ವಾರ್ತೆ ಕುಮಟಾಒಡೆಯುವ ಮನಸ್ಸುಗಳನ್ನು ದೂರವಿಟ್ಟು ಒಳ್ಳೆಯ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕು. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರೊಳಗೊಂದಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಜಿ. ನಾಯ್ಕ ಹೇಳಿದರು.
ಹಿರೇಗುತ್ತಿಯಲ್ಲಿ ನಡೆದ ಕುಮಟಾ ತಾಲೂಕಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದರು.ಸಾಹಿತ್ಯ ವಿದ್ಯಾರ್ಥಿಗಳಿಗೆ ಮುಟ್ಟಬೇಕು. ಮುಂದಿನ ತಲೆಮಾರಿಗೆ ಕನ್ನಡ ನಾಡು- ನುಡಿ, ಸಾಹಿತ್ಯದ ಸೊಬಗನ್ನು ವರ್ಗಾಯಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದರು.
ಹಿರಿಯ ಪತ್ರಕರ್ತ ಗಂಗಾಧರ್ ಹಿರೇಗುತ್ತಿ ಮಾತನಾಡಿ, ನನ್ನ ಬರವಣಿಗೆಗೆ ಬೀರಣ್ಣ ನಾಯಕರ ಸ್ಪೂರ್ತಿ ಇದೆ. ಹಿರೇಗುತ್ತಿಯ ಮೊದಲ ಬರಹಗಾರ ಬೀರಣ್ಣ ನಾಯಕರಾಗಿದ್ದರು. ಈ ನೆಲದಲ್ಲಿ ಸಂಘಟನಾ ಶಕ್ತಿ ಇದೆ ಎಂದರು. ಸಾಹಿತ್ಯ ಸಮ್ಮೇಳನ ಎಲ್ಲರ ಮನಸ್ಸನ್ನು ಒಂದಾಗಿಸುವ ಮೂಲಕ ವಿದ್ಯಾರ್ಥಿಗಳ ಬದುಕಿಗೆ ನೆರವಾಗಲಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯ ಸಮ್ಮೇಳನ ಹಬ್ಬದ ರೂಪದಲ್ಲಿ ನಡೆದಿದೆ. ಕಸಾಪ ಘಟಕದ ಜೊತೆ ಹಿರೇಗುತ್ತಿಯ ಜನರ ಸಹಭಾಗಿತ್ವದೊಂದಿಗೆ ಸಮ್ಮೇಳನ ಯಶಸ್ವಿಯಾಗಿದೆ ಎಂದರು.ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೊನಿ ಮಾತನಾಡಿದರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್. ನಾಯ್ಕ, ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಸಮ್ಮೇಳನ ಅಧ್ಯಕ್ಷ ಬೀರಣ್ಣ ನಾಯಕ, ಪ್ರಾಂಶುಪಾಲ ರಾಜೀವ ಕೋನಳ್ಳಿ, ಮೋಹನ ನಾಯಕ, ಉದ್ದಂಡ ಗಾಂವ್ಕರ, ಆಕಾಶ ನಾಯಕ, ಪಿ.ಎಂ. ಮುಕ್ರಿ ಮುಂತಾದವರಿದ್ದರು.ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಆಜ್ಞಾ ನಾಯಕ, ಪ್ರೊ. ಜಿ.ಡಿ. ಭಟ್, ಸಾಹಿತಿ ಪ್ರವೀಣ ಮಹಾಲೆ, ಉಲ್ಲಾಸ್ ಪೀಟರ್, ಎಂ.ಕೆ. ಪಟಗಾರ, ಅಣ್ಣಪ್ಪ ಸಿರ್ಸಿಕರ್, ಮಾರುತಿ ನಾಯ್ಕ, ಜಿ.ಸಿ. ಪಟಗಾರ, ಸಂಜೀವ ನಾಯಕ, ನೀಲಕಂಠ ನಾಯಕ, ಶ್ರೀಧರ ನಾಯಕ ಅವರನ್ನು ಪರಿಷತ್ತಿನ ಪರವಾಗಿ ಗೌರವಿಸಲಾಯಿತು.
ಆರಂಭದಲ್ಲಿ ಕಸಾಪ ಅಧ್ಯಕ್ಷ ಪ್ರಮೋದ ನಾಯ್ಕ ಸ್ವಾಗತಿಸಿದರೆ, ಯೋಗೇಶ ಪಟಗಾರ ನಿರ್ಣಯ ಮಂಡಿಸಿದರು. ಮಮತಾ ನಾಯ್ಕ ನಿರೂಪಿಸಿದರು.