ಕನ್ನಡಪ್ರಭ ವಾರ್ತೆ ಕೊಪ್ಪಳ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ಅವರು, ಪ್ರಭುತ್ವದ ಪರವಾಗಿ, ಜನಪರವಾಗಿರುವ ಎರಡೂ ವಾದಗಳು ಮೊದಲಿನಿಂದಲೂ ಇವೆ. ಜನಮುಖಿಯಾಗಿರುವ ಮನಸ್ಸು ಸೇರಿ ಪ್ರಕೃತಿಯಲ್ಲಿ ಚಿಗುರುವಂತೆ ಮೇ ತಿಂಗಳಲ್ಲಿ ಮೇಳ ನಡೆಸಲಾಗುತ್ತಿದೆ. ದುಡಿಯುವ ವರ್ಗಗಳ ಪರವಾಗಿ ಮೇ ಮೇಳ ನಡೆಯಲಿದೆ ಎಂದರು.
ಮೇ ಸಾಹಿತ್ಯ ಮೇಳವು ಜನರಿಗಾಗಿ, ಜನರಿಂದಲೇ ನಡೆಯುವ ಸಮ್ಮೇಳನವಾಗಿದೆ. ಮೇ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ರಾಜಕೀಯ ನಾಯಕರ ಹಣ ಬಳಕೆ ಮಾಡಲ್ಲ, ಬದಲಾಗಿ ಸಾಮಾನ್ಯರ ಸಹಾಯಧನದಿಂದಲೇ ಸಮ್ಮೇಳನ ನಡೆಸಲಾಗುತ್ತದೆ. ಪ್ರತಿಯೊಂದು ಪಾರದರ್ಶಕವಾಗಿರುತ್ತದೆ. ಪ್ರತಿ ಸಮ್ಮೇಳನದಲ್ಲಿಯೂ ಪೈಸಾ ಟೂ ಪೈಸಾ ಲೆಕ್ಕ ನೀಡಲಾಗುತ್ತದೆ. ಕೊಟ್ಟಿರುವ ದೇಣಿಗೆ ಯಾವುದಕ್ಕೆ ಬಳಕೆಯಾಯಿತು ಎನ್ನುವ ಮಾಹಿತಿ ನೀಡಲಾಗುತ್ತದೆ ಎಂದರು.ದಾಸೋಹದ ಪದ್ಧತಿಯಿಂದ ಮೇಳ ನಡೆಯುತ್ತಿದೆ. ಮೇಳ ಮುಕ್ತವಾಗಿದ್ದು, ಯಾರು ಬೇಕಾದರೂ ಭಾಗವಹಿಸಬಹುದು. ಪ್ರತಿನಿಧಿಯಾಗಿರುವವರಿಗೆ ಮೇಳದ ಕಿಟ್ ನೀಡಲಾಗುವುದು. ಅವರು ಮಾತ್ರ ನೊಂದಣಿ ಮಾಡಿಕೊಳ್ಳಬಹುದು. ಸಾರ್ವಜನಿಕರು ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದರು.
ಮೇಳದಲ್ಲಿ ನಾಡು- ನುಡಿಗಾಗಿ ದುಡಿದಿರುವ ಸವಿರಾಜ ಆನಂದೂರರಿಗೆ ವಿಭಾ ಸಾಹಿತ್ಯ ಪ್ರಶಸ್ತಿ, ಇಂದೂಧರ ಹೊನ್ನಾಪುರರಿಗೆ ಚಂದ್ರಶೇಖರ ಹೊಸಮನಿಯವರ ಅಂಬೇಡ್ಕರ್ ಮಾರ್ಗಿ ಪತ್ರಿಕಾ ಪ್ರಶಸ್ತಿ, ಹುಚ್ಚಮ್ಮ ಚೌದ್ರಿಯವರಿಗೆ ಸಮಾಜಮುಖಿ ಪ್ರಶಸ್ತಿ, ಮೈಸೂರಿನ ಜನಾರ್ದನ ಜನ್ನಿಯವರಿಗೆ ಪಂಚಪ್ಪ ಸಮುದಾಯ ಮಾರ್ಗಿ, ಮಾಧವಿ ಭಂಡಾರಿಯವರಿಗೆ ನವಲಕಲ್ ಬ್ರಹನ್ಮಠದ ಶಾಂತವೀರಮ್ಮ ಕಥಾ ಪ್ರಶಸ್ತಿ, ಶಿವಾಜಿ ಚಿತ್ರಪ್ಪ ಕಾಗಣೇಕರರಿಗೆ ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿ, ಎಸ್.ಆರ್. ಹಿರೇಮಠರಿಗೆ ಬಂಡ್ರಿ ನರಸಪ್ಪ ಶ್ರಮ ಜೀವಿ ಪ್ರಶಸ್ತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಸವರಾಜ ಶೀಲವಂತರ, ಟಿ. ರತ್ನಾಕರ, ಅಲ್ಲಮಪ್ರಭು ಬೆಟ್ಟದೂರು ಹಾಗೂ ಮಹಾಂತೇಶ ಮಲ್ಲನಗೌಡರ ಇದ್ದರು.