ಗೇಣು ಜಾಗ ಕೊಟ್ರ ನಿಮಗೆ ಪುಣ್ಯ ಬರತೈತಿ: ಕನಿಕರದಿಂದ ಬೇಡಿಕೊಂಡ ಕೊರವರ ದೇವಕ್ಕ

KannadaprabhaNewsNetwork |  
Published : Sep 07, 2025, 01:01 AM IST
ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ನಾಡ ಕಚೇರಿ ಮುಂಭಾಗದಲ್ಲಿ ಜನರ ಆಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ, ಹಿರೇಹಡಗಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ಎಂ.ಎಸ್‌.ದಿವಾಕರ. | Kannada Prabha

ಸಾರಾಂಶ

ಮೂವತ್ತು ವರ್ಷದಿಂದ ಸರ್ಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಜೀವ್ನ ಮಾಡ್ತಾ ಇದ್ದಿವಿ. ಪಂಚಾಯ್ತಿಗೆ ಹೋಗಿ ಅರ್ಜಿ ಕೊಟ್ಟು ಸುಸ್ತಾಗಿದೆ, ನಮ್ಮೂರಿಗೆ ಬಂದೀರಿ ಗೇಣು ಜಾಗ ಕೊಟ್ರ ನಿಮಗೆ ಪುಣ್ಯ ಬರತೈತಿ ಎಂದು ಕೊರವರ ದೇವಕ್ಕ ಜಿಲ್ಲಾಧಿಕಾರಿ ಮುಂದೆ ನೋವು ತೊಡಿಕೊಂಡ ಪರಿ ಇದು.

ಹೋಬಳಿ ಮಟ್ಟದಲ್ಲಿ ಅರ್ಜಿ ಸ್ವೀಕಾರ । ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಮೂವತ್ತು ವರ್ಷದಿಂದ ಸರ್ಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಜೀವ್ನ ಮಾಡ್ತಾ ಇದ್ದಿವಿ. ಪಂಚಾಯ್ತಿಗೆ ಹೋಗಿ ಅರ್ಜಿ ಕೊಟ್ಟು ಸುಸ್ತಾಗಿದೆ, ನಮ್ಮೂರಿಗೆ ಬಂದೀರಿ ಗೇಣು ಜಾಗ ಕೊಟ್ರ ನಿಮಗೆ ಪುಣ್ಯ ಬರತೈತಿ ಎಂದು ಕೊರವರ ದೇವಕ್ಕ ಜಿಲ್ಲಾಧಿಕಾರಿ ಮುಂದೆ ನೋವು ತೊಡಿಕೊಂಡ ಪರಿ ಇದು.

ಹೌದು, ತಾಲೂಕಿನ ಹಿರೇಹಡಗಲಿ ಹೋಬಳಿ ಕೇಂದ್ರದ ನಾಡ ಕಚೇರಿಯಲ್ಲಿ ಜನರ ಕುಂದು-ಕೊರತೆ ಆಲಿಸಲು ಬಂದಿದ್ದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಮುಂದೆ, ಹಿರೇಹಡಗಲಿ ಗ್ರಾಮದ ಮಹಿಳೆ ಕೊರವರ ದೇವಕ್ಕ, ಮನೆಯಲ್ಲಿ ಅನಾರೋಗ್ಯದಿಂದ ಮಗ ಬಳಲುತ್ತಿದ್ದಾನೆ, ಗಂಡ ತೀರಿ ಹೋಗಿದ್ದಾನೆ, ನಮಗೆ ದಿಕ್ಕೇ ಕಾಣುತ್ತಿಲ್ಲ, ಗ್ರಾಮದ ಸರ್ಕಾರಿ ಜಾಗ ಮಂಜೂರು ಮಾಡಿ ಎಂದು ಕನಿಕರದಿಂದ ಬೇಡಿಕೊಂಡಳು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ, ಹಿರೇಹಡಗಲಿ ಪಂಚಾಯಿತಿಯಲ್ಲಿ ಈಗಾಗಲೇ ನಿವೇಶನ ರಹಿತ ಹಾಗೂ ಮನೆ ಇಲ್ಲದವರ ಪಟ್ಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಿಮಗೆ ನಿವೇಶನ ನೀಡುತ್ತೇವೆಂದು ಭರವಸೆ ನೀಡಿದರು.

ಹಿರೇಹಡಗಲಿ ಗ್ರಾಮ ಠಾಣಾ ವ್ಯಾಪ್ತಿಗೆ ಹೊಂದಿಕೊಂಡ ಬಡಾವಣೆಗಳನ್ನು ಕಂದಾಯ ಉಪ ಗ್ರಾಮಗಳನ್ನಾಗಿ ಮಾಡಲು ಅವಕಾಶವಿದೆ. ಇದನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಇಂತಹ ಪ್ರಕರಣಗಳು ಇರುವ ಕಡೆಗಳಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರತಿಯೊಬ್ಬರೂ ಸಮಸ್ಯೆ ಪಟ್ಟಿ ಹಿಡಿದುಕೊಂಡು, ಜಿಲ್ಲಾ ಕೇಂದ್ರಕ್ಕೆ ಬರುತ್ತಾರೆ, ನಾವೇ ಹಳ್ಳಿಗಳಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸುತ್ತಿದ್ದೇವೆ. ಕೆಲ ಅರ್ಜಿಗಳನ್ನು ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿ ವಿಲೇವಾರಿ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ನಿವೇಶನ ಮತ್ತು ಸರ್ಕಾರಿ ಮನೆಗಳ ಅರ್ಜಿ ಸಲ್ಲಿಕೆಯಾಗಿವೆ. ಉಳಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧ ಪಟ್ಟ ಅರ್ಜಿಗಳನ್ನು ರವಾನೆ ಮಾಡಲಾಗುತ್ತದೆ ಎಂದರು.

ಹಿರೇಹಡಗಲಿ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ಕೆರೆ ಪಕ್ಕದ ರೈತರ ಪಟ್ಟಾ ಜಮೀನಿನಲ್ಲಿ ಬಸಿ ನೀರು ಬರುತ್ತಿದೆ. ಇದರಿಂದ ರೈತರು ಕೃಷಿ ಚಟುವಟಿಕೆ ಮಾಡಲು ಬರುತ್ತಿಲ್ಲ. ಯಾವುದೇ ಬೆಳೆ ಬೆಳೆಯಲು ಆಗುತ್ತಿಲ್ಲ, ಕೆರೆ ದಂಡೆ ಪಟ್ಟದಲ್ಲಿರುವ ಕಾಲುವೆಗಳು ದುರಸ್ತಿಗೆ ಬಂದರೂ ಅವುಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ, ಬಸಿ ನೀರು ಹರಿದು ಹೋಗಲು ಸರಿಯಾದ ಜಾಗ ಮಾಡಬೇಕೆಂದು ಹೋರಾಟಗಾರ ಚಂದ್ರಶೇಖರ ದೊಡ್ಮನಿ ಮನವಿ ಮಾಡಿದರು.

ಅಂಗೂರು ಗ್ರಾಮದ ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆ ಹಳ್ಳ ಹಿಡಿದು ಹೋಗಿದೆ. ಹೆಸರಿಗೆ ಯೋಜನೆಯಾಗಿದ್ದು, ಈವರೆಗೂ ಒಂದು ಹನಿ ನೀರು ಕಾಲುವೆಗೆ ಹರಿಯುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ, ಜತೆಗೆ ಭೂ ಸ್ವಾಧೀನ ಮಾಡಿಕೊಂಡ ಭೂಮಿ ಪರಿಹಾರ ನೀಡಿಲ್ಲ. ಈ ಕುರಿತು ಕೂಡಲೇ ಕ್ರಮ ವಹಿಸಿ, ರೈತರ ಜಮೀನುಗಳಿಗೆ ನೀರುಣಿಸಬೇಕೆಂದು ಒತ್ತಾಯಿಸಿದರು.

ಈ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ನೇರ ಖರೀದಿ ಮೂಲಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆಂದು ಡಿಸಿ ಭರವಸೆ ನೀಡಿದರು.

ಹಿರೇಹಡಗಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ, ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವ ಜನರೇ ಹೆಚ್ಚು ಆದರೆ, ಇಲ್ಲಿ ಸಾಕಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿನ ಸೌಲಭ್ಯ ಮತ್ತು ವೈದ್ಯರ ಶ್ರಮದಿಂದ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ, ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಬೆಡ್‌ಗಳನ್ನು ಜಾಗ ಇದ್ದ ಕಡೆಗಳಲ್ಲಿ ಹಾಕಲಾಗಿತ್ತು. ಇದಕ್ಕೆ ಜಾಗದ ಕೊರತೆ ಇದೆ. ಪಕ್ಕದಲ್ಲಿರುವ ಕಟ್ಟಡ ಕಾಮಗಾರಿಯನ್ನು ಬೇಗನೆ ಮುಗಿಸಿ ಕೊಡಿ ಎಂದು ವೈದ್ಯರು ಡಿಸಿ ಕೇಳಿಕೊಂಡಾಗ, ಸ್ಥಳದಲ್ಲೇ ಇದ್ದ ಕೆಆರ್‌ಐಡಿಎಲ್‌ ಎಇಇಗೆ ಸೂಚನೆ ನೀಡಿದರು.

ತುಂಗಭದ್ರಾ ನದಿ ತೀರದ ಮರಳಿನ ಸ್ಟಾಕ್‌ಯಾರ್ಡ್‌ಗಳ ಟೆಂಡರ್‌ ಆನ್‌ಲೈನ್‌ನಲ್ಲಿ ಕರೆಯಲಾಗಿದೆ. ಶೀಘ್ರದಲ್ಲೇ ಪ್ರಕ್ರಿಯೆ ಮುಗಿಸಿ ಕ್ರಮಕ್ಕೆ ಮುಂದಾಗುತ್ತೇವೆಂದು ಹೇಳಿದರು.

ಈ ಸಂದರ್ಭ ಹರಪನಹಳ್ಳಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್‌ ಜಿ.ಸಂತೋಷಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''