ಮಾಸಿಕ ಶಿವಾನುಭವ, ಏಕೀಕರಣ ಯೋಧರ ಯಶೋಗಾಥೆ
ನರಗುಂದ: ನಮ್ಮ ನಾಡಿನ ಸಂಸ್ಕೃತಿ ಮತ್ತು ಹಿರಿಮೆಯನ್ನು ಸಾರುವ ಶಾಸನಗಳ, ತಾಡೋಲೆಗಳ ರಕ್ಷಣೆಯಾಗಬೇಕು ಮತ್ತು ಅವುಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಮೌಢ್ಯಕ್ಕೆ ಬೆನ್ನು ಹತ್ತಿದ ಜನರು ನಮ್ಮ ನಾಡಿನ ಮಣ್ಣಿನ ಸೊಗಡನ್ನು ಹಾಗೂ ಪೂರ್ವಜರ ಇತಿಹಾಸವನ್ನು ಹೇಳುವ ಶಾಸನಗಳನ್ನು ನಾಶಗೊಳಿಸುತ್ತಿರುವುದು ನಮ್ಮ ಸಂಸ್ಕೃತಿಯನ್ನು ಮರೆಮಾಚಿದಂತೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆಯ, ಶ್ರೀ ದೊರೆಸ್ವಾಮಿ ವಿರಕ್ತಮಠ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೫೩ನೇ ಮಾಸಿಕ ಶಿವಾನುಭವ ಹಾಗೂ ಏಕೀಕರಣ ಯೋಧರ ಯಶೋಗಾಥೆ-೬ ಕಾರ್ಯಕ್ರಮದಲ್ಲಿ ಮಾತನಾಡಿ, ಒಬ್ಬ ಆಂಗ್ಲ ಅಧಿಕಾರಿ ಕರ್ನಾಟಕದ ಶಾಸನಗಳನ್ನು ರಕ್ಷಿಸುವುದರ ಜೊತೆಗೆ ಮಕ್ಕಳಿಗಾಗಿ ಕನ್ನಡ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ ಕೀರ್ತಿ ಬಿ. ಎಲ್ .ರೈಸ್ರಿಗೆ ಸಲ್ಲುತ್ತದೆ. ಕನ್ನಡಿಗರಾದ ನಮ್ಮಲ್ಲಿಯೇ ಕನ್ನಡಾಭಿಮಾನ ದೂರವಾಗುತ್ತಿರುವುದು ಕಳವಳದ ಸಂಗತಿ. ಭಾಷೆ, ನೆಲ-ಜಲ ವಿಷಯದಲ್ಲಿ ಕನ್ನಡಿಗರು ಜಾಗೃತರಾಗಬೇಕಿದೆ ಎಂದು ತಿಳಿಸಿದರು.ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಸಾಲಿಮಠ ಮಾತನಾಡಿ, ಶಾಸನಗಳ ಪಿತಾಮಹ ಬಿ .ಎಲ್. ರೈಸ್ ವರ ಕುರಿತು ಉಪನ್ಯಾಸದ ಮೂಲಕ ಹಳೆಗನ್ನಡದಲ್ಲಿದ್ದ ಶಾಸನಗಳನ್ನು ವಿದ್ವಾಂಸರ ಸಹಾಯದಿಂದ ಅಧ್ಯಯನ ಮಾಡಿ ಕನ್ನಡ ಶಾಸನಗಳನ್ನು ರಕ್ಷಿಸಿದ ಕೀರ್ತಿ ರೈಸ್ ಅವರಿಗೆ ಸಲ್ಲುತ್ತದೆ. ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದರು.
ಕನ್ನಡಕ್ಕೆ ದುಡಿದ ವಿದೇಶಿಯರಲ್ಲಿ ಅಗ್ರಗಣ್ಯರಾದ ರೈಸ್ ಅವರು ಕನ್ನಡದಲ್ಲಿಯೇ ಮಾತನಾಡಿ, ಕನ್ನಡ ಪ್ರೇಮವನ್ನು ಮರೆದಿದ್ದರು. ಇವರ ಶಾಸನಗಳ ಅಧ್ಯಯನದ ಆಧಾರದ ಮೇಲೆ ಬ್ರಿಟಿಷ್ ಸರ್ಕಾರ ಹಂಟರ್ ಶಿಕ್ಷಣ ಆಯೋಗವನ್ನು ರಚಿಸಿ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಹೊಸ ಮೈಲುಗಲ್ಲನ್ನು ಸ್ಥಾಪಿಸಿದರು. ಶಾಸನಗಳ ಸಂಶೋಧನೆಯನ್ನು ಮೂಲಧಾರವಾಗಿಸಿಕೊಂಡು ಕನ್ನಡದ ನೈಜ ಇತಿಹಾಸವನ್ನು ತಿಳಿಸಿದ ರೈಸ್ರು ಈ ನಾಡನವರು ಎಂದೂ ಮರೆಯದ ಚೇತನ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ನಡೆಸುವ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರಾಥಮಿಕ ವಿಭಾಗದಲ್ಲಿ ರಡ್ಡೇರ ನಾಗನೂರಿನ ಸುರೇಶ ಬನ್ನಿಗಿಡದ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಕಣಕಿಕೊಪ್ಪ ಸರಕಾರಿ ಪ್ರೌಢಶಾಲೆಯ ಎಸ್ .ಎಲ್. ಮರಿಗೌಡ್ರ ಅವರನ್ನು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ನಬಿಸಾಬ್ ಕಿಲ್ಲೇದಾರ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷ ಕಾವ್ಯಾ ಹುಂಬಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.
ಬಾಬು ಯಲಿಗಾರ, ಇಸ್ಮಾಯಿಲ್ ಹಜರತ್ನವರ, ವಿರೂಪಾಕ್ಷಪ್ಪ ಮನೇನಕೊಪ್ಪ, ಪರಮ್ಮ ಐನಾಪೂರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.